ಕೇಸರಿ ಜೆರ್ಸಿ  
ದೇಶ

FIH ವಿಶ್ವಕಪ್ ನಲ್ಲಿ ನೀಲಿ ಬದಲು ಕೇಸರಿ ಜೆರ್ಸಿ; ಹಾಕಿ ಇಂಡಿಯಾ ನಿರ್ಧಾರಕ್ಕೆ ವ್ಯಾಪಕ ಟೀಕೆ

ಹಾಕಿ ಇಂಡಿಯಾ ಪ್ರಕಾರ, ಕೇಸರಿ ಬಣ್ಣವು ಧೈರ್ಯ, ತ್ಯಾಗ ಮತ್ತು ವಿಜಯದ ಸಂಕೇತವಾಗಿದೆ. ಭಾರತದ ರಾಷ್ಟ್ರಧ್ವಜ ಮತ್ತು ಉದಯಿಸುತ್ತಿರುವ ಸೂರ್ಯನಿಂದ ಸ್ಫೂರ್ತಿ ಪಡೆದ ಈ ವಿನ್ಯಾಸವು ಹೊಸ ಆರಂಭವನ್ನು ಪ್ರತಿಬಿಂಬಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ಮುಂದಿನ ತಿಂಗಳು ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ ಎಫ್‌ಐಹೆಚ್ ಹಾಕಿ ವಿಶ್ವಕಪ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಸಾಂಪ್ರದಾಯಿಕ ನೀಲಿ ಜೆರ್ಸಿಯ ಬದಲು ಕೇಸರಿ ಬಣ್ಣದ ಜೆರ್ಸಿ ಧರಿಸಲಿವೆ ಎಂದು ಹಾಕಿ ಇಂಡಿಯಾ ಘೋಷಿಸಿದೆ. ವಿಶ್ವಕಪ್ ಪಂದ್ಯಾವಳಿ ಆಗಸ್ಟ್‌ 15ರಿಂದ 30ರವರೆಗೆ ನಡೆಯಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿರುವ ಹಾಕಿ ಇಂಡಿಯಾ, ಅದರ ವಿನ್ಯಾಸ ಮತ್ತು ಬಣ್ಣವು ಭಾರತದ ಹೆಮ್ಮೆ ಹಾಗೂ ಕಥೆಯನ್ನು ಹೇಳುವಂತೆ ರೂಪಿಸಲಾಗಿದೆ ಎಂದು ತಿಳಿಸಿದೆ.

ಹಾಕಿ ಇಂಡಿಯಾ ಪ್ರಕಾರ, ಕೇಸರಿ ಬಣ್ಣವು ಧೈರ್ಯ, ತ್ಯಾಗ ಮತ್ತು ವಿಜಯದ ಸಂಕೇತವಾಗಿದೆ.

ಭಾರತದ ರಾಷ್ಟ್ರಧ್ವಜ ಮತ್ತು ಉದಯಿಸುತ್ತಿರುವ ಸೂರ್ಯನಿಂದ ಸ್ಫೂರ್ತಿ ಪಡೆದ ಈ ವಿನ್ಯಾಸವು ಹೊಸ ಆರಂಭವನ್ನು ಪ್ರತಿಬಿಂಬಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ಜೆರ್ಸಿಯಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮಂಡಲ (Mandala) ವಿನ್ಯಾಸಗಳನ್ನು ಬಳಸಲಾಗಿದೆ. ಅಲ್ಲದೆ, ಗಾಢ ನೀಲಿ ಬಣ್ಣದ ಅಲಂಕಾರಗಳು ಅಶೋಕ ಚಕ್ರದಿಂದ ಪ್ರೇರಿತವಾಗಿದ್ದು, ಪ್ರಗತಿ, ಶಾಂತಿ ಮತ್ತು ಏಕಾಗ್ರತೆಯನ್ನು ಸೂಚಿಸುತ್ತವೆ ಎಂದು ಹಾಕಿ ಇಂಡಿಯಾ ವಿವರಿಸಿದೆ.

ಜೆರ್ಸಿಯ ಎದೆಯ ಭಾಗದಲ್ಲಿರುವ ವಿನ್ಯಾಸವು ಸುದರ್ಶನ ಚಕ್ರದ ಆಧುನಿಕ ರೂಪವಾಗಿದ್ದು, ಶಕ್ತಿ, ಏಕತೆ ಮತ್ತು ಚಲನಶೀಲತೆಯ ಸಂಕೇತವಾಗಿದೆ. ಭುಜಗಳು ಮತ್ತು ಬದಿಗಳಲ್ಲಿ ತ್ರಿವರ್ಣದ ಪಟ್ಟಿಗಳನ್ನು ಅಳವಡಿಸಲಾಗಿದ್ದು, ಅದು ರಾಷ್ಟ್ರಾಭಿಮಾನವನ್ನು ಬಲಪಡಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಜೆರ್ಸಿಯ ಮುಂಭಾಗದಲ್ಲಿ 'INDIA' ಎಂಬ ಪದವನ್ನು ದೇವನಾಗರಿ ಶೈಲಿಯ ಅಕ್ಷರಗಳಲ್ಲಿ ಬರೆಯಲಾಗಿದ್ದು, ಇದು ಭಾಷಾ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸುವ ಉದ್ದೇಶದಿಂದ ಎಂದು ಹಾಕಿ ಇಂಡಿಯಾ ತಿಳಿಸಿದೆ.

ಹೊಸ ಜೆರ್ಸಿಯ ವಿನ್ಯಾಸವು 'ಏಕ್ ಭಾರತ್, ಶ್ರೇಷ್ಠ ಭಾರತ್' ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ," ಎಂದು ಜೆರ್ಸಿ ಬಿಡುಗಡೆ ವಿಡಿಯೊದಲ್ಲಿ ಹೇಳಲಾಗಿದೆ. ಕೇಸರಿ ಜೆರ್ಸಿಯ ಜೊತೆಗೆ ಇದೇ ವಿನ್ಯಾಸದ ಬಿಳಿ ಬಣ್ಣದ ಜೆರ್ಸಿಯೂ ಭಾರತೀಯ ತಂಡದ ಕಿಟ್‌ನಲ್ಲಿ ಇರಲಿದೆ.

ವಿರೋಧ ವ್ಯಕ್ತಪಡಿಸಿದ ಪ್ರಿಯಾಂಕಾ ಗಾಂಧಿ

ನೀಲಿ ಬಣ್ಣದ ಬದಲಿಗೆ ಕೇಸರಿ ಜೆರ್ಸಿ ಪರಿಚಯಿಸಿರುವ ನಿರ್ಧಾರವನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಈ ದೇಶದ ಗುರುತು ಅಹಿಂಸೆ, ಸತ್ಯ ಮತ್ತು ಸಹೋದರತ್ವದ ಮೇಲೆ ನಿರ್ಮಾಣವಾಗಿದೆ. ಈ ಮೌಲ್ಯಗಳನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಸಮವಸ್ತ್ರ ಬದಲಿಸಿದರೂ ಅಥವಾ ಶಿಕ್ಷಣ ನೀತಿಯ ಮೂಲಕ ಇತಿಹಾಸವನ್ನು ಮರು ಬರೆಯಲು ಪ್ರಯತ್ನಿಸಿದರೂ ದೇಶದ ಆತ್ಮವನ್ನು ಬದಲಾಯಿಸಲು ಸಾಧ್ಯವಿಲ್ಲ," ಎಂದು ಅವರು ಹೇಳಿದ್ದಾರೆ.

ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿತ್ತು. ದೇಶದ ಆತ್ಮ ಅಹಿಂಸೆ, ಸತ್ಯ ಮತ್ತು ಸಹೋದರತ್ವದಲ್ಲಿದೆ. ಅದನ್ನು ಆರ್‌ಎಸ್‌ಎಸ್ ಆಗಲಿ ಅಥವಾ ಇನ್ನಾರೇ ಆಗಲಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ವಿರೇನ್ ರಸ್ಕಿನ್ಹಾ ಅಸಮಾಧಾನ

ಭಾರತದ ಮಾಜಿ ಹಾಕಿ ನಾಯಕ ವಿರೇನ್ ರಸ್ಕಿನ್ಹಾ ಕೂಡ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. "ಹಾಕಿ ಇಂಡಿಯಾ ಹಲವು ಉತ್ತಮ ಕೆಲಸಗಳನ್ನು ಮಾಡಿದೆ. ಆದರೆ ಈ ನಿರ್ಧಾರ ನಿರಾಶಾದಾಯಕವಾಗಿದೆ. ಭಾರತೀಯ ತಂಡದ ಪರಂಪರೆ ಮತ್ತು ಗುರುತು ಯಾವಾಗಲೂ ನೀಲಿ ಜೆರ್ಸಿಯೊಂದಿಗೇ ಸಂಬಂಧ ಹೊಂದಿದೆ. ನಾನು ಹಲವು ವರ್ಷಗಳ ಕಾಲ ಹೆಮ್ಮೆಯಿಂದ ನೀಲಿ ಜೆರ್ಸಿ ಧರಿಸಿದ್ದೇನೆ. ಅಭಿಮಾನಿಗಳು ಕೂಡ ಭಾರತವನ್ನು ನೀಲಿ ಜೆರ್ಸಿಯಲ್ಲೇ ನೋಡಲು ಬಯಸುತ್ತಾರೆ. ಕೇಸರಿ ಬಣ್ಣದ ಹಿಂದಿನ ತರ್ಕವೇನು? ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

"ನನ್ನ ಸರಳ ಹಾಗೂ ವಿನಮ್ರ ಅಭಿಪ್ರಾಯವು ತಂಡದ ಹೆಮ್ಮೆ, ಗುರುತು ಮತ್ತು ಪರಂಪರೆ ಕುರಿತಷ್ಟೇ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಾಕಿ ಇಂಡಿಯಾದ ಸಮರ್ಥನೆ

ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಹಾಕಿ ಇಂಡಿಯಾ, ಕೇಸರಿ ಬಣ್ಣವು ರಾಷ್ಟ್ರಧ್ವಜದ ಭಾಗವಾಗಿರುವುದರಿಂದ ಅದನ್ನು ಆಯ್ಕೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದೆ.

ಇದಲ್ಲದೆ, ಜೆರ್ಸಿಯ ಬಣ್ಣ ಬದಲಾವಣೆ ಹೊಸದೇನಲ್ಲ ಎಂದು ಹೇಳಿರುವ ಸಂಸ್ಥೆ, 2014ರ ಎಫ್‌ಐಎಚ್‌ ವಿಶ್ವಕಪ್‌ನಲ್ಲಿ ಹಳದಿ ಬಣ್ಣದ ಜೆರ್ಸಿ ಹಾಗೂ 2018ರ ವಿಶ್ವಕಪ್‌ನಲ್ಲಿ ಆಕಾಶ ನೀಲಿ ಬಣ್ಣದ ಜೆರ್ಸಿಯನ್ನು ಬಳಸಲಾಗಿತ್ತು ಎಂದು ನೆನಪಿಸಿದೆ.

ಪ್ರಸ್ತುತ ಕೇಸರಿ ಬಣ್ಣದ ಆಯ್ಕೆಯನ್ನು ತರಬೇತುದಾರರು ಮತ್ತು ಆಟಗಾರರಿಂದ ಬಂದ ತಾಂತ್ರಿಕ ಸಲಹೆಗಳ ಜೊತೆಗೆ, ರಾಷ್ಟ್ರಧ್ವಜದಲ್ಲಿರುವ ಬಣ್ಣದ ಸಾಂಕೇತಿಕ ಮಹತ್ವವನ್ನು ಪರಿಗಣಿಸಿ ಮಾಡಲಾಗಿದೆ ಎಂದು ಹಾಕಿ ಇಂಡಿಯಾ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕಕ್ಕೆ CWRC ನಂತರ CWMA ಶಾಕ್; ತಮಿಳುನಾಡಿಗೆ 3500 ಕ್ಯೂಸೆಕ್ ನೀರು ಹರಿಸುವಂತೆ ಕಟ್ಟುನಿಟ್ಟಿನ ಸೂಚನೆ

ಮಂಡ್ಯದಲ್ಲಿ ಕಾವೇರಿ ಪ್ರತಿಭಟನೆ ತೀವ್ರ: ಸಿಎಂ ವಿಜಯ್ ನಟನೆಯ 'ಜನ ನಾಯಗನ್' ಪ್ರದರ್ಶನ ಸ್ಥಗಿತ!

Bengaluru Horror: ಮದುವೆಯಾದ ಮೂರೇ ತಿಂಗಳಿಗೆ ಪತ್ನಿ ಕೊಂದು ಬೆಡ್‌ಶೀಟ್‌ನಲ್ಲಿ ಶವ ಸುತ್ತಿಟ್ಟು ಪತಿ ಎಸ್ಕೇಪ್!

'ಪ್ರಧಾನಿ, ಗೃಹ ಸಚಿವರಿಗೆ ಮತ್ತೆ ವಿದ್ಯಾರ್ಥಿಗಳೇ ಪಾಠ ಕಲಿಸುತ್ತಾರೆ'; ರಾಜ್ಯಸಭೆಯಲ್ಲಿ Mallikarjun Kharge ವಾಗ್ದಾಳಿ

ನೀಟ್ ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಕೆ ವಿವಾದ: RAF ಮದ್ದುಗುಂಡು ದಾಖಲೆ ಸಂರಕ್ಷಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ