ನವದೆಹಲಿ: 12 ನೇ ತರಗತಿಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿಯ (CBSE) ಉನ್ನತ ನಾಯಕತ್ವವನ್ನು ಪುನರ್ ರಚಿಸಿದೆ.
CBSE ಅಧ್ಯಕ್ಷ ರಾಹುಲ್ ಸಿಂಗ್ ಮತ್ತು ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರನ್ನು ವರ್ಗಾವಣೆ ಮಾಡಿ ಹಿರಿಯ ಅಧಿಕಾರಿಗಳಾದ ಲೋಖಂಡೆ ಪ್ರಶಾಂತ್ ಸೀತಾರಾಮ್ ಮತ್ತು ವರುಣ್ ಭಾರದ್ವಾಜ್ ಅವರನ್ನು ಅವರ ಸ್ಥಾನದಲ್ಲಿ ನೇಮಿಸಲಾಗಿದೆ.
ಸಿಬಿಎಸ್ ಇ ಅಧ್ಯಕ್ಷ ಹುದ್ದೆಗೆ ನೇಮಗೊಂಡಿರುವ AGMUT ಕೇಡರ್ನ 2001 ರ ಬ್ಯಾಚ್ನ ಐಎಎಸ್ ಅಧಿಕಾರಿ ಲೋಖಂಡೆ ಪ್ರಶಾಂತ್ ಸೀತಾರಾಮ್ ಪ್ರಸ್ತುತ ಗೃಹ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಶಿಕ್ಷಣ ಸಚಿವಾಲಯದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ 2008 ರ ಬ್ಯಾಚ್ನ ಭಾರತೀಯ ಮಾಹಿತಿ ಸೇವೆ (IIS) ಅಧಿಕಾರಿ ವರುಣ್ ಭಾರದ್ವಾಜ್ ಅವರನ್ನು ಹೊಸ ಸಿಬಿಎಸ್ಇ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ನೇಮಕಾತಿ ಸಮಿತಿ (ACC) ಬದಲಾವಣೆಗಳನ್ನು ಅನುಮೋದಿಸಿದೆ. ಈ ವರೆಗೂ ಸಿಬಿಎಸ್ ಇ ಅಧ್ಯಕ್ಷರಾಗಿದ್ದ ರಾಹುಲ್ ಸಿಂಗ್ ಅವರನ್ನು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
ಆದರೆ ಹಿಮಾಂಶು ಗುಪ್ತಾ ಅವರನ್ನು ಆಡಳಿತಾತ್ಮಕ ಆಧಾರದ ಮೇಲೆ ಗೃಹ ಸಚಿವಾಲಯದ ಅವರ ಮಾತೃ ಕೇಡರ್ಗೆ "ವಿಸ್ತೃತ ಕೂಲಿಂಗ್-ಆಫ್" ಷರತ್ತಿನೊಂದಿಗೆ ಅಕಾಲಿಕವಾಗಿ ವಾಪಸ್ ಕಳುಹಿಸಲಾಗಿದೆ, ಇದರಿಂದಾಗಿ ಅವರು ಡಿಸೆಂಬರ್ 12, 2030 ರ ನಂತರವೇ ಮತ್ತೊಂದು ಕೇಂದ್ರ ನಿಯೋಜನೆಗೆ ಅರ್ಹರಾಗಿರುತ್ತಾರೆ.