ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡ ನಂತರ ಮಂಗಳವಾರ ಸಂಜೆ ಚುನಾವಣಾ ಆಯೋಗದ ಕಚೇರಿ ಹೊರಗೆ ಹಿರಿಯ ಕಾಂಗ್ರೆಸ್ ನಾಯಕರು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಮತ್ತು ಭದ್ರತಾ ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಪ್ರತಿಭಟನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಅನುಮತಿ ಇಲ್ಲದ ಕಾರಣ ರಮೇಶ್ ಕಚೇರಿಗೆ ಪ್ರವೇಶಿಸುವುದನ್ನು ತಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ಈ ವಿವಾದ ನಿರ್ವಚನ ಸದನ ಗೇಟ್ನಲ್ಲಿ ಕಾಂಗ್ರೆಸ್ ನಾಯಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ದೀರ್ಘ ವಾಗ್ವಾದಕ್ಕೆ ಕಾರಣವಾಯಿತು. ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಹೊರಗೆ ಗೊಂದಲವನ್ನು ಸೃಷ್ಟಿಸಿತು.
ಇದಕ್ಕೂ ಮುನ್ನಾ ಕೆ.ಸಿ. ವೇಣುಗೋಪಾಲ್ ನೇತೃತ್ವದ ಕಾಂಗ್ರೆಸ್ ನಿಯೋಗ ಸಂಜೆ 7:30 ಕ್ಕೆ ಚುನಾವಣಾ ಆಯೋಗದೊಂದಿಗೆ ಅಪಾಯಿಂಟ್ಮೆಂಟ್ ಕೋರಿತ್ತು. ಆಗ ಜೈರಾಮ್ ರಮೇಶ್ ಕೂಡಾ ಆಗಮಿಸಿದ್ದರು, ಆದರೆ ಅವರ ಪ್ರವೇಶದ ಬಗ್ಗೆ ಭಿನ್ನಾಭಿಪ್ರಾಯ ಘರ್ಷಣೆಗೆ ಕಾರಣವಾಯಿತು. ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡ ನಂತರ, ಕೆ.ಸಿ. ವೇಣುಗೋಪಾಲ್, ಭೂಪೇಶ್ ಬಘೇಲ್ ಮತ್ತು ಸಚಿನ್ ಪೈಲಟ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದ ಕಚೇರಿಯ ಹೊರಗೆ ಜಮಾಯಿಸಿದ್ದರು.
ಈ ವೇಳೆ ಮಾತನಾಡಿದ ಕೆ.ಸಿ. ವೇಣುಗೋಪಾಲ್, ಇದು ಪ್ರಜಾಪ್ರಭುತ್ವದ ಮೂಲಭೂತ ವಿಷಯ. ಅವರು ಒಳಗೆ ಹೋಗಲು ಅವಕಾಶ ನೀಡುವವರೆಗೂ ನಾವು ಇಲ್ಲೇ ಕುಳಿತುಕೊಳ್ಳುತ್ತೇವೆ. ಮಾಜಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಸಂಸದರು ಇಲ್ಲಿದ್ದಾರೆ. ಸಂಜೆ 7.25 ಕ್ಕೆ ದೂರು ನೀಡಲು ಚುನಾವಣಾ ಆಯೋಗದೊಂದಿಗೆ ಅಪಾಯಿಂಟ್ಮೆಂಟ್ ಕೋರಿ ಭಾರತದ ಚುನಾವಣಾ ಆಯೋಗಕ್ಕೆ ಪತ್ರವನ್ನು ನೀಡಿದ್ದೇವೆ. 40 ನಿಮಿಷಗಳ ನಂತರ ಚುನಾವಣಾ ಆಯೋಗ ನಮಗೆ ಒಳಗೆ ಹೋಗಲು ಅವಕಾಶ ನೀಡುತ್ತಿಲ್ಲ. ಈ ದೇಶದಲ್ಲಿ ಏನಾಗುತ್ತಿದೆ? ಇದು ಬನಾನಾ ರಿಪಬ್ಲಿಕ್ ಆಗಿದೆಯೇ? ನಮಗೆ ನ್ಯಾಯ ಬೇಕು... ನಾವು ನ್ಯಾಯಾಲಯಕ್ಕೂ ಹೋಗುತ್ತೇವೆ... ಮಧ್ಯಪ್ರದೇಶದಲ್ಲಿ ಏನಾಗುತ್ತಿದೆ ಎಂದು ನೋಡಿ. ಯಾವುದೇ ಕಾರಣವಿಲ್ಲದೆ ಅವರು ನಾಮಪತ್ರವನ್ನು ರದ್ದುಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀನಾಕ್ಷಿ ನಟರಾಜನ್ ವಿರುದ್ಧ ಯಾವುದೇ ಎಫ್ಐಆರ್ ಅಥವಾ ಚಾರ್ಜ್ಶೀಟ್ ಇಲ್ಲ. ಆದಾಗ್ಯೂ, ಯಾವುದೇ ಕಾರಣವಿಲ್ಲದೆ ನಮ್ಮ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ನಾವು ಗೆಲ್ಲುತ್ತಿದ್ದ ಸ್ಥಾನ, ನಮ್ಮ ಅಭ್ಯರ್ಥಿಯ ನಾಮಪತ್ರವನ್ನು ರದ್ದುಪಡಿಸಲಾಗಿದೆ. ಚುನಾವಣಾ ಆಯೋಗದಲ್ಲಿ ಯಾವುದೇ ಅಧಿಕಾರಿಗಳಿಲ್ಲ ಎಂದು ಅವರು ಹೇಳುತ್ತಿದ್ದಾರೆ. ನೋಟಿಸ್ ಮೂಲಕ ರಾಜ್ಯಸಭಾ ಅಭ್ಯರ್ಥಿಯ ನಾಮಪತ್ರವನ್ನು ರದ್ದುಪಡಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದರು.