ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಪತ್ರಕರ್ತರೊಬ್ಬರ ಪ್ರಶ್ನೆಗೆ ಗರಂ ಆಗಿದ್ದು, 'ನೀವೇನ್ ಬಿಜೆಪಿಯವ್ರಾ?' ಎಂದು ಮರು ಪ್ರಶ್ನೆ ಕೇಳಿದೆ ಘಟನೆ ನಡೆದಿದೆ.
ಜುಲೈ 20ರಂದು ವಿದ್ಯಾರ್ಥಿಗಳ 'ಸಂಸದ್ ಚಲೋ' ಪ್ರತಿಭಟನೆ ವೇಳೆ ಗಾಯಗೊಂಡಿದ್ದ ದೆಹಲಿ ಪೊಲೀಸರ ಕುಟುಂಬ ಸದಸ್ಯರು ನಡೆಸಿದ ಸುದ್ದಿಗೋಷ್ಠಿ ಕುರಿತು ಪ್ರಶ್ನಿಸಿದ ಪತ್ರಕರ್ತನಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
"ಆಪ್ ಬಿಜೆಪಿ ಕೆ ಹೋ ಕ್ಯಾ? (ನೀವು ಬಿಜೆಪಿಯವರಾ?)" ಎಂದು ಮರು ಪ್ರಶ್ನಿಸುವ ಮೂಲಕ ರಾಹುಲ್ ಉತ್ತರಿಸಿದ ಘಟನೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು.
ಗಾಯಗೊಂಡವರಲ್ಲಿ ಸಹಾಯಕ ಪೊಲೀಸ್ ಆಯುಕ್ತ (ACP), ಉಪನಿರೀಕ್ಷಕ (SI) ಸೇರಿದಂತೆ ಹಲವರು ಸೇರಿದ್ದಾರೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿಯೊಬ್ಬರ ಪತ್ನಿ ಮಾತನಾಡಿ, ಜುಲೈ 20ರ ರಾತ್ರಿ ಪತಿ ಗಾಯಗೊಂಡ ಸ್ಥಿತಿಯಲ್ಲಿ ಮನೆಗೆ ಬಂದ ಕ್ಷಣ ತಮ್ಮ ಕುಟುಂಬವನ್ನು ಇಂದಿಗೂ ಕಾಡುತ್ತಿದೆ ಎಂದು ಭಾವುಕರಾದರು.
"ಆ ರಾತ್ರಿ ಅವರು ತೀವ್ರ ಗಾಯಗೊಂಡು ಮನೆಗೆ ಬಂದ ದೃಶ್ಯ ನನ್ನ ಎರಡು ವರ್ಷದ ಮಗಳು ಹಾಗೂ ನನ್ನ ಪಾಲಿಗೆ ಅತ್ಯಂತ ನೋವಿನ ಮತ್ತು ಆಘಾತದ ಕ್ಷಣವಾಗಿತ್ತು. ಇಲ್ಲಿ ಇತರ ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರೊಂದಿಗೆ ಸೇರಿ ನಮ್ಮ ನೋವನ್ನು ಹಂಚಿಕೊಳ್ಳಲು ಬಂದಿದ್ದೇವೆ," ಎಂದು ಅವರು ಹೇಳಿದರು.
'ಸಾಮೂಹಿಕ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿತು'
ಗಾಯಗೊಂಡ ದೆಹಲಿ ಪೊಲೀಸ್ ಉಪನಿರೀಕ್ಷಕರ ಪುತ್ರಿ, ಪ್ರತಿಭಟನೆಯ ವೇಳೆ ತಮ್ಮ ತಂದೆಯ ಮೇಲೆ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಿದರು.
ಭಾರತೀಯ ನೌಕಾಪಡೆಯ ಮಾಜಿ ಮೆರೈನ್ ಕಮಾಂಡೋ ಆಗಿದ್ದ ತಮ್ಮ ತಂದೆಯನ್ನು ಜಂತರ್ ಮಂತರ್ ವೇದಿಕೆಯ ಸಮೀಪ ದುಷ್ಕರ್ಮಿಗಳ ಗುಂಪು ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದು, ಬಹುತೇಕ ಕೊಲೆ ಮಾಡಲು ಯತ್ನಿಸಿತ್ತು ಎಂದು ಅವರು ಆರೋಪಿಸಿದರು.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬಳಿಕ ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಮಾರು ನಾಲ್ಕು ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ತಿಳಿಸಿದರು.
ಇನ್ನೊಬ್ಬ ಗಾಯಗೊಂಡ ಅಧಿಕಾರಿಯ ಕುಟುಂಬ ಸದಸ್ಯರು, "ಇದು ವಿದ್ಯಾರ್ಥಿಗಳ ಪ್ರತಿಭಟನೆ ಆಗಿರಲಿಲ್ಲ. ಕೆಲ ಕಿಡಿಗೇಡಿಗಳು ವಿದ್ಯಾರ್ಥಿಗಳ ಹೋರಾಟಕ್ಕೆ ಕಳಂಕ ತಂದು, ಸಂಸತ್ತಿನ ಘನತೆಗೆ ಧಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ," ಎಂದು ಆರೋಪಿಸಿದರು. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆದರೆ ನಿಜವಾದ ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಗಳನ್ನು ಪರಿಶೀಲಿಸಿ ಅವರಿಗೆ ನ್ಯಾಯ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ರಾಹುಲ್ ಆಗ್ರಹ
ಈ ಬೆಳವಣಿಗೆಗೆ ಒಂದು ದಿನ ಮೊದಲು ರಾಹುಲ್ ಗಾಂಧಿ, ವಿದ್ಯಾರ್ಥಿಗಳ ವಿರುದ್ಧ ನಡೆದಿದ್ದ ಎನ್ನಲಾದ ಪೊಲೀಸ್ ಕ್ರಮದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿರುವ ಸ್ವತಂತ್ರ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಜುಲೈ 20ರಂದು ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ನಡೆದಿರುವ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದರು.
ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್
ಈ ನಡುವೆ ಪ್ರತಿಭಟನೆ ಕುರಿತ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಲೋಕಸಭೆಯಲ್ಲಿ ಜುಲೈ 29ರಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಸಂಬಂಧ ಬಿಜೆಪಿ ಸಂಸದ ಅನುರಾಗ್ ಸಿಂಗ್ ಠಾಕೂರ್ ಅವರು ಅವರ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.
"ಪ್ರತಿಭಟನಾಕಾರರ ಮೇಲೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಜಿತೇಂದ್ರ ಸಿಂಗ್ ಸದನವನ್ನು ತಪ್ಪುದಾರಿಗೆಳೆದಿದ್ದಾರೆ. ಪೆಲೆಟ್ ಗನ್ ಹಾಗೂ ಎಕೆ-47 ಬಳಸಿರುವುದಕ್ಕೆ ರಾಹುಲ್ ಗಾಂಧಿ ಸಾಕ್ಷ್ಯವನ್ನೇ ತೋರಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸುತ್ತೇವೆ" ಎಂದು ವೇಣುಗೋಪಾಲ್ ಹೇಳಿದರು.
ಇದೇ ವೇಳೆ, ರಾಹುಲ್ ಗಾಂಧಿ ವಿರುದ್ಧದ ಹಕ್ಕುಚ್ಯುತಿ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ನಮ್ಮ ಸಂಸದರು ಸಮರ್ಥರಾಗಿದ್ದಾರೆ. ಅವರು ಲೋಕಸಭೆಯಲ್ಲೇ ಇದನ್ನು ಎದುರಿಸಲಿದ್ದಾರೆ" ಎಂದು ಹೇಳಿದರು.