ಮುಂಬೈ: ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದ ಸಂಜಯ್ ರಾವತ್ ಅವರು ಗುರುವಾರ ಮುಂಬೈ ಪೊಲೀಸ್ ಆಯುಕ್ತ ದೇವನ್ ಭಾರ್ತಿ ಅವರಿಗೆ ಪತ್ರ ಬರೆದು, ಇತ್ತೀಚೆಗೆ ಆಡಳಿತಾರೂಢ ಶಿವಸೇನೆಗೆ ಸೇರ್ಪಡೆಗೊಂಡ ಸಂಸದ ಸಂಜಯ್ ದಿನಾ ಪಾಟೀಲ್ ಅವರು, ಪ್ರತಿಭಟನಾಕಾರರ ಮೇಲೆ 'ಬಾಂಬ್ ಎಸೆಯುವುದಾಗಿ' ಬೆದರಿಕೆ ಹಾಕಿದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ರಾವತ್ ಮತ್ತು ಪಾಟೀಲ್ ನಡುವಿನ ಮಾತಿನ ಚಕಮಕಿ, ಪತ್ರದ ಬಗ್ಗೆ ಇಂದು ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಬೆದರಿಕೆ ಹಾಕುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇಬ್ಬರು ನಾಯಕರ ನಡುವಿನ ಜಗಳಕ್ಕೆ ಪ್ರತಿಕ್ರಿಯಿಸಿದ ಫಡ್ನವೀಸ್, ಯಾರೂ ಬೆದರಿಕೆಗಳಿಗೆ ಹೆದರಬಾರದು ಮತ್ತು ರಾಜ್ಯವು ಅಂತಹ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಪ್ರತಿಪಾದಿಸಿದರು.
ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ, ಪಾಟೀಲ್ ಅವರ ಆಪಾದಿತ ಹೇಳಿಕೆಗಳು ಭಯೋತ್ಪಾದನೆ ಮತ್ತು ಕ್ರಿಮಿನಲ್ ಉದ್ದೇಶಕ್ಕೆ ಸಮಾನವಾಗಿವೆ ಎಂದು ಹಾವತ್ ಹೇಳಿದ್ದಾರೆ.
ಇತ್ತೀಚೆಗೆ ಉದ್ಧವ್ ಠಾಕ್ರೆ ನೇತೃತ್ವದ ಸೇನಾ-ಯುಬಿಟಿಯಿಂದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಸೇರಿದ ಆರು ಸಂಸದರಲ್ಲಿ ದಿನಾ ಪಾಟೀಲ್ ಅವರು ಒಬ್ಬರಾಗಿದ್ದಾರೆ.
ಠಾಕ್ರೆ ಬಣ ತೊರೆದ ಸಂಸದರ ವಿರುದ್ಧ ಮಹಾರಾಷ್ಟ್ರದ ಜನರಲ್ಲಿ ಅಪಾರ ಕೋಪವಿದೆ ಮತ್ತು ಮತದಾರರಿಗೆ 'ದ್ರೋಹ' ಮಾಡಲಾಗಿದೆ ಎಂದು ಜನ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಪ್ರತಿಭಟನೆ ನಡೆಸುವುದು ಮತ್ತು ಚುನಾಯಿತ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಜನರ ಹಕ್ಕು ಎಂದು ರಾವತ್ ಹೇಳಿದ್ದಾರೆ.
ಆದಾಗ್ಯೂ, ಮುಂಬೈ ಈಶಾನ್ಯ ಸಂಸದ ಸಂಜಯ್ ದಿನಾ ಪಾಟೀಲ್ ಅವರು, ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಾರಾದರೂ ತನ್ನ ವಿರುದ್ಧ ಪ್ರತಿಭಟಿಸಿದರೆ, ಅವರ ಮೇಲೆ 'ಬಾಂಬ್ಗಳನ್ನು ಎಸೆಯುತ್ತೇನೆ', ಅವರ ಮನೆಗಳಿಗೆ ನುಗ್ಗಿ 'ಹೊಡೆಯುತ್ತೇನೆ' ಎಂದು ಪಾಟೀಲ್ ಹೇಳಿದ್ದಾರೆ ಎಂದು ರಾವತ್ ಆರೋಪಿಸಿದ್ದಾರೆ.