ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಬಗ್ಗೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಭಾನುವಾರ ನೀಡಿರುವ ಹೇಳಿಕೆ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಹೈಕಮಾಂಡ್ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಬಯಸಿದ್ದರು. ಆದರೆ ಪಿತೂರಿಯಿಂದಾಗಿ ಅಧ್ಯಕ್ಷ ಸ್ಥಾನ ಕೈ ತಪ್ಪುವಂತೆ ಮಾಡಲಾಯಿತು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, "ಕಾಂಗ್ರೆಸ್ ಅಧ್ಯಕ್ಷರಾಗಲು ಯಾರಿಗೆ ತಾನೇ ಇಷ್ಟವಿಲ್ಲ? ಸೋನಿಯಾ ಗಾಂಧಿ ನನ್ನನ್ನು ಕೇಳಿದಾಗ ನಾನು ನಿರಾಕರಿಸುತ್ತಿದ್ದೆನಾ? ನನ್ನ ವಿರುದ್ಧ ಪಿತೂರಿ ನಡೆದಿದೆ ಅಂದುಕೊಂಡಿದ್ದೇನೆ. ನಾನೇ ಕಾಂಗ್ರೆಸ್ ಅಧ್ಯಕ್ಷರಾಗಲು ಬಯಸಿದ್ದೆ ಎಂದು ತಿಳಿಸಿದರು.
ಮಾನೇಸರ್ ಘಟನೆ ಕುರಿತು ಪ್ರತಿಕ್ರಿಯಿಸಿದ ಗೆಹ್ಲೋಟ್, ಇದು ಕಾಂಗ್ರೆಸ್ನ ಆಂತರಿಕ ವಿಷಯವಾಗಿದ್ದು, ಪಕ್ಷದ ನಾಯಕರ ನಡುವಿನ ಮಾತುಕತೆಯ ಮೂಲಕ ಅದನ್ನು ಪರಿಹರಿಸುತ್ತಿದ್ದರು ಎಂದರು.
ಮನೇಸರ್ ಬಗ್ಗೆ ಜನರು ನಮ್ಮನ್ನು ಕೆಣಕುತ್ತಲೇ ಇದ್ದಾರೆ. ಇದು ನಮ್ಮ ಕುಟುಂಬದೊಳಗಿನ ವಿಷಯ. ನಾವು ಅದನ್ನು ನಮ್ಮೊಳಗೆ ಪರಿಹರಿಸಿಕೊಳ್ಳುತ್ತೇವೆ. ಅದು ಸಚಿನ್ ಪೈಲಟ್, ಗೋವಿಂದ್ ಸಿಂಗ್ ದೋತಾಸ್ರಾ, ಟಿಕರಾಮ್ ಜಲ್ಲಿ, ಸಿಪಿ ಜೋಶಿ, ಭನ್ವರ್ ಜಿತೇಂದ್ರ ಸಿಂಗ್, ಚಂದ್ರಭನ್, ಡಾ. ಬಿ.ಡಿ. ಕಲ್ಲಾ ಅಥವಾ ನಮ್ಮ ಇತರ ಯಾವುದೇ ನಾಯಕರಾಗಿರಲಿ, ನಾವು ಪರಸ್ಪರ ಮಾತನಾಡುತ್ತೇವೆ ಮತ್ತು ಯಾವುದೇ ತಪ್ಪುಗ್ರಹಿಕೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ರಾಜಸ್ಥಾನ ಕಾಂಗ್ರೆಸ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಗೆಹ್ಲೋಟ್, ಪಕ್ಷದ ಹೈಕಮಾಂಡ್ ಯಾವಾಗಲೂ ರಾಜ್ಯ ಘಟಕವನ್ನು ನಂಬಿದೆ. ರಾಜಸ್ಥಾನ ಕಾಂಗ್ರೆಸ್ ನಾಯಕರು ಹೈಕಮಾಂಡ್ ವಿರುದ್ಧ ಎಂದಿಗೂ ದಂಗೆ ಏಳಲು ಸಾಧ್ಯವಿಲ್ಲ ಎಂದು ಹೇಳಿದರು.
ಸೆಪ್ಟೆಂಬರ್ 25 ರಂದು ಏನಾಯಿತು ಎಂದು ಜನರು ಪದೇ ಪದೇ ಕೇಳುತ್ತಾರೆ, ಆದರೆ ರಾಜಸ್ಥಾನ ಕಾಂಗ್ರೆಸ್ ಎಂದಿಗೂ ಹೈಕಮಾಂಡ್ ವಿರುದ್ಧ ದಂಗೆ ಏಳಲು ಸಾಧ್ಯವಿಲ್ಲ. ಇಂದಿರಾ ಗಾಂಧಿ ರಾಜಸ್ಥಾನದಲ್ಲಿ ಇಟ್ಟಿದ್ದ ನಂಬಿಕೆಗೆ ಇತಿಹಾಸ ಸಾಕ್ಷಿಯಾಗಿದೆ ಮತ್ತು ಅದೇ ನಂಬಿಕೆಯನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತೋರಿಸಿದ್ದಾರೆ. ಹೈಕಮಾಂಡ್ ಹಿಂದೆ ರಾಜಸ್ಥಾನ ಕಾಂಗ್ರೆಸ್ ಅನ್ನು ನಂಬಿತ್ತು ಮತ್ತು ಇಂದಿಗೂ ಹಾಗೆಯೇ ಮುಂದುವರೆದಿದೆ" ಎಂದು ಗೆಹ್ಲೋಟ್ ಹೇಳಿದರು.