ಪಾಟ್ನಾ: ನನ್ನ ಮತ್ತು ನನ್ನ ತಂದೆ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಹತ್ಯೆಗೆ ತಮ್ಮ ಮಾಜಿ ಆಪ್ತ ಸಂಚು ರೂಪಾಸಿದ್ದಾರೆ ಎಂದು ಜನಶಕ್ತಿ ಜನತಾ ದಳ(ಜೆಜೆಡಿ) ಮುಖ್ಯಸ್ಥ ಹಾಗೂ ಲಾಲು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಶುಕ್ರವಾರ ಸಚಿವಾಲಯ ಪೊಲೀಸ್ ಠಾಣೆಗೆ ತೇಜ್ ಪ್ರತಾಪ್ ಅವರು ದೂರು ನೀಡಿದ್ದು, ತಮ್ಮ ಮಾಜಿ ಆಪ್ತ ಆಕಾಶ್ ಯಾದವ್ ಮತ್ತು ಅವರ ಕುಟುಂಬವು, ತನ್ನ ಮತ್ತು ತಮ್ಮ ಅಸ್ವಸ್ಥ ತಂದೆಯನ್ನು ಕೊಲ್ಲಲು ಸಂಚು ರೂಪಿಸಿದೆ ಎಂದು ಆರೋಪಿಸಿದ್ದಾರೆ.
"ನನ್ನ ದೂರಿನ ಆಧಾರದ ಮೇಲೆ, ಆಕಾಶ್ ಯಾದವ್, ಅವರ ಸಹೋದರಿ ಅನುಷ್ಕಾ ಯಾದವ್ ಮತ್ತು ಇತರ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅವರು ನನ್ನ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನನ್ನ ತಂದೆ ಲಾಲು ಪ್ರಸಾದ್ ಜಿ ಅಸ್ವಸ್ಥರಾಗಿದ್ದಾರೆ... ಅವರನ್ನೂ ಮತ್ತು ನನ್ನನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ" ಎಂದು ಯಾದವ್ ವರದಿಗಾರರಿಗೆ ತಿಳಿಸಿದ್ದಾರೆ.
ತಮಗೆ ಮತ್ತು ತಮ್ಮ ತಂದೆಗೆ ಸೂಕ್ತ ಭದ್ರತೆ ಒದಗಿಸುವಂತೆ ತೇಜ್ ಪ್ರತಾಪ್ ಯಾದವ್ ಅವರು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ಮನವಿ ಮಾಡಿದ್ದಾರೆ.
"ಅವರು(ಆಕಾಶ್ ಯಾದವ್) ವಿರೋಧ ಪಕ್ಷದ ಜೊತೆ ಶಾಮೀಲಾಗಿ ನನ್ನನ್ನು ಕೊಲ್ಲಲು ಬಯಸುತ್ತಿರುವ ಸಾಧ್ಯತೆಯಿದೆ" ಎಂದು ಅವರು ಆರೋಪಿಸಿದರು.
ದೂರಿನಲ್ಲಿ ಅನುಷ್ಕಾ ಯಾದವ್ ಅವರ ಹೆಸರು ಸಹ ಇದ್ದು, ಈ ಹಿಂದೆ, ತೇಜ್ ಪ್ರತಾಪ್ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದರೂ ಅವರೊಂದಿಗೆ ಸಂಬಂಧ ಹೊಂದಿರುವ ಆರೋಪ ಕೇಳಿಬಂದಿತ್ತು.
ಈ ಬೆಳವಣಿಗೆಯ ನಂತರ ತಂದೆ ಲಾಲು ಪ್ರಸಾದ್ ಯಾದವ್ ಅವರು, ತೇಜ್ ಪ್ರತಾಪ್ ಅವರನ್ನು ಆರ್ಜೆಡಿಯಿಂದ ಹೊರಹಾಕಿದ್ದರು. ಆದರೆ ಮಾಜಿ ಸಚಿವ ತೇಜ್ ಪ್ರತಾಪ್ ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದರು ಮತ್ತು ಇದು "ಹ್ಯಾಕ್" ಮಾಡಲಾದ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಿಂದ ಉಂಟಾದ ಗೊಂದಲ ಎಂದು ಹೇಳಿಕೊಂಡಿದ್ದರು.