ನವದೆಹಲಿ: ಒಮನ್ ಕರಾವಳಿಯ ಸಮೀಪ ಪಲಾವ್ ಧ್ವಜ ಹೊಂದಿದ್ದ ತೈಲ ಸಾಗಣೆ ಹಡಗು 'ಎಮ್ ಟಿ ಮಾರಿವೆಕ್ಸ್' (MT Marivex) ನಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಿಲುಕಿದ್ದ 24 ಭಾರತೀಯ ನಾವಿಕರನ್ನು ಭಾರತೀಯ ನೌಕಾಪಡೆ ಸುರಕ್ಷಿತವಾಗಿ ರಕ್ಷಿಸಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ಗಳ ಮೂಲಕ ನಾವಿಕರನ್ನು ಹಡಗಿನಿಂದ ಏರ್ಲಿಫ್ಟ್ ಮಾಡಲಾಯಿತು ಎಂದು ಹೇಳಲಾಗಿದೆ.
ಆದರೆ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಭಾರತದ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗ ಸಚಿವಾಲಯದ ಪ್ರಕಾರ, ಮಧ್ಯಾಹ್ನ ಸುಮಾರು 1.30 ಗಂಟೆ (0800 GMT) ವೇಳೆಗೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಯಿತು.
"ಎಮ್ ಟಿ ಮಾರಿವೆಕ್ಸ್ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ವರದಿ ನಮಗೆ ಬಂದಿತ್ತು. ಹಡಗಿನಲ್ಲಿ 24 ಭಾರತೀಯ ನಾವಿಕರಿದ್ದರು. ಎಲ್ಲ ಭಾರತೀಯ ನಾವಿಕರೂ ಸುರಕ್ಷಿತರಾಗಿದ್ದಾರೆ," ಎಂದು ಸಚಿವಾಲಯದ ನಿರ್ದೇಶಕ ಓಪೇಶ್ ಕುಮಾರ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇಂಡಿಯನ್ ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಚಿತ್ರಗಳಲ್ಲಿ, ದಟ್ಟ ಕಪ್ಪು ಹೊಗೆ ಹಡಗಿನ ಬ್ರಿಡ್ಜ್ ಮತ್ತು ಸಿಬ್ಬಂದಿ ವಸತಿ ವಿಭಾಗಗಳಿಂದ ಹೊರಬರುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಹೆಲಿಕಾಪ್ಟರ್ಗಳ ಮೂಲಕ ಸಿಬ್ಬಂದಿಯನ್ನು ಹಗ್ಗಗಳ ಸಹಾಯದಿಂದ ರಕ್ಷಿಸಲಾಗುತ್ತಿರುವ ದೃಶ್ಯಗಳೂ ಕಾಣಿಸಿಕೊಂಡಿವೆ.
ಹಡಗುಗಳ ಸಂಚಾರವನ್ನು ಮೇಲ್ವಿಚಾರಣೆ ಮಾಡುವ ಮೆರಿನ್ ಟ್ರಾಫಿಕ್ (MarineTraffic) ಸೇವೆಯ ಮಾಹಿತಿ ಪ್ರಕಾರ, ಈ ಟ್ಯಾಂಕರ್ ಒಮನ್ ರಾಜಧಾನಿ ಮಸ್ಕಟ್ನ ದಕ್ಷಿಣ ಭಾಗದ ಸಮುದ್ರ ಪ್ರದೇಶದಲ್ಲಿತ್ತು. ಘಟನೆಯಲ್ಲಿ ಹಡಗಿಗೆ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬುದರ ಬಗ್ಗೆ ಭಾರತೀಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದೂ ಇನ್ನೂ ಸ್ಪಷ್ಟವಾಗಿಲ್ಲ.
ಇರಾನ್ ಯುದ್ಧ, ಜಲಸಂಧಿ ಬಂದ್, ಭಾರತ ಕಳವಳ
ಇದೇ ವೇಳೆ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧ ಆರಂಭವಾದ ಬಳಿಕ, ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗು ಸಂಚಾರವನ್ನು ಬಹುತೇಕ ನಿರ್ಬಂಧಿಸಿದೆ.
ಸಾಮಾನ್ಯ ಪರಿಸ್ಥಿತಿಯಲ್ಲಿ ವಿಶ್ವದ ಸುಮಾರು ಐದನೇ ಒಂದು ಭಾಗದ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆ ಈ ಜಲಸಂಧಿಯ ಮೂಲಕ ನಡೆಯುತ್ತದೆ. ಇದೇ ವೇಳೆ, ಭಾರತೀಯ ವಿದೇಶಾಂಗ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಇತ್ತೀಚಿನ ಹಿಂಸಾಚಾರದ ಘಟನೆಗಳನ್ನು ಖಂಡಿಸಿದೆ.
"ಈ ಸಂಘರ್ಷವು ಈಗಾಗಲೇ 100 ದಿನಗಳನ್ನು ದಾಟಿದ್ದು, ಅಪಾರ ಮಾನವೀಯ ಸಂಕಷ್ಟವನ್ನು ಉಂಟುಮಾಡಿದೆ. ಇದರ ಜೊತೆಗೆ ಜಾಗತಿಕ ಆರ್ಥಿಕತೆ ಹಾಗೂ ಇಂಧನ ಪೂರೈಕೆ ವ್ಯವಸ್ಥೆಯ ಮೇಲೂ ಗಂಭೀರ ದುಷ್ಪರಿಣಾಮ ಬೀರಿದೆ" ಎಂದು ಸಚಿವಾಲಯ ತಿಳಿಸಿದೆ.