ನವದೆಹಲಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಬಂದಿರುವ ದೇಣಿಗೆ ದುರ್ಬಳಕೆ ಆರೋಪಗಳ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
"ಆಕಾಶವೇನೂ ಕಳಚಿ ಬೀಳುವುದಿಲ್ಲ... ಇಷ್ಟು ತುರ್ತು ಏನಿದೆ?" ಎಂದು ಮೌಖಿಕವಾಗಿ ಪ್ರಶ್ನಿಸಿದ ನ್ಯಾಯಪೀಠ, ಪ್ರಕರಣವನ್ನು ಬೇಸಿಗೆ ರಜೆ ಬಳಿಕ ವಿಚಾರಣೆಗೆ ಪಟ್ಟಿ ಮಾಡುವುದಾಗಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಕೀಲರಾದ ಅಜಯ್ ಕುಮಾರ್ ರೈ ಮತ್ತು ದಿನೇಶ್ ಕುಮಾರ್ ಯಾದವ್ ಸಲ್ಲಿಸಿರುವ ಅರ್ಜಿಯಲ್ಲಿ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಆಡಳಿತ ಹಾಗೂ ದೇಣಿಗೆ ಹಣದ ದುರ್ಬಳಕೆ ಕುರಿತ ಆರೋಪಗಳ ಬಗ್ಗೆ ಸಿಬಿಐ ನೇತೃತ್ವದ ಬಹುಶಾಖಾ ವಿಶೇಷ ತನಿಖಾ ತಂಡ (SIT) ರಚಿಸಿ ನಿಗದಿತ ಅವಧಿಯೊಳಗೆ ನ್ಯಾಯಸಮ್ಮತ ತನಿಖೆ ನಡೆಸುವಂತೆ ಕೋರಲಾಗಿದೆ.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಹಾಗೂ ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಮತ್ತು ಟ್ರಸ್ಟ್ಗೆ ಅಗತ್ಯ ನಿಯಂತ್ರಣ, ಮೇಲ್ವಿಚಾರಣೆ ಹಾಗೂ ಲೆಕ್ಕಪರಿಶೋಧನಾ ವ್ಯವಸ್ಥೆ ರೂಪಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.
ರಾಮ ಮಂದಿರಕ್ಕೆ ಬಂದಿರುವ ದೇಣಿಗೆ ಹಣ ಕಾಣೆಯಾಗಿರುವುದು ಹಾಗೂ ಹಣಕಾಸು ಅಕ್ರಮಗಳು ನಡೆದಿವೆ ಎಂಬ ವರದಿಗಳು ಸತ್ಯವೋ ಸುಳ್ಳೋ ಎಂಬುದು ಸ್ವತಂತ್ರ ತನಿಖೆಯಿಂದ ಸ್ಪಷ್ಟವಾಗಬೇಕು ಎಂದು ಅರ್ಜಿಯಲ್ಲಿ, ತಿಳಿಸಲಾಗಿದೆ.
"ಈ ಆರೋಪಗಳು ಅಂತಿಮವಾಗಿ ಸಾಬೀತಾಗಲಿ ಅಥವಾ ಆಗದಿರಲಿ, ಇವು ಕೋಟ್ಯಂತರ ಭಕ್ತರಲ್ಲಿ ಆತಂಕ ಮತ್ತು ಅನುಮಾನ ಹುಟ್ಟಿಸಿವೆ. ಆದ್ದರಿಂದ ಸ್ವತಂತ್ರ ಹಾಗೂ ಪರಿಣತ ತನಿಖಾ ಸಂಸ್ಥೆಯ ಮೂಲಕ ಸತ್ಯಾಸತ್ಯತೆ ಪರಿಶೀಲನೆಯಾಗಬೇಕು.
ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಎಸ್ಐಟಿ ಯಾವುದೇ ಎಫ್ಐಆರ್ ದಾಖಲಿಸದೇ ತನಿಖೆ ಆರಂಭಿಸಿರುವುದು ಸೂಕ್ತವಲ್ಲ. ಆಡಳಿತಾಧಿಕಾರಿಗಳ ತಂಡಕ್ಕಿಂತ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡದಿಂದ ತನಿಖೆ ನಡೆದರೆ ಸಾರ್ವಜನಿಕರಲ್ಲಿ ಹೆಚ್ಚಿನ ವಿಶ್ವಾಸ ಮೂಡಲಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಜೂನ್ 13ರಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ರಾಮ ಮಂದಿರಕ್ಕೆ ಬಂದ ದೇಣಿಗೆಯ ದುರ್ಬಳಕೆ ಆರೋಪಗಳ ಹಿನ್ನೆಲೆಯಲ್ಲಿ ಈ ತನಿಖೆ ಆರಂಭಿಸಲಾಗಿದೆ.
ಈ ಎಸ್ಐಟಿಯಲ್ಲಿ ಲಖನೌ ವಿಭಾಗದ ಆಯುಕ್ತ ವಿಜಯ್ ವಿಶ್ವಾಸ್ ಪಂತ್, ಐಜಿಪಿ ಕಿರಣ್ ಎಸ್ ಹಾಗೂ ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಸದಸ್ಯರಾಗಿದ್ದಾರೆ.