ನವದೆಹಲಿ: ದೇಶದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ವ್ಯಕ್ತಿತ್ವ ವಿಕಸನ ಮತ್ತು ಭಾಷಾ ತರಬೇತಿ ಒದಗಿಸುವುದು ಪ್ರಮುಖವಾಗಿದೆ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಮಂಗಳವಾರ ಸಲಹೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯವೈಖರಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮಗಳು ಅಭಿವೃದ್ಧಿಯಾಗದ ಹೊರತು ದೇಶ ಪ್ರಗತಿಯಾಗುವುದಿಲ್ಲ. ಹಳ್ಳಿಗಳಲ್ಲಿನ ಗ್ರಾಮೀಣ ಜನರಿಗೆ ಕೌಶಲ್ಯ ನೀಡುವಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಆದರೆ, ಅವರಿಗೆ ತಾಂತ್ರಿಕವಾಗಿ ಕೌಶಲ ನೀಡುವುದರ ಜೊತೆಗೆ ವ್ಯಕ್ತಿತ್ವ ವಿಕಸನ ಮತ್ತು ಭಾಷಾ ತರಬೇತಿ ಒದಗಿಸುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಅಷ್ಟೇ ಮುಖ್ಯವಾಗಿದೆ ಎಂದು ಮೂರ್ತಿ ಹೇಳಿದರು.
ವಿದ್ಯುತ್ ಅನ್ನು ಸುಸ್ಥಿರವಾಗಿ ಬಳಸಿಕೊಳ್ಳುವ, ಕೃಷಿ ಮತ್ತು ಇತರ ತ್ಯಾಜ್ಯವನ್ನು ಮರುಬಳಕೆ ಮಾಡುವ ಮತ್ತು ಹವಾಮಾನಕ್ಕೆ ಅನುಗುಣವಾಗಿ ರಸ್ತೆ, ವಸತಿ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವುದು ಕೂಡಾ ಮುಖ್ಯವಾಗಿದೆ ಎಂದರು.
ಕೇಂದ್ರ ಸರ್ಕಾರದ "ಲಖಪತಿ ದೀದಿ" ಯೋಜನೆಯನ್ನು ಶ್ಲಾಘಿಸಿದ ಸುಧಾ ಮೂರ್ತಿ, ಇತರ ಸ್ವಸಹಾಯ ಗುಂಪುಗಳು ತಮ್ಮ ಯಶಸ್ಸು ಮತ್ತು ಸವಾಲುಗಳನ್ನು ಉಲ್ಲೇಖಿಸಲು ಮತ್ತು ಕಲಿಯಲು ರಾಜ್ಯವಾರು ಡೇಟಾಬೇಸ್ ರಚಿಸಲು ಸರ್ಕಾರವನ್ನು ಒತ್ತಾಯಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡ ಸಿಪಿಐ (ಎಂ) ಸಂಸದ ಜಾನ್ ಬ್ರಿಟ್ಟಾಸ್, ಗ್ರಾಮೀಣ ಸಂಕಷ್ಟದ ಪರಿಸ್ಥಿತಿಯನ್ನು ಪ್ರಸ್ತಾಪಿಸಿದರು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಪಾರ ಪ್ರಮಾಣದಲ್ಲಿ ಜನರು ವಲಸೆ ಹೋಗುತ್ತಿದ್ದಾರೆ. ಉತ್ತರ ಪ್ರದೇಶವೊಂದರಲ್ಲಿಯೇ 3 ಕೋಟಿ ವಲಸಿಗರ ಜನರಿದ್ದಾರೆ. ಬಿಹಾರದಲ್ಲಿ 2.5 ಕೋಟಿ ವಲಸಿಗರಿದ್ದಾರೆ. ಈ ಗ್ರಾಮೀಣ ಸಂಕಷ್ಟದ ಪರಿಸ್ಥಿತಿಯನ್ನು ಪರಿಶೀಲಿಸುವ ಮೂಲಕ ಸರ್ಕಾರ ಗ್ರಾಮೀಣ ಭಾರತಕ್ಕೆ ನ್ಯಾಯ ಒದಗಿಸಬೇಕಾಗಿದೆ ಎಂದು ಹೇಳಿದರು.