ನವದೆಹಲಿ: ಪಕ್ಷದ ಬಂಡಾಯ ಬಣವೊಂದು ಸಲ್ಲಿಸಿರುವ ವಿಲೀನ ಕೋರಿಕೆಗೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಎರಡೂ ಕಡೆಯವರ ವಾದ ಆಲಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ಈ ಸಂಬಂಧ ಸ್ಪೀಕರ್, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಆದರೆ ಕೇವಲ 2 ಗಂಟೆ ಸಮಯ ನೀಡಿದ ಕುರಿತು ಸ್ಪೀಕರ್ ಕಚೇರಿ ಮತ್ತು ಟಿಎಂಸಿ ನಡುವೆ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ.
ಜೂನ್ 15 ರಂದು ಮಧ್ಯಾಹ್ನ 2 ಗಂಟೆಗೆ ಲೋಕಸಭಾ ಸ್ಪೀಕರ್ ಕಚೇರಿ, ಅಭಿಷೇಕ್ ಬ್ಯಾನರ್ಜಿಗೆ ಇಮೇಲ್ ಮೂಲಕ ನೋಟಿಸ್ ಕಳುಹಿಸಿದೆ ಎಂದು ಟಿಎಂಸಿ ಮೂಲಗಳು ಎಎನ್ಐಗೆ ತಿಳಿಸಿವೆ.
ಇಮೇಲ್ ಕಳುಹಿಸುವ ಸಮಯದಲ್ಲಿ, ಅಭಿಷೇಕ್ ಬ್ಯಾನರ್ಜಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ ಹಾಜರಾಗಿದ್ದರು. ಈ ಸಮಯದಲ್ಲಿ ಅವರ ಮೊಬೈಲ್ ಫೋನ್ ಅಥವಾ ವೈಯಕ್ತಿಕ ಇಮೇಲ್ಗಳನ್ನು ನೋಡಲು ಅವಕಾಶ ಇರಲಿಲ್ಲ.
ಸ್ಪೀಕರ್ ಕಚೇರಿಯಿಂದ ಬಂದ ಸಮನ್ಸ್ ನಲ್ಲಿ ಬ್ಯಾನರ್ಜಿಗೆ ಕೇವಲ ಎರಡು ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ವರದಿಯಾಗಿದೆ. ಅದೇ ದಿನ ಸಂಜೆ 4 ಗಂಟೆಯೊಳಗೆ ದೆಹಲಿಯಲ್ಲಿ ಸ್ಪೀಕರ್ ಅವರನ್ನು ಭೇಟಿ ಮಾಡುವಂತೆ ನೋಟಿಸ್ ನೀಡಲಾಗಿದೆ.
ಮೂಲಗಳ ಪ್ರಕಾರ, ಇಮೇಲ್ ಕಳುಹಿಸಿದ ಒಂದು ಗಂಟೆಯೊಳಗೆ, ಸ್ಪೀಕರ್ ಕಚೇರಿ ತೃಣಮೂಲ ಕಾಂಗ್ರೆಸ್ ಸಂಸದ ಕೀರ್ತಿ ಆಜಾದ್ ಅವರಿಗೆ ನಿಗದಿತ ಅಪಾಯಿಂಟ್ಮೆಂಟ್ ಬಗ್ಗೆ ತಿಳಿಸಲು ಫೋನ್ ಮಾಡಲಾಗಿದೆ.
ಕರೆ ಬಂದ ನಂತರ, ಕೀರ್ತಿ ಆಜಾದ್ ಅವರು ಸ್ಪೀಕರ್ ಕಚೇರಿಗೆ ಖುದ್ದಾಗಿ ಭೇಟಿ ನೀಡಿ, ಬ್ಯಾನರ್ಜಿ ಅವರ ಅಲಭ್ಯತೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಪ್ರಸ್ತುತ ನಡೆಯುತ್ತಿರುವ ಇಡಿ ತನಿಖೆಗೆ ಸಹಕರಿಸುತ್ತಿದ್ದಾರೆ ಮತ್ತು ಇಡಿ ವಿಚಾರಣೆಯಲ್ಲಿದ್ದಾರೆ ಎಂದು ಆಜಾದ್ ಅವರು ಸ್ಪೀಕರ್ ಕಚೇರಿಗೆ ತಿಳಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಅಭಿಷೇಕ್ ಬ್ಯಾನರ್ಜಿ ಸಂಜೆ 4 ಗಂಟೆಯ ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಆಜಾದ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಪರವಾಗಿ, ಆಜಾದ್ ಅವರು, ಸಭೆಗೆ ಮತ್ತೊಂದು ದಿನಾಂಕ ಮತ್ತು ಸಮಯವನ್ನು ಕೋರಿದ್ದಾರೆ.