ನವದೆಹಲಿ: ಹಲವಾರು ಶಿವಸೇನೆ(ಯುಬಿಟಿ) ಸಂಸದರು ಏಕನಾಥ್ ಶಿಂಧೆ ನೇತೃತ್ವದ ಆಡಳಿತಾರೂಢ ಶಿವಸೇನೆಗೆ ಸೇರ್ಪಡೆಯಾಗಬಹುದೆಂಬ ಊಹಾಪೋಹಗಳು ಹೆಚ್ಚುತ್ತಿರುವುದರ ನಡುವೆ, ಶಿವಸೇನೆ(ಯುಬಿಟಿ)ಯ ಹಿರಿಯ ನಾಯಕರು ಬುಧವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ಯಾವುದೇ ಕಾನೂನುಬಾಹಿರ ಪಕ್ಷಾಂತರವನ್ನು ತಡೆಯುವಂತೆ ಒತ್ತಾಯಿಸಿದರು.
ಶಿವಸೇನೆ(ಯುಬಿಟಿ) ಸಂಸದರಾದ ಅರವಿಂದ್ ಸಾವಂತ್ ಮತ್ತು ಅನಿಲ್ ದೇಸಾಯಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಇಂದು ಸ್ಪೀಕರ್ ಬಿರ್ಲಾ ಅವರನ್ನು ಭೇಟಿ ಮಾಡಿ, ತಮ್ಮ ಪಕ್ಷದ ಆರರಿಂದ ಏಳು ಸಂಸದರು ಪಕ್ಷಾಂತರ ಮಾಡುತ್ತಿದ್ದಾರೆ ಎಂಬ ವರದಿಗಳಿದ್ದು, ಅದನ್ನು ತಡೆಯುವಂತೆ ಮನವಿ ಮಾಡಿದರು.
ಸ್ಪೀಕರ್ ಭೇಟಿಯ ನಂತರ, ಪಕ್ಷಾಂತರ ವಿರೋಧಿ ಕಾನೂನಿನ ನಿಬಂಧನೆಗಳನ್ನು ಎತ್ತಿ ತೋರಿಸುವ ಪತ್ರವನ್ನು ನಾವು ಸಲ್ಲಿಸಿದ್ದೇವೆ ಎಂದು ದೇಸಾಯಿ ಹೇಳಿದರು.
"ಕಾನೂನಿನ ಅಡಿಯಲ್ಲಿ, ಮೂರನೇ ಎರಡರಷ್ಟು ಸಂಸದರ ಬೆಂಬಲವಿದ್ದರೂ ಸಹ, ಒಬ್ಬರು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಲು ಸಾಧ್ಯವಿಲ್ಲ. ಒಂದು ಗುಂಪು ಅಗತ್ಯವಿರುವ ಮೂರನೇ ಎರಡರಷ್ಟು ಬಲವನ್ನು ಹೊಂದಿದ್ದರೆ ಮಾತ್ರ ಮೂಲ ಪಕ್ಷ ವಿಲೀನಗೊಳ್ಳಬಹುದು" ಎಂದು ಅವರು ಹೇಳಿದರು.
ಶಿವಸೇನೆ(ಯುಬಿಟಿ) ಲೋಕಸಭೆಯಲ್ಲಿ ಒಂಬತ್ತು ಸಂಸದರನ್ನು ಹೊಂದಿದೆ. ಅಂದರೆ ಪಕ್ಷಾಂತರ ವಿರೋಧಿ ನಿಬಂಧನೆಗಳ ಅಡಿಯಲ್ಲಿ ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಕನಿಷ್ಠ ಆರು ಸಂಸದರು ಒಟ್ಟಾಗಿ ಹೋಗಬೇಕು.
ಎಲ್ಲಾ ಕಾನೂನು ಅಂಶಗಳನ್ನು ಪರಿಗಣಿಸಿದ ನಂತರವೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಓಂ ಬಿರ್ಲಾ ಅವರು ಸಂಸದರ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ರಾವತ್ ತಿಳಿಸಿದರು.
"ಸ್ಪೀಕರ್ ಗೌರವಾನ್ವಿತ ವ್ಯಕ್ತಿ ಮತ್ತು ಯಾರಾದರೂ ಅವರನ್ನು ಭೇಟಿ ಮಾಡಲು ಬಂದರೆ ಅವರು ಎಲ್ಲಾ ಅಂಶಗಳನ್ನು ಪರಿಗಣಿಸುವುದಾಗಿ ಅವರು ನಮಗೆ ಹೇಳಿದರು" ಎಂದು ರಾವತ್ ತಿಳಿಸಿದರು.
ಇದಕ್ಕೂ ಮುನ್ನ, ಶಿವಸೇನೆ(ಯುಬಿಟಿ) ಸಂಸದರಿಗೆ ಪಕ್ಷ ಬದಲಾಯಿಸಲು 50 ಕೋಟಿ ರೂ. ಆಫರ್ ನೀಡಲಾಗಿದೆ. 15 ಕೋಟಿ ರೂ. ಅಡ್ವಾನ್ಸ್ ನೀಡಿದ್ದಾರೆ. ಸಂಸದರನ್ನ ದೆಹಲಿಗೆ ಕರೆದೊಯ್ಯಲು ಖಾಸಗಿ ಜೆಟ್ಗಳನ್ನ ಕಳುಹಿಸಲಾಗುತ್ತಿದೆ. ಮಂಗಳವಾರ ನಾಂದೇಡ್ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ ಮೂರು ಸ್ಥಳಗಳಿಗೆ ಮೂರು ಖಾಸಗಿ ಜೆಟ್ಗಳನ್ನ ಕಳುಹಿಸಲಾಗಿದೆ ಎಂದು ರಾವತ್ ಆರೋಪಿಸಿದ್ದರು.