ಚೆನ್ನೈ: ಕರ್ನಾಟಕದಲ್ಲಿ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಬಿಜೆಪಿ ತೊರೆದು ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪಿಸುತ್ತಾರೆ ಎಂಬ ವರದಿಗಳ ಮಧ್ಯೆ, ಸೋಮವಾರ ಚೆನ್ನೈನಿಂದ ದೆಹಲಿಗೆ ಹಾರಿದ್ದಾರೆ.
ಸ್ವಲ್ಪ ಸಮಯದ ಹಿಂದೆ, ಅಣ್ಣಾಮಲೈ ಅವರು ರಾಷ್ಟ್ರ ರಾಜಧಾನಿಗೆ ತೆರಳಲು ವಿಮಾನ ಹತ್ತುವುದಕ್ಕಾಗಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಗಮನಾರ್ಹ ವಿಚಾರವೆಂದರೆ, ಅವರು ವಿಮಾನ ನಿಲ್ದಾಣಕ್ಕೆ ಬಂದ ಕಾರಿನಲ್ಲಿ ಬಿಜೆಪಿ ಧ್ವಜವನ್ನು ಪ್ರದರ್ಶಿಸಲಿಲ್ಲ. ಇದು ಕೇಸರಿ ಪಕ್ಷ ತೊರೆಯುತ್ತಾರೆ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಬಿಜೆಪಿ ತೊರೆದು ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ಯೋಜಿಸುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ ಅವರು, "ದಯವಿಟ್ಟು ಎರಡು ದಿನ ಕಾಯಿರಿ. ನಾವು ಎರಡು ದಿನಗಳಲ್ಲಿ ಕುಳಿತು ಮಾತನಾಡುತ್ತೇವೆ" ಎಂದಷ್ಟೇ ಹೇಳಿದರು.
ಕಳೆದ ಕೆಲವು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಮುಖಗಳಲ್ಲಿ ಒಬ್ಬರಾದ ಅಣ್ಣಾಮಲೈ, ತಮ್ಮ ಭವಿಷ್ಯದ ಕುರಿತ ವರದಿಗಳ ಬಗ್ಗೆ ಮೌನವಾಗಿದ್ದಾರೆ. ಅವುಗಳನ್ನು ದೃಢೀಕರಿಸುವುದಾಗಲಿ ಅಥವಾ ನಿರಾಕರಿಸುವುದಾಗಲಿ ಮಾಡುತ್ತಿಲ್ಲ. ಅವರ ಇತ್ತೀಚಿನ ಹೇಳಿಕೆಗಳು ಕುತೂಹಲವನ್ನು ಹೆಚ್ಚಿಸಿವೆ.