ಯುವರಾಜ್ ದುವಾ ಅವರ ವೈರಲ್ ಆಗಿರುವ ಹಾಸ್ಯದ ವಿಡಿಯೊಗೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯರಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ಯೋಗವನ್ನು ದೈನಂದಿನ ಅಭ್ಯಾಸವಾಗಿಸಿಕೊಳ್ಳುವ ಮಹತ್ವವನ್ನು ಸಾರಿದ್ದಾರೆ.
ನಮ್ಮ ಆರೋಗ್ಯವನ್ನು ಕಾಪಾಡಲು ಸಮತೋಲನಯುತ ಆಹಾರ ಮತ್ತು ನಿಯಮಿತ ವ್ಯಾಯಾಮ ಅವಶ್ಯಕ. ವಿಶೇಷವಾಗಿ ದೇಹದ ತೂಕ ಹೆಚ್ಚಳ (obesity)ಯಂತಹ ಸಮಸ್ಯೆಗಳನ್ನು ತಡೆಯಲು ಮುಖ್ಯವಾಗಿದೆ ಎಂದು ಪ್ರಧಾನಿ ಸಾರಿದ್ದಾರೆ.
ಯುವರಾಜ್ ದುವಾ ಅವರ ಹಾಸ್ಯಭರಿತ ವಿಡಿಯೋದಲ್ಲಿ, ವಿಶೇಷವಾಗಿ ಹಿರಿಯ ಪೀಳಿಗೆಯ ಮೇಲೆ—ಅವರ ತಂದೆಯ ಮೇಲೂ—ಪ್ರಧಾನಮಂತ್ರಿಗಳ ಪ್ರಭಾವವನ್ನು ಉಲ್ಲೇಖಿಸಿದ್ದಾರೆ. ತಮ್ಮ ತಂದೆ ಸಕ್ಕರೆ ಸೇವನೆಯನ್ನು ನಿಯಂತ್ರಿಸಲು ಪ್ರಧಾನಮಂತ್ರಿಗಳ ಸಲಹೆಯನ್ನು ಪಾಲಿಸುತ್ತಾರೆ ಎಂದು ದುವಾ ಹಾಸ್ಯವಾಗಿ ಹೇಳಿದ್ದರು. ಇದು ಭಾರತೀಯ ಮನೆಮಠಗಳಲ್ಲಿ ಪ್ರಧಾನಮಂತ್ರಿಗಳ ಪ್ರಭಾವವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಯುವರಾಜ್ ದುವಾ ಅವರ ಈ ಹಾಸ್ಯಮಯ ಸೂಚನೆಗೆ ಪ್ರತಿಕ್ರಿಯೆವಾಗಿ, ಪ್ರಧಾನಮಂತ್ರಿ ಮೋದಿ ಇನ್ಸ್ಟಾಗ್ರಾಂನಲ್ಲಿ ಜನರಿಗೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಮತ್ತು ಹೆಚ್ಚು ಸಕ್ಕರೆ ಅಂಶವಿರುವ ಪದಾರ್ಥಗಳನ್ನು ಸೇವಿಸಬಾರದೆಂದು ಸಲಹೆ ನೀಡಿದ್ದಾರೆ.
ಸಾರ್ವಜನಿಕ ಆರೋಗ್ಯ ಜಾಗೃತಿ ಹೆಚ್ಚಿಸಲು ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮೂಲಕ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಾಮೂಹಿಕ ಪ್ರಯತ್ನ ಅಗತ್ಯವೆಂದು ಅವರು ಹೇಳಿದ್ದಾರೆ. ಯೋಗವನ್ನು ದೈಹಿಕ ಆರೋಗ್ಯ ಮತ್ತು ಒಟ್ಟಾರೆ ನಮ್ಮ ಜೀವನ ಸುಖಕರವಾಗಿರಲು ಪ್ರಮುಖ ಅಂಶವೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂದೇಶ ಸಾರಿದ್ದಾರೆ.