ತಿರುವನಂತಪುರಂ: ನಕಲಿ ದಾಖಲೆಗಳನ್ನು ಬಳಸಿ ಅಕ್ರಮ ಅಂಗಾಂಗ ದಾನಕ್ಕೆ ನೆರವಾಗುತ್ತಿದ್ದ ಜಾಲಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ED) ಗುರುವಾರ ಕೇರಳದಾದ್ಯಂತ ಹಲವು ಆಸ್ಪತ್ರೆಗಳು ಮತ್ತು ನಿವಾಸಗಳಲ್ಲಿ ದಾಳಿ ನಡೆಸಿದೆ.
ಕೊಚ್ಚಿ, ತಿರುವನಂತಪುರಂ ಮತ್ತು ಕೊಟ್ಟಾಯಂ ಜಿಲ್ಲೆಗಳ ಐದು ಸ್ಥಳಗಳಲ್ಲಿ ಇಂದು ಬೆಳಗಿನ ಜಾವ ಇಡಿ ದಾಳಿ ನಡೆಸಿ, ತೀವ್ರ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅಕ್ರಮ ಅಂಗಾಂಗ ದಾನ ದಂಧೆಯಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಜಾಲದ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ದಾಖಲಿಸಿದ ಹಲವಾರು ಎಫ್ಐಆರ್ಗಳ ಆಧಾರದ ಮೇಲೆ ಇಡಿ ಈ ತನಿಖೆ ಆರಂಭಿಸಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು, ಅಂಗಾಂಗ ದಾನಿಗಳು, ಸ್ವೀಕರಿಸುವವರು ಹಾಗೂ ಆಸ್ಪತ್ರೆಗಳ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ದಾನಗಳನ್ನು ಸುಗಮಗೊಳಿಸಲು ಗಣನೀಯ ಮೊತ್ತವನ್ನು ವಿಧಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ದಾಖಲಾಗಿದ್ದ ಎಫ್ಐಆರ್ ಗಳ ಆಧಾರದ ಮೇಲೆ, ED ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
ತನಿಖೆಯಲ್ಲಿ ಪ್ರಮುಖ ಆರೋಪಿ ನಜೀಬ್ ಜೊತೆ ಹಣಕಾಸಿನ ವ್ಯವಹಾರ ನಡೆಸಿದ ಆಸ್ಪತ್ರೆಗಳನ್ನು ಗುರಿಯಾಗಿರಿಸಿಕೊಂಡು ಇಂದು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 6 ಗಂಟೆಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಕೊಚ್ಚಿಯಲ್ಲಿ ಮಾತ್ರ, ಮೂರು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ತನಿಖಾಧಿಕಾರಿಗಳು ಅಂಗಾಂಗ ದಾನ ಕಾರ್ಯವಿಧಾನಗಳಿಗೆ ಸಂಬಂಧಿಸಿದ ಬ್ಯಾಂಕ್ ವಹಿವಾಟುಗಳು ಮತ್ತು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದರು ಎಂದು ಅವರು ಹೇಳಿದ್ದಾರೆ.
ಪೊಲೀಸ್ ಎಫ್ಐಆರ್ಗಳ ಪ್ರಕಾರ, ಈ ಗ್ಯಾಂಗ್ ಆಗಸ್ಟ್ 2023 ರಿಂದ ಸಕ್ರಿಯವಾಗಿದ್ದು, ಕೊಚ್ಚಿಯ ಎರಡು ಖಾಸಗಿ ಆಸ್ಪತ್ರೆಗಳ ಲೆಟರ್ಹೆಡ್ಗಳು, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳು ಮತ್ತು ಶಾಸಕರು, ಸಂಸದರು ಹಾಗೂ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪತ್ರಗಳನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಗ್ಯಾಂಗ್ ಹಲವಾರು ಪ್ರಮುಖ ವೈದ್ಯರ ಶಿಫಾರಸು ಪತ್ರಗಳನ್ನು ನಕಲಿ ಮಾಡಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಕೇರಳದಾದ್ಯಂತ ಈ ದಂಧೆಗೆ ಸಂಬಂಧಿಸಿದಂತೆ ಅನೇಕ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಏಕೆಂದರೆ ಇದು ಕೇರಳದಾದ್ಯಂತ ಕಾರ್ಯನಿರ್ವಹಿಸುತ್ತಿದೆ.