ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವ ನೆಪವೊಡ್ಡಿ ₹5.3 ಕೋಟಿಗೂ ಹೆಚ್ಚು ವಂಚಿಸಿದ ಅಪ್ಪ-ಮಗಳು ಅಂದರ್!

ನಿರುದ್ಯೋಗಿ ಮತ್ತು ವಿದ್ಯಾವಂತ ಯುವಕರಿಗೆ ತಮ್ಮ ಪ್ರಭಾವದ ಮೂಲಕ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದರು. ರೈಲ್ವೆ, ಆದಾಯ ತೆರಿಗೆ, ನೀರಾವರಿ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನೇಮಕಾತಿಗಳ ಭರವಸೆ ನೀಡಿದ್ದರು.
The accused are Shamshad Begum MM (R), an MBA graduate, and her father, MA Mansoor Ahmed (L).
ಆರೋಪಿಗಳಾದ ಎಂಎ ಮನ್ಸೂರ್ ಅಹ್ಮದ್ ಮತ್ತು ಮಗಳು ಶಂಶಾದ್ ಬೇಗಂ ಎಂಎಂ
Updated on

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ₹5.3 ಕೋಟಿಗೂ ಹೆಚ್ಚು ಹಣ ವಂಚಿಸಿದ ಆರೋಪದ ಮೇಲೆ ತಂದೆ-ಮಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳು ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದರು ಮತ್ತು ಕೆಲವು ಆಕಾಂಕ್ಷಿಗಳ ವಿಶ್ವಾಸ ಗಳಿಸಲು ನಾಲ್ಕು ತಿಂಗಳ ಸಂಬಳವನ್ನು ಸಹ ನೀಡಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ಎಂಬಿಎ ಪದವೀಧರೆಯಾದ ಶಂಶಾದ್ ಬೇಗಂ ಎಂಎಂ ಮತ್ತು ಆಕೆಯ ತಂದೆ ಎಂಎ ಮನ್ಸೂರ್ ಅಹ್ಮದ್ ಎಂದು ಗುರುತಿಸಲಾಗಿದೆ.

ಸಂಗಮೇಶ್ ರಾಚಯ್ಯ ವಸ್ತ್ರದ್ ಎಂಬುವವರು 2025ರ ನವೆಂಬರ್ 17ರಂದು ಸಿಸಿಬಿಗೆ ದೂರು ದಾಖಲಿಸಿದ್ದು, ತಂದೆ-ಮಗಳು ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ ಎಂದಿದ್ದಾರೆ.

ನಿರುದ್ಯೋಗಿ ಮತ್ತು ವಿದ್ಯಾವಂತ ಯುವಕರಿಗೆ ತಮ್ಮ ಪ್ರಭಾವದ ಮೂಲಕ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದರು. ರೈಲ್ವೆ, ಆದಾಯ ತೆರಿಗೆ, ನೀರಾವರಿ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನೇಮಕಾತಿಗಳ ಭರವಸೆ ನೀಡಿದ್ದರು. ಆದರೆ, ಹಣ ಸಂಗ್ರಹಿಸಿ ಯುವಕರಿಗೆ ವಂಚನೆ ಮಾಡಿದ್ದಾರೆ. ಉತ್ತರ ಕರ್ನಾಟಕದ 40ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಿಂದ ₹5.3 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ದೂರಿನ ನಂತರ, ಸಿಸಿಬಿಯ ಸಂಘಟಿತ ಅಪರಾಧ ವಿಭಾಗ (ಪೂರ್ವ) ತನಿಖೆಯನ್ನು ಪ್ರಾರಂಭಿಸಿತು. 2023 ಮತ್ತು 2025ರ ನಡುವೆ ನಡೆದಿದೆ ಎನ್ನಲಾದ ಹಣಕಾಸಿನ ವಹಿವಾಟುಗಳ ದಾಖಲೆ ಪರಿಶೀಲಿಸಿತು. ಹೆಚ್ಚಿನ ವಹಿವಾಟುಗಳು ಆನ್‌ಲೈನ್‌ನಲ್ಲಿ ನಡೆದಿವೆ.

ವಿಜಯಪುರದ ದೂರುದಾರರೊಬ್ಬರಿಗೆ ಮಾತ್ರ ₹2.5 ಕೋಟಿಗೂ ಹೆಚ್ಚು ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅವರು ತನಗೆ ಪರಿಚಿತ ಜನರಿಗೆ ಉದ್ಯೋಗ ಕೊಡಿಸುವುದಾಗಿ ತನ್ನ ಸಂಬಂಧಿಕರು ಮತ್ತು ಆಪ್ತರಿಂದ ಹಣ ಸಂಗ್ರಹಿಸಿದ್ದರು ಎನ್ನಲಾಗಿದೆ.

ಆರೋಪಿಗಳು ನಕಲಿ ನೇಮಕಾತಿ ಪತ್ರಗಳನ್ನು ನೀಡಿ, ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ಅಭ್ಯರ್ಥಿಗಳನ್ನು ಆಕರ್ಷಿಸಲು ಅವರು ಕೆಲವು ಸಂತ್ರಸ್ತರಿಗೆ ನಾಲ್ಕು ತಿಂಗಳ ಸಂಬಳ ನೀಡಿದ್ದಾರೆ. ಅವರು ಪ್ರತಿಯೊಬ್ಬರಿಂದ ₹5 ಲಕ್ಷದಿಂದ ₹10 ಲಕ್ಷವರೆಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ತನಿಖೆಯ ನಂತರ, ಜೂನ್ 4 ರಂದು ಇಬ್ಬರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಂಚನೆಯಲ್ಲಿ ಭಾಗಿಯಾಗಿರಬಹುದಾದ ಇತರ ಕುಟುಂಬ ಸದಸ್ಯರು ಮತ್ತು ಸಹಚರರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಲಿಗೆ ಮಾಡಿದ ಹಣವನ್ನು ಪತ್ತೆಹಚ್ಚಲು ಮತ್ತು ವಸೂಲಿ ಮಾಡಲು ತನಿಖೆ ಮುಂದುವರೆದಿದೆ.

ನಕಲಿ ಅಂಕಪಟ್ಟಿಗಳ ಜಾಲ ಬಯಲು

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿಗಳನ್ನು ನೀಡಿ ಪ್ರವೇಶ ಮತ್ತು ಪದವಿ ಕೊಡಿಸುವ ನೆಪದಲ್ಲಿ ಹಣ ವಸೂಲಿ ಮಾಡಿದ್ದಕ್ಕಾಗಿ ಸಿಸಿಬಿ ಪೊಲೀಸರು ಡಿಜಿಟಲ್ ದೂರ ಶಿಕ್ಷಣ ಮಿಷನ್ (ಡಿಡಿಇಎಂ) ಮಾಲೀಕರು ಮತ್ತು ಇತರರನ್ನು ಬಂಧಿಸಿದ್ದಾರೆ.

ಶುಕ್ರವಾರ ದಾಖಲಾಗಿರುವ ದೂರಿನ ಪ್ರಕಾರ, ಕೋರಮಂಗಲದಲ್ಲಿ ಡಿಡಿಇಎಂ ಮಾಲೀಕ ರಾಜಾರೆಡ್ಡಿ ಎಂಬ ಆರೋಪಿ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗಳನ್ನು ಪಡೆದು ತನ್ನ ಸಂಸ್ಥೆಯ ನೌಕರರ ಮೂಲಕ ಸಂಪರ್ಕಿಸಿ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಭರವಸೆ ನೀಡಿದ್ದ.

ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಇತರ ಕಡ್ಡಾಯ ಶೈಕ್ಷಣಿಕ ಅರ್ಹತೆಗಳನ್ನು ಪೂರ್ಣಗೊಳಿಸದೆಯೇ ಪದವಿ ಪರೀಕ್ಷೆಗಳಿಗೆ ನೇರವಾಗಿ ಹಾಜರಾಗಬಹುದು ಎಂದು ಆಮಿಷವೊಡ್ಡಲಾಗಿತ್ತು. ಆರೋಪಿಗಳು ವಿದ್ಯಾರ್ಥಿಗಳಿಂದ ₹30,000 ರಿಂದ ₹50,000 ವರೆಗೆ ಶುಲ್ಕ ವಿಧಿಸಿದ್ದರು ಎಂದು ವರದಿಯಾಗಿದೆ.

ತನಿಖೆಯಲ್ಲಿ ರಾಜಾರೆಡ್ಡಿ, ಆರ್ಯನ್ ಮತ್ತು ಇತರರೊಂದಿಗೆ ಶಾಮೀಲಾಗಿ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಕೊರಿಯರ್ ಸೇವೆಗಳ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಿರುವುದು ಬೆಳಕಿಗೆ ಬಂದಿದೆ. 2025-26ರ ಶೈಕ್ಷಣಿಕ ವರ್ಷದಲ್ಲಿ 50ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ರಚಿಸಿ ವಿತರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಈ ದಂಧೆಯಲ್ಲಿ ತೊಡಗಿದ್ದು, ನಿಜವಾದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ದಂಧೆಯನ್ನು ಭೇದಿಸಲಾಗಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com