ನವದೆಹಲಿ: ಒಟ್ಟು 10 ರಾಜ್ಯಗಳ 24 ಸ್ಥಾನಗಳಿಗೆ ಜೂನ್ 18 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಗುರುವಾರ 11 ಅಭ್ಯರ್ಥಿಗಳನ್ನು ಘೋಷಿಸಿದೆ.
ಒಡಿಶಾದ ಉಪಚುನಾವಣೆಗೆ, ಇತ್ತೀಚಿಗೆ ಬಿಜು ಜನತಾದಳ(ಬಿಜೆಡಿ) ತೊರೆದು ಬಿಜೆಪಿ ಸೇರಿದ್ದ ದೇಬಾಶಿಶ್ ಸಮಂತಾರಾಯ್ ಅವರನ್ನು ಕೇಸರಿ ಪಕ್ಷ ಕಣಕ್ಕಿಳಿಸಿದೆ.
ಇಬ್ಬರು ಪ್ರಮುಖ ಮಹಿಳಾ ನಾಯಕಿಯರಿಗೂ ಬಿಜೆಪಿ ಅವಕಾಶ ನೀಡಿದ್ದು, ಬಿಜೆಪಿಯ ಮಣಿಪುರ ಅಧ್ಯಕ್ಷೆ ಎ ಶಾರದಾ ದೇವಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಲ್ಕಾ ಗುರ್ಜರ್ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಗ್ ಮತ್ತು ರಾಜಸ್ಥಾನದ ಪ್ರಬಲ ನಾಯಕ ಸತೀಶ್ ಪೂನಿಯಾ ಕೂಡ ಪಟ್ಟಿಯಲ್ಲಿದ್ದಾರೆ.
ಅರುಣಾಚಲ ಪ್ರದೇಶದಿಂದ ತಾಯ್ ತಾಗಾಕ್ ಅವರನ್ನು, ಗುಜರಾತ್ ನಲ್ಲಿ ರಾಜುಭಾಯಿ ಶುಕ್ಲಾ, ಮುಖೇಶ್ ಭಾಯಿ ರಾಠ್ವಾ, ಮಾನಸಿಂಗ್ ಪರ್ಮಾರ್ ಮತ್ತು ಜಿತೇಂದ್ರ ಮೇಘಜೀಬಾಯಿ ಕಂಜಾರಿಯಾ ಅವರನ್ನು ಕಣಕ್ಕಿಳಿಸಿದೆ.
ರಾಜಸ್ಥಾನದಿಂದ ಅಲ್ಕಾ ಗುರ್ಜರ್ ಮತ್ತು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್ ಪೂನಿಯಾ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ಪಕ್ಷ ಮತ್ತು ಅದರ ಸಂಘಟನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಪಕ್ಷದ ಬದ್ಧತೆಯನ್ನು ಈ ಆಯ್ಕೆಗಳು ಒತ್ತಿಹೇಳುತ್ತವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ಪ್ರಸ್ತುತ 113 ಸದಸ್ಯರನ್ನು ಹೊಂದಿದ್ದು, ಎನ್ಡಿಎ 148 ಸದಸ್ಯರನ್ನು ಹೊಂದಿದೆ.