ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮಂಗಳವಾರ ರಾತ್ರಿ ಚಲಿಸುತ್ತಿದ್ದ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.
ಭಾರೀ ಮಳೆಯ ಕಾರಣದಿಂದ ಬೋಗಿಯ ಬಾಗಿಲು ಮುಚ್ಚುವ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದ್ದು, ಗಲಾಟೆಯಲ್ಲಿ 21 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕನನ್ನು ಮಯಾಂಕ್ ಲೋಹರ್ ಎಂದು ಗುರುತಿಸಲಾಗಿದ್ದು, ಚರ್ಚ್ಗೇಟ್-ನಲ್ಲಸೋಪರಾ ಫಾಸ್ಟ್ ಲೋಕಲ್ ರೈಲಿನ ಪ್ರಥಮ ದರ್ಜೆ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದಾಗ, ಗೋರೆಗಾಂವ್ ಮತ್ತು ಕಂಡಿವಲಿ ನಡುವೆ ಮತ್ತೊಬ್ಬ ಪ್ರಯಾಣಿಕನೊಂದಿಗೆ ತೀವ್ರ ವಾಗ್ವಾದ ನಡೆದಿದೆ.
ಕೊಲೆ ಆರೋಪಿ ರೋಷನ್ ಸುವರ್ಣನನ್ನು ಮುಂಬೈನ ಕುರ್ಲಾ ಪ್ರದೇಶದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕಪ್ಪು ಬಟ್ಟೆ ಧರಿಸಿ ಚಾಕು ಹಿಡಿದುಕೊಂಡು ಯುವಕನ ಮೇಲೆ ದಾಳಿ ಮಾಡಿದ ಆರೋಪಿಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ರೈಲಿನ ಸೀಟುಗಳ ಮೇಲೆ ರಕ್ತದ ಕಲೆಗಳು ಹರಡಿರುವುದನ್ನು ಕಾಣಬಹುದು. ರೈಲಿನಲ್ಲಿದ್ದ ಯಾವುದೇ ಪ್ರಯಾಣಿಕರು ಆರೋಪಿಯನ್ನು ತಡೆಯಲು ಅಥವಾ ಹಿಡಿಯಲು ಪ್ರಯತ್ನಿಸಲಿಲ್ಲ ಎಂಬುದು ವಿಡಿಯೋದಲ್ಲಿ ಸೆರೆಯಾಗಿದೆ.
ಪಶ್ಚಿಮ ರೈಲ್ವೆ ಪೊಲೀಸರ ಪ್ರಕಾರ, ಕೆಲವು ಪ್ರಯಾಣಿಕರು ಆರೋಪಿ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸುವ ಹಂತಕ್ಕೆ ಗಲಾಟೆ ಉಲ್ಬಣಗೊಂಡಿತು. ಆದರೆ ಇದರಿಂದ ಆಕ್ರೋಶಗೊಂಡ ಆರೋಪಿ ತನ್ನ ಬ್ಯಾಗ್ನಿಂದ ಚಾಕು ತೆಗೆದು ಲೋಹರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
"ಗೋರೆಗಾಂವ್ ಮತ್ತು ಕಂಡಿವಲಿ ನಡುವೆ, ಇಬ್ಬರು ಪ್ರಯಾಣಿಕರು ಮಳೆಯ ನಡುವೆ ರೈಲಿನ ಬಾಗಿಲು ಮುಚ್ಚುವ ವಿಚಾರಕ್ಕೆ ಜಗಳವಾಡಿದ್ದಾರೆ. ಈ ಸಮಯದಲ್ಲಿ, ಆರೋಪಿ, ಯುವಕನಿಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಅವನು ಸ್ಥಳದಿಂದ ಪರಾರಿಯಾಗಿದ್ದಾನೆ," ಎಂದು ಬೊರಿವಲಿ ರೈಲ್ವೆ ಪೊಲೀಸ್ನ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ದತ್ತಾ ಖುಪ್ರೇಕರ್ ಹೇಳಿದ್ದಾರೆ.