ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್  
ದೇಶ

Thalapathy Vijay- ಪತ್ನಿಯಿಂದ ವಿಚ್ಛೇದನ ಸುದ್ದಿ ಬೆನ್ನಲ್ಲೇ ತಮಿಳು ನಾಡು ಮಹಿಳೆಯರಿಗೆ TVK ಮುಖ್ಯಸ್ಥ ವಿಜಯ್ ಭರಪೂರ ಘೋಷಣೆ: ಅಧಿಕಾರಕ್ಕೆ ಬಂದರೆ ಏನೇನು ಕೊಡ್ತಾರಂತೆ ನೋಡಿ!-Video

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಮಲ್ಲಾಪುರಂನಲ್ಲಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧಿಪ್ಪುಮಿಗು ಮಗಳಿರ್ ತಿಟ್ಟಮ್ ಅಡಿಯಲ್ಲಿ 60 ವರ್ಷ ವಯಸ್ಸಿನವರೆಗೆ ಇರುವ ಎಲ್ಲ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ಭತ್ಯೆ ನೀಡಲಾಗುತ್ತದೆ ಎಂದು ಹೇಳಿದರು

ತಮಿಳುನಾಡಿನ ಪ್ರಮುಖ ದ್ರಾವಿಡ ಪಕ್ಷಗಳ ಜನಪರ ಚುನಾವಣಾ ತಂತ್ರವನ್ನು ಅನುಸರಿಸಿ, ತಮಿಳಿಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್, ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಕೇಂದ್ರಿತ ಹಲವು ಚುನಾವಣಾ ಭರವಸೆಗಳನ್ನು ಘೋಷಿಸಿದರು.

ಇದರಲ್ಲಿ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ಭತ್ಯೆ, ರಾಜ್ಯದಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮತ್ತು ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಅಡುಗೆ ಅನಿಲ ಸಿಲಿಂಡರ್ ನೀಡುವ ಭರವಸೆಗಳೂ ಸೇರಿವೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಮಲ್ಲಾಪುರಂನಲ್ಲಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧಿಪ್ಪುಮಿಗು ಮಗಳಿರ್ ತಿಟ್ಟಮ್ (Madhippumigu Magalir Scheme) ಅಡಿಯಲ್ಲಿ 60 ವರ್ಷ ವಯಸ್ಸಿನವರೆಗೆ ಇರುವ ಎಲ್ಲ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ಭತ್ಯೆ ನೀಡಲಾಗುತ್ತದೆ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.

ಅದೇ ವೇಳೆ ಅವರು ಡಿಎಂಕೆ ಸರ್ಕಾರವನ್ನು ಟೀಕಿಸಿ, ಮಹಿಳೆಯರಿಗೆ ನೀಡುತ್ತಿರುವ 1,000 ರೂಪಾಯಿ ಹಕ್ಕುಧನ ಮೂಲಭೂತ ಖರ್ಚುಗಳನ್ನು ಕೂಡ ಪೂರೈಸಲು ಸಾಕಾಗುವುದಿಲ್ಲ ಎಂದು ಹೇಳಿದರು.

ಅನ್ನಪೂರಣಿ ಸೂಪರ್ ಸಿಕ್ಸ್ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೂ ವರ್ಷಕ್ಕೆ ಆರು ಎಲ್ ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಿಸಿದರು.

ಅಣ್ಣನ್ ಸೀರ್ ತಿಟ್ಟಮ್ (Annan Seer Scheme) ಅಡಿಯಲ್ಲಿ ಮದುವೆಯಾಗುವ ವಧುವಿಗೆ ಒಂದು ಪವನ್ ಚಿನ್ನ ಮತ್ತು ಉತ್ತಮ ಗುಣಮಟ್ಟದ ರೇಷ್ಮೆ ಸೀರೆ ಉಚಿತವಾಗಿ ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ಹೇಳಿದರು.

ಶಾಲಾ ತೊರೆಯುವಿಕೆ ತಡೆಗಟ್ಟುವಿಕೆ

ಆರ್ಥಿಕ ಸಂಕಷ್ಟದ ಕಾರಣದಿಂದ ಶಾಲೆ ಬಿಟ್ಟು ಹೋಗುವ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಕಾಮರಾಜರ್ ಕಲ್ವಿ ಉರುಧಿ ತಿಟ್ಟಮ್ (Kamarajar Education Assurance Scheme) ಜಾರಿಗೆ ತರಲಾಗುತ್ತದೆ. ಇದರಡಿ ಶಾಲಾ ಮಕ್ಕಳ ತಾಯಿ ಅಥವಾ ಪಾಲಕರಿಗೆ ವರ್ಷಕ್ಕೆ 15,000 ರೂಪಾಯಿ ನೆರವು ನೀಡಲಾಗುತ್ತದೆ.

ವೆತ್ರಿ ಪಯಣಂ ತಿಟ್ಟಮ್ ಅಡಿಯಲ್ಲಿ ತಮಿಳುನಾಡಿನಾದ್ಯಂತ ಮಹಿಳೆಯರು ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ವಿಜಯ್ ಹೇಳಿದರು. ಥಾಯಿ ಮಾಮನ್ ತಂಗ ಮೋಧಿರಂ ತಿಟ್ಟಮ್ ಅಡಿಯಲ್ಲಿ ತಮಿಳುನಾಡಿನಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗೂ ಚಿನ್ನದ ಉಂಗುರ ಮತ್ತು ಪೌಷ್ಠಿಕ ಆಹಾರ, ಬಟ್ಟೆ, ಸಾಬೂನು, ಎಣ್ಣೆ, ಪುಡಿ, ಮಶಕ ಜಾಲರಿ, ಆಟಿಕೆಗಳು ಮತ್ತು ಡೈಪರ್‌ಗಳನ್ನು ಒಳಗೊಂಡ “ಬೇಬಿ ವೆಲ್ಕಮ್ ಕಿಟ್” ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಸಿಂಗ ಪೆಂಗಲ್ ಮೆಂಬಟ್ಟು ತಿಟ್ಟಮ್ ಅಡಿಯಲ್ಲಿ ಸ್ವಸಹಾಯ ಗುಂಪುಗಳಿಗೆ (SHGs) ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು 5 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ನೀಡಲಾಗುತ್ತದೆ. SHGಗಳಿಂದ ಆರಂಭವಾಗುವ ನೋಂದಾಯಿತ MSMEಗಳಿಗೆ ವರ್ಷಕ್ಕೆ 5 ಲಕ್ಷ ರೂಪಾಯಿ ಸಂಪೂರ್ಣ ಸಬ್ಸಿಡಿ ನೀಡಲಾಗುತ್ತದೆ ಎಂದರು.

ಮಹಿಳೆಯರ ಸುರಕ್ಷತೆ

ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಗಾಗಿ ಪ್ರತ್ಯೇಕ ಅಭಿವೃದ್ಧಿ ಇಲಾಖೆಯನ್ನು ರಚಿಸಲಾಗುತ್ತದೆ ಮತ್ತು ಅದು ತಮ್ಮ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವಿಜಯ್ ಹೇಳಿದರು.

ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಶೂನ್ಯ ಸಹಿಷ್ಣುತೆ ತೋರಿಸಲು ರಾಣಿ ವೇಲುನಾಚಿಯಾರ್ ಪಡೆ (Rani Velunachiyar Force) ರಚಿಸಲಾಗುತ್ತದೆ. ಮಹಿಳಾ ಪೊಲೀಸರನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಯೋಜಿಸಲಾಗುತ್ತದೆ. ರಾಜ್ಯದಾದ್ಯಂತ 500 ಮಹಿಳಾ ಭದ್ರತಾ ತಂಡಗಳನ್ನು ರಚಿಸಲಾಗುತ್ತದೆ.

ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಶೀಘ್ರವಾಗಿ ನಿರ್ವಹಿಸಲು ಅಂಜಲೈ ಅಮ್ಮಾಳ್ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಗಳು ಸ್ಥಾಪಿಸಲಾಗುತ್ತವೆ. ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಶೇರ್ ಆಟೋ ಸೇರಿ ಎಲ್ಲಾ ವಾಹನಗಳಲ್ಲಿ ಸ್ಮಾರ್ಟ್ ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗುತ್ತದೆ. ಬಟನ್ ಒತ್ತಿದ ಐದು ನಿಮಿಷಗಳೊಳಗೆ ಅಧಿಕಾರಿಗಳು ಸ್ಪಂದಿಸುವಂತೆ ಕೇಂದ್ರ ನಿಯಂತ್ರಣ ಕೇಂದ್ರ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಬೆಳಕು ವ್ಯವಸ್ಥೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಡಾರ್ಕ್ ಸ್ಪಾಟ್‌ಗಳು ಇಲ್ಲದಂತೆ ಮಾಡಲಾಗುತ್ತದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಅಂಗಡಿಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

ಇವು ಕೇವಲ ಕೆಲವು ಚುನಾವಣಾ ಭರವಸೆಗಳ ಉದಾಹರಣೆಗಳಷ್ಟೇ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಘೋಷಣೆಗಳನ್ನು ಮಾಡುವುದಾಗಿ ವಿಜಯ್ ತಿಳಿಸಿದರು.

ಎಂ ಕೆ ಸ್ಟಾಲಿನ್ ನೇತೃತ್ವದ ಸರ್ಕಾರವನ್ನು ಟೀಕಿಸಿ, ತಮಿಳುನಾಡಿನ ಬಜೆಟ್‌ನ ಸುಮಾರು ಶೇಕಡಾ 30ರಷ್ಟು ಹಣ ಸ್ಟಾಲಿನ್ ಸರ್ ತೆರಿಗೆ ಎಂಬ ಹೆಸರಿನಲ್ಲಿ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು. ಶೇಕಡಾ 20 ಸ್ಟಾಲಿನ್ ಮತ್ತು ಶೇಕಡಾ 10ರಷ್ಟು ಮಂತ್ರಿಗಳಿಗೆ ಹೋಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾನ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕ ಮೇಲೆ ಇಸ್ರೇಲ್ ದಾಳಿ, ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಯುದ್ಧ-Video

ಭಾರತೀಯ ಅಭಿಮಾನಿಗಳ ಹೃದಯ ಒಡೆಯಬೇಕು: ಮಿಚೆಲ್ ಸ್ಯಾಂಟ್ನರ್'ಗೆ ಸೂರ್ಯಕುಮಾರ್ ತಿರುಗೇಟು!

T20 World Cup 2026 Final: ಭಾರತದ ಸಂಭಾವ್ಯ ಪ್ಲೇಯಿಂಗ್ XI vs ನ್ಯೂಜಿಲೆಂಡ್; ವಿಶ್ವದ ನಂ.1 ಬೌಲರ್ ಔಟ್?

T20 World Cup 2026 Final: 'ಕಿವೀಸ್ ಶಾಪ'ದಿಂದ ಪಾರಾಗಲು ಭಾರತ ಈ ಮೂರು ತಪ್ಪುಗಳನ್ನು ಮಾಡಲೇಬಾರದು...

ಬೆಂಗಳೂರಿನಲ್ಲಿ ತಾಪಮಾನ ಏರಿಕೆ: ಬಿಸಿಲ ಝಳಕ್ಕೆ ಜನತೆ ತತ್ತರ, ‘AC City’ ಹೆಗ್ಗಳಿಕೆಗೆ ದಕ್ಕೆ..!

SCROLL FOR NEXT