ಚೆನ್ನೈ: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅಣ್ಣಾಮಲೈ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪನೆಯ ಘೋಷಣೆ ಮಾಡಿದ್ದಾರೆ. ಅಣ್ಣಾಮಲೈ ಪಕ್ಷದಿಂದ ದೂರವಾಗುತ್ತಿದ್ದಂತೇ, ತಮಿಳುನಾಡು ಬಿಜೆಪಿ ನಾಯಕರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ಮಾತನಾಡಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್, "ಅಣ್ಣಾಮಲೈ ಬಿಜೆಪಿ ತೊರೆದಿರುವುದರಿಂದ ಪಕ್ಷಕ್ಕೆ ಏನೂ ನಷ್ಟವಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ತನ್ನ ಯೋಜನೆಗಳೊಂದಿಗೆ ಮುಂದುವರೆಯಲಿದೆ" ಎಂದು ಹೇಳಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿರುವ ಅಣ್ಣಾಮಲೈ ಅವರಿಂದ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪನೆ ಆಗಲಿದೆ. ಆದರೆ ಅದಕ್ಕೂ ಮೊದಲು ಅವರು ರಾಜ್ಯದಲ್ಲಿ ಸಾಮಾಜಿಕ ಚಳುವಳಿಯನ್ನು ಆರಂಭಿಸಲಿದಾರೆ.
ನಾವು ಮೊದಲು ತಮಿಳುನಾಡಿನಲ್ಲಿ ಜನಚಳುವಳಿಯನ್ನು ಸಂಘಟಿಸುತ್ತೇವೆ. ಆ ಬಳಿಕ ಪಕ್ಷ ಸಂಘಟನೆ ಮಾಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ" ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂಬ ಆರೋಪವನ್ನು ನಾಗೇಂದ್ರನ್ ತಿರಸ್ಕರಿಸಿದರು, ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶಕ್ಕೆ ಭೇಟಿ ನೀಡಿದಾಗಲೆಲ್ಲಾ ಅವರು ತಮಿಳುನಾಡು, ಅದರ ಪರಂಪರೆ ಮತ್ತು ಶ್ರೇಷ್ಠತೆಯ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.
ಬಿಜೆಪಿ ತೊರೆದು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸುವ ಅಣ್ಣಾಮಲೈ ಅವರ ನಿರ್ಧಾರವನ್ನು ಎಂಡಿಎಂಕೆ ನಾಯಕ ದುರೈ ವೈಕೊ ಶ್ಲಾಘಿಸಿದರು. "ನನ್ನ ಸಹೋದರ ಅಣ್ಣಾಮಲೈ ಅವರಿಗೆ ನಾನು ಎಲ್ಲಾ ಯಶಸ್ಸನ್ನು ಬಯಸುತ್ತೇನೆ ಮತ್ತು ಅವರು ದ್ರಾವಿಡ ಸಿದ್ಧಾಂತವನ್ನು ಅನುಸರಿಸುತ್ತಾರೆ ಎಂದು ಭಾವಿಸುತ್ತೇನೆ" ಎಂದು ಅವರು ವರದಿಗಾರರಿಗೆ ತಿಳಿಸಿದರು.