ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ವಿರುದ್ಧ ಜೈಪುರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
"ಭಾರತದ ಭವಿಷ್ಯ: ನಕಲಿ-ಹಿಂದೂ ಧರ್ಮ ಅಥವಾ ಜಾತ್ಯತೀತ ಭಾರತ?" ಎಂಬ ವಿಷಯದ ಕುರಿತು ಉಪನ್ಯಾಸ ನೀಡಲು ಅಯ್ಯರ್ ಅವರು ಮಾರ್ಚ್ 14 ರಂದು ಜೈಪುರಕ್ಕೆ ಭೇಟಿ ನೀಡಿದ್ದರು. ಈ ಕಾರ್ಯಕ್ರಮದಲ್ಲಿ, 2017 ರಲ್ಲಿ ಪ್ರಧಾನಿ ಬಗ್ಗೆ ಅವರು ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಸ್ಪಷ್ಟಪಡಿಸಲು ಅವರು ಪ್ರಯತ್ನಿಸಿದರು. ತಮ್ಮ ಹೇಳಿಕೆ ಮೋದಿಯವರ ಪಾತ್ರದ ಕುರಿತು. ಅವರ ಜಾತಿಯ ಬಗ್ಗೆ ಅಲ್ಲ ಎಂದು ಅಯ್ಯರ್ ಹೇಳಿದರು. ಅಲ್ಲದೆ ನಂತರ ತಮ್ಮ ಹೇಳಿಕೆಯನ್ನು ತಿರುಚಲಾಯಿತು ಎಂದರು.
ಆದಾಗ್ಯೂ, ಕಾರ್ಯಕ್ರಮದ ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಂಡ ನಂತರ, ಹಳೆಯ ವಿವಾದ ಮತ್ತೆ ಭುಗಿಲೆದ್ದಿದೆ. ಇದು ತೀಕ್ಷ್ಣವಾದ ರಾಜಕೀಯ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. ಜೈಪುರದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಅಯ್ಯರ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರಧಾನಿ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸುವುದು ರಾಷ್ಟ್ರದ ಘನತೆಗೆ ದೊಡ್ಡ ಅವಮಾನ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ ಮತ್ತು ಅಯ್ಯರ್ ಅವರು ಈ ಸಂಬಂಧ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರವಣ್ ಸಿಂಗ್ ಬಾಗ್ಡಿ ಮತ್ತು ಭೂಪೇಂದ್ರ ಸೈನಿ, ಮಾಜಿ ಸಂಸದ ರಾಮಚರಣ್ ಬೋಹ್ರಾ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸುಮನ್ ಶರ್ಮಾ ಮತ್ತು ಬಿಜೆವೈಎಂ ರಾಜ್ಯ ಅಧ್ಯಕ್ಷೆ ಶಂಕರ್ ಗೋರಾ ಸೇರಿದಂತೆ ಹಲವಾರು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಏತನ್ಮಧ್ಯೆ, ಕನೋಡಿಯಾ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯ್ಯರ್ ಅವರು ಪ್ರಧಾನಿಯ ಬಗ್ಗೆ ಅಸಭ್ಯ ಮತ್ತು ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಬಾಬುಲಾಲ್ ತನ್ವರ್ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಮಾಜದಲ್ಲಿ ಒಡಕು ಸೃಷ್ಟಿಸುವ ಮತ್ತು ಸಾರ್ವಜನಿಕ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶದಿಂದ ಈ ಹೇಳಿಕೆ ನೀಡಲಾಗಿದೆ ಮತ್ತು ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಆಧಾರದ ಮೇಲೆ ಮೇಲೆ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ಪ್ರಸ್ತುತ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿವಾದಕ್ಕೆ ಪ್ರತಿಕ್ರಿಯಿಸಿದ ಅಯ್ಯರ್, ನಾನು ಯಾವುದೇ ಜಾತಿವಾದಿ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದು, ತಮ್ಮ ಹೇಳಿಕೆಗಳು ಪ್ರಧಾನಿಯವರ ಪಾತ್ರದ ವಿರುದ್ಧವಾಗಿದೆ. ಅವರ ಜಾತಿಯ ವಿರುದ್ಧವಲ್ಲ ಎಂದು ಅವರು ಪುನರುಚ್ಚರಿಸಿದರು.
ನಾನು ಮೋದಿಯವರನ್ನು ಎಂದಿಗೂ "ಕೆಳಜಾತಿ"ಯವರು ಎಂದು ಉಲ್ಲೇಖಿಸಿಲ್ಲ. ಆದರೆ ಅವರ ನಡವಳಿಕೆಯನ್ನು ಉಲ್ಲೇಖಿಸಿ "ಕೆಳವರ್ಗದ ವ್ಯಕ್ತಿ" ಎಂಬ ಪದಗುಚ್ಛವನ್ನು ಬಳಸಿದ್ದೇನೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಯಿಸಲಾಗಿದೆ ಮತ್ತು ನಂತರ ಅದನ್ನು ಜಾತಿ ನಿಂದನೆ ಎಂದು ಪ್ರಸಾರ ಮಾಡಲಾಗಿದೆ ಎಂದು ಅಯ್ಯರ್ ಪ್ರಕಾರ ಹೇಳಿದ್ದಾರೆ.