ಮುಂಬೈ: ಶಿವಸೇನೆ(ಯುಬಿಟಿ) ತೊರೆದು ತಮ್ಮ ಶಿವಸೇನೆ ಬಣಕ್ಕೆ ಸೇರಿದ ಕೆಲವು ಸಂಸತ್ ಸದಸ್ಯರಿಗೆ ಅಭಿವೃದ್ಧಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ಹೇಳಿದ್ದಾರೆ. ಅಲ್ಲದೆ ಅವರು ಪಕ್ಷಾಂತರದ ನಂತರದ ಅವರ ಕಳವಳಗಳನ್ನು ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷ ಶಿವಸೇನೆ(ಯುಬಿಟಿ)ಯ ಆರು ಸಂಸದರು ಸೋಮವಾರ ಶಿಂಧೆ ನೇತೃತ್ವದ ಆಡಳಿತಾರೂಢ ಶಿವಸೇನೆಗೆ ಸೇರಿದ ನಂತರ ಈ ಬೆಳವಣಿಗೆ ನಡೆದಿದೆ. ಇದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.
ವಿರೋಧ ಪಕ್ಷದಲ್ಲಿ ಕುಳಿತಿದ್ದಾಗ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಸಾಕಷ್ಟು ಹಣ ನೀಡುತ್ತಿಲ್ಲ ಎಂದು ಸಂಸದರು ಹೇಳಿದ್ದರು. ಹೀಗಾಗಿ ಅವರು ಆಡಳಿತ ಪಕ್ಷಕ್ಕೆ ಬಂದ ನಂತರ ಅವರ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಶಿಂಧೆ ಹೇಳಿದ್ದಾರೆ.
"ಶಿವಸೇನೆ ಸೇರಿದ ಕೆಲವು ಲೋಕಸಭಾ ಸದಸ್ಯರಿಗೆ ಈಗಾಗಲೇ ಹಣವನ್ನು ಬಿಡುಗಡೆ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರವನ್ನು ಬೆಂಬಲಿಸುತ್ತಾರೆ ಮತ್ತು ರಾಜ್ಯಕ್ಕೆ ಸಾಕಷ್ಟು ಹಣವನ್ನು ನೀಡಿದ್ದಾರೆ. ಅದಕ್ಕಾಗಿಯೇ ಈ ಸಂಸದರು ಸೇನಾ ಮಡಿಲಿಗೆ ಬಂದಿದ್ದಾರೆ" ಎಂದು ಶಿಂಧೆ ಹೇಳಿದರು.
ಆದರೆ ಯಾವ ಸಂಸದರಿಗೆ ಶಿವಸೇನಾ ಮುಖ್ಯಸ್ಥರು ಅಭಿವೃದ್ಧಿ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ.
ಶಿವಸೇನೆ(ಯುಬಿಟಿ)ಯ ಸಂಸದರಾದ ಸಂಜಯ್ ದೇಶಮುಖ್(ಯವತ್ಮಾಲ್), ಸಂಜಯ್ ಜಾಧವ್(ಪರ್ಭಾನಿ), ಸಂಜಯ್ ದಿನಾ ಪಾಟೀಲ್(ಮುಂಬೈ ಈಶಾನ್ಯ), ನಾಗೇಶ್ ಪಾಟೀಲ್-ಅಶ್ತಿಕರ್(ಹಿಂಗೋಲಿ), ಓಂಪ್ರಕಾಶ್ ರಾಜೇನಿಂಬಾಳ್ಕರ್(ಧಾರಶಿವ್) ಮತ್ತು ಭೌಸಾಹೇಬ್ ವಾಕ್ಚೌರೆ(ಶಿರಡಿ) ಅವರು ನಿನ್ನೆ ಶಿಂಧೆ ಬಣ ಸೇರಿದ್ದರು.