ನವಿ ಮುಂಬೈ: ಉದ್ದೇಶಪೂರ್ವಕವಾಗಿ ಹಿಂದೂ ವಿಗ್ರಹಗಳಗಳನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಕ್ರಿಶ್ಚಿಯನ್ ನರ್ಸ್ ವಿರುದ್ಧ ಎಫ್ಐಆರ್ ದಾಖಲಾಗಿರುವ ಘಟನೆ ನವಿ ಮುಂಬೈಯ ನೆರೂಲ್ ಪ್ರದೇಶದಲ್ಲಿ ನಡೆದಿದೆ.
ಈ ಸಂಬಂಧ ದೂರುದಾರ ಹರ್ಷಲಾ ಪಾಟೀಲ್ ಎಂಬುವರು ಹಿಂದೂ ಜನಜಾಗೃತಿ ಸಮಿತಿ (ಎಚ್ಜೆಎಸ್) ಅನ್ನು ಸಂಪರ್ಕಿಸಿದ ನಂತರ ದೂರು ದಾಖಲಿಸಲಾಗಿದೆ. ಸಂಘಟನೆಯ ಮಧ್ಯಪ್ರವೇಶದ ನಂತರ, ನೆರೂಲ್ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), 2023 ರ ಸೆಕ್ಷನ್ 298 ಮತ್ತು 351(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹಾಸ್ಟೆಲ್ ಕೊಠಡಿಯೊಳಗೆ ಅಪವಿತ್ರದ ಆರೋಪ: ನೆರೂಲ್ನ ಹಾಸ್ಟೆಲ್ ಕೊಠಡಿಯೊಂದರಲ್ಲಿ ವಾಸಿಸುತ್ತಿರುವ ಹರ್ಷಲಾ ಪಾಟೀಲ್, ಸಣ್ಣ ಗುಡಿಯೊಂದನ್ನು ಮಾಡಿಕೊಂಡು ಅದರಲ್ಲಿ ಗಣೇಶ ಮತ್ತು ರಾಧಾ-ಕೃಷ್ಣರ ವಿಗ್ರಹಗಳನ್ನು ಇಟ್ಟು ಪ್ರತಿನಿತ್ಯ ಪೂಜಿಸುತ್ತಿದ್ದರು. ಆರೋಪಿ ನರ್ಸ್ 2026 ರ ಮೇ ಅಂತ್ಯದಲ್ಲಿ ಇಲ್ಲಿಗೆ ಸ್ಥಳಾಂತರಗೊಂಡ ಬಳಿಕ ಗುಡಿಯ ಬಗ್ಗೆ ಆಕ್ಷೇಪಿಸಲು ಪ್ರಾರಂಭಿಸಿದ್ದಾರೆ. ಈ ವಿಚಾರದಲ್ಲಿ ಆಕೆ ಹರ್ಷಲಾ ಜೊತೆ ಪದೇ ಪದೇ ವಾದ ಮಾಡುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಜೂನ್ 5 ರಂದು ಹರ್ಷಲಾ ಕೆಲಸದಿಂದ ಹಿಂತಿರುಗಿದಾಗ ಗುಡಿ ಪಾದರಕ್ಷೆ ಇರಿಸಿದ್ದ ಪ್ರದೇಶಕ್ಕೆ ಸ್ಥಳಾಂತರಿಸಲ್ಪಟ್ಟಿದ್ದು, ವಿಗ್ರಹಗಳು ಅದರ ಹತ್ತಿರ ಬಿದ್ದಿರುವುದನ್ನು ನೋಡಿದ್ದಾರೆ. ಘಟನೆಯ ಬಗ್ಗೆ ಪ್ರಶ್ನಿಸಿದಾಗ, ತಾನು ಹಿಂದೂ ದೇವರುಗಳನ್ನು ಬಯಸಲ್ಲ. ಅದರಲ್ಲಿ ನಂಬಿಕೆಯಿಲ್ಲ ಎಂದು ಹೇಳಿದ್ದಾಳೆ ಎನ್ನಲಾಗಿದೆ. ದೂರುದಾರರು ಈ ಹೇಳಿಕೆಗಳನ್ನು ಧಾರ್ಮಿಕ ಭಾವನೆಗಳಿಗೆ ಅವಮಾನಕರ ಎಂದು ವಿವರಿಸಿದ್ದಾರೆ. ಈ ವಿಷಯವನ್ನು ಆಸ್ಪತ್ರೆ ಆಡಳಿತ ಮಂಡಳಿಯ ಗಮನಕ್ಕೆ ತರಲಾಗಿದ್ದು, ಜೂನ್ 6 ರಂದು ನರ್ಸ್ ಅನ್ನು ಅಮಾನತುಗೊಳಿಲಾಗಿದೆ.
ಅದೇ ಸಂಜೆ, ನರ್ಸ್ ತನ್ನ ವಸ್ತುಗಳನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ ಹಾಸ್ಟೆಲ್ ಕೊಠಡಿಗೆ ವಾಪಸ್ ಆಗಿದ್ದು, ಮತ್ತೆ ಗುಡಿಯನ್ನು ಶೂ ರ್ಯಾಕ್ ಬಳಿ ಸ್ಥಳಾಂತರಿಸಿ, ವಿಗ್ರಹಗಳನ್ನು ಮೇಜಿನ ಮೇಲೆ ಎಸೆದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹರ್ಷಲಾ ಇಲ್ಲದಿದ್ದಾಗ ಅನೇಕ ಬಾರಿ ಇದೇ ರೀತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಹಾಸ್ಟೆಲ್ ಕೊಠಡಿಯಿಂದ ಹೊರಡುವಾಗಲೂ ಹರ್ಷಲಾ ಅವರಿಗೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಹಿಂದೂ ಜನಜಾಗೃತಿ ಸಂಘಟನೆಯ ಪ್ರತಿನಿಧಿಗಳು ನೆರೂಲ್ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಭೇಟಿ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ನಂತರ ಪೊಲೀಸರು ಬಿಎನ್ಎಸ್ನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಈ ವಿಷಯ ಕುರಿತ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.