ಪ್ರಧಾನಿ ಮೋದಿ- ರಾಹುಲ್ ಗಾಂಧಿ 
ದೇಶ

ಭಾರತೀಯ ನಾವಿಕರ ಹತ್ಯೆ: ಅಮೆರಿಕಾ ಆದೇಶಗಳ ಪಾಲಿಸುವ 'obedient servant'; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಮೂರು ಭಾರತೀಯ ನಾವಿಕರು ಅಮೆರಿಕದ ದಾಳಿಯಲ್ಲಿ ಸಾವನ್ನಪ್ಪಿದ ಕೆಲವೇ ದಿನಗಳ ಬಳಿಕವೂ ಅಮೆರಿಕ ವಿಷಾದ ವ್ಯಕ್ತಪಡಿಸಿಲ್ಲ, ಕ್ಷಮೆಯನ್ನೂ ಕೇಳಿಲ್ಲ. ಬದಲಾಗಿ ಭಾರತಕ್ಕೆ ಆದೇಶಗಳನ್ನು ನೀಡುತ್ತಿದೆ.

ನವದೆಹಲಿ: ಗಲ್ಫ್ ಪ್ರದೇಶದಲ್ಲಿ ಅಮೆರಿಕದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಮೆರಿಕ ನೀಡಿರುವ ಹೇಳಿಕೆಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕವು ಗಲ್ಫ್ ಪ್ರದೇಶದಲ್ಲಿ ಭಾರತೀಯ ಸಿಬ್ಬಂದಿಯಿದ್ದ ಹಡಗುಗಳ ಮೇಲೆ ದಾಳಿ ನಡೆಸಿದ್ದ, ಈ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದರ ನಡುವೆಯೇ ಅಮೆರಿಕ ಹಾರ್ಮುಜ್ ಜಲಸಂಧಿಯಲ್ಲಿ ತನ್ನ ಸೇನಾ ಆದೇಶಗಳನ್ನು ಉಲ್ಲಂಘಿಸುವ ಯಾವುದೇ ಕ್ರಮ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಭಾರತದ ಗೌರವವನ್ನು ಕಾಪಾಡಬೇಕಾದ ಪ್ರಧಾನಿಯೇ ಮೌನವಾಗಿದ್ದಾರೆ. ದೇಶವನ್ನು ಅವಮಾನಿಸುವವರ ಎದುರು ಅವರು ತಲೆಬಾಗುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.

ಮೂರು ಭಾರತೀಯ ನಾವಿಕರು ಅಮೆರಿಕದ ದಾಳಿಯಲ್ಲಿ ಸಾವನ್ನಪ್ಪಿದ ಕೆಲವೇ ದಿನಗಳ ಬಳಿಕವೂ ಅಮೆರಿಕ ವಿಷಾದ ವ್ಯಕ್ತಪಡಿಸಿಲ್ಲ, ಕ್ಷಮೆಯನ್ನೂ ಕೇಳಿಲ್ಲ. ಬದಲಾಗಿ ಭಾರತಕ್ಕೆ ಆದೇಶಗಳನ್ನು ನೀಡುತ್ತಿದೆ" ಎಂದು ಕಿಡಿಕಾರಿದ್ದಾರೆ.

"ಅಮೆರಿಕದ ಭಾಷೆಯನ್ನು ನೋಡಿ. 'ಅಮೆರಿಕದ ಸೇನಾ ಆದೇಶಗಳನ್ನು ತಕ್ಷಣ ಪಾಲಿಸಿ' ಎಂದು ಹೇಳುತ್ತಿದೆ. ಸ್ವಾಭಿಮಾನಿ ರಾಷ್ಟ್ರವೊಂದು ಇಂತಹ ಭಾಷೆಯನ್ನು ಎಂದಿಗೂ ಸಹಿಸುವುದಿಲ್ಲ. ಆದರೆ, ನಮ್ಮ ಪ್ರಧಾನಿ ಮೌನವಾಗಿದ್ದಾರೆ. ಅವರು ವಿಧೇಯ ಸೇವಕರಂತೆ ಆದೇಶಗಳನ್ನು ಕೇಳಿ ಪಾಲಿಸುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.

ಜಿ7 ಶೃಂಗಸಭೆಯನ್ನು ಉಲ್ಲೇಖಿಸಿ ಮಾತನಾಡಿರುವ ಅವರು, "ಪ್ರಧಾನಮಂತ್ರಿಗಳು ಜಾಗತಿಕ ನಾಯಕರನ್ನು ಆಲಂಗಿಸಿ ಒಪ್ಪಂದಗಳಿಗೆ ಸಹಿ ಹಾಕುತ್ತಾರೆ. ಆದರೆ, ನಮ್ಮ ನಾವಿಕರ ಸಾವಿಗೆ ಅಮೆರಿಕಾವನ್ನು ಹೊಣೆಗಾರರನ್ನಾಗಿ ಮಾಡಲು ಅವರು ಸಂಪೂರ್ಣ ವಿಫಲರಾಗಿದ್ದಾರೆಂದು ಕಿಡಿಕಾರಿದ್ದಾರೆ.

ಭಾರತದ ತೀವ್ರ ಆಕ್ಷೇಪ

ಒಮಾನ್ ಕರಾವಳಿ ಸಮೀಪ ಈ ವಾರ ಭಾರತೀಯ ಸಿಬ್ಬಂದಿಯಿದ್ದ ಮೂರು ಹಡಗುಗಳು ದಾಳಿಗೆ ಒಳಗಾಗಿದ್ದವು. ಈ ಪೈಕಿ ನಡೆದ ಒಂದು ಘಟನೆಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು.

ಘಟನೆಗೆ ಸಂಬಂಧಿಸಿದಂತೆ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ಕರೆ ಮಾಡಿ ಭಾರತದ ತೀವ್ರ ಆಕ್ಷೇಪವನ್ನು ದಾಖಲಿಸಿದ್ದರು.

ಇದಲ್ಲದೆ, ನವದೆಹಲಿಯಲ್ಲಿರುವ ಅಮೆರಿಕದ ರಾಜತಾಂತ್ರಿಕ ಪ್ರತಿನಿಧಿಯನ್ನು ಭಾರತ ಸರ್ಕಾರ ಕರೆಸಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಭಾರತೀಯ ಸಿಬ್ಬಂದಿಯಿದ್ದ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿ "ಸ್ವೀಕಾರಾರ್ಹವಲ್ಲ" ಎಂದು ಭಾರತ ಸ್ಪಷ್ಟಪಡಿಸಿತ್ತು.

ಟ್ರಂಪ್ ಆರೋಪ, ಇರಾನ್ ತಿರುಗೇಟು

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿ ಸಮೀಪ ಭಾರತೀಯ ಹಡಗುಗಳ ಮೇಲೆ ನಡೆದ ಡ್ರೋನ್ ದಾಳಿಗಳಿಗೆ ಇರಾನ್ ಕಾರಣ ಎಂದು ಆರೋಪಿಸಿದ್ದರು. "ಇದು ಸಂಪೂರ್ಣವಾಗಿ ಅಸ್ವೀಕಾರಾರ್ಹ" ಎಂದು ಟ್ರಂಪ್ ಹೇಳಿದ್ದರು.

ಆದರೆ ಈ ಆರೋಪವನ್ನು ಇರಾನ್ ತಳ್ಳಿಹಾಕಿದ್ದು, ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ ಇದನ್ನು "ಆಧಾರರಹಿತ ಆರೋಪ" ಎಂದು ಖಂಡಿಸಿದೆ. ಅಮೆರಿಕದ ಕ್ರಮಗಳಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಇದಾಗಿದೆ ಎಂದು ಇರಾನ್ ಪ್ರತಿಕ್ರಿಯಿಸಿದೆ.

ಹಾರ್ಮುಜ್ ನಲ್ಲಿ ಉದ್ವಿಗ್ನತೆ ಹೆಚ್ಚಳ

ಗಲ್ಫ್ ಪ್ರದೇಶದಲ್ಲಿ ಅಮೆರಿಕವು ಇರಾನ್ ಮೇಲೆ ತೈಲ ನಿರ್ಬಂಧ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಹಡಗು ಸಂಚಾರ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಏಪ್ರಿಲ್‌ನಿಂದ ಆರಂಭವಾದ ಉದ್ವಿಗ್ನ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ: ಶಾ ಅವರೇ ಆದೇಶ ನೀಡಿದ್ದಾರೆ, ಇಲ್ಲವೇ ಅವರು ಅಸಮರ್ಥ; ವಜಾಗೊಳಿಗೊಳಿಸಿ- ಪ್ರಧಾನಿಗೆ ರಾಹುಲ್ ಒತ್ತಾಯ

CWRC ಆದೇಶದ ವಿರುದ್ಧ ಮೇಲ್ಮನವಿ: ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ಅರಿಯಲು ಸಿಎಂ ವಿಜಯ್ ಗೆ ಹೆಲಿಕಾಪ್ಟರ್ ವ್ಯವಸ್ಥೆ- ಸಿಎಂ ಡಿಕೆ ಶಿವಕುಮಾರ್!

ಕಾವೇರಿ ನೀರು ಬಿಡುಗಡೆ ಸಮಿತಿಯ ಆದೇಶವು 'ಅವೈಜ್ಞಾನಿಕ', ಕರ್ನಾಟಕಕ್ಕೆ 'ಮಾರಕ': ಕೇಂದ್ರ ಸಚಿವ ಕುಮಾರಸ್ವಾಮಿ

ಚೆನ್ನೈ ಮೆಟ್ರೋ ರೈಲಿನಲ್ಲಿ ಸಿಎಂ ವಿಜಯ್ ಪ್ರಯಾಣ: ಜನರೊಂದಿಗೆ ಸಂವಾದ, ಸರಳತೆಗೆ ಫ್ಯಾನ್ಸ್ ಫಿದಾ! Video

Beat the f**king sh*t out: ಅಮೆರಿಕದ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ, ಟ್ರಂಪ್ ಆಕ್ರೋಶ!