ಕನ್ಯಾಕುಮಾರಿ: ಇರಾನ್ ಮತ್ತು ಹತ್ತಿರದ ದ್ವೀಪಗಳಲ್ಲಿ ಸಿಲುಕಿಕೊಂಡಿರುವ ತಮಿಳುನಾಡಿನ 1,000ಕ್ಕೂ ಹೆಚ್ಚು ಮೀನುಗಾರರ ಸ್ಥಿತಿಯ ಬಗ್ಗೆ ತುರ್ತು ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ಕನ್ಯಾಕುಮಾರಿಯ ಕಾಂಗ್ರೆಸ್ ಸಂಸದ ವಿಜಯ್ ವಸಂತ್ ಅವರು ಬುಧವಾರ ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದರು.
ಸಂಸದರು ತಮ್ಮ ನಿಲುವಳಿ ಸೂಚನೆಯ ನೋಟೀಸ್ನಲ್ಲಿ, ಮೀನುಗಾರರು ತೀವ್ರ ಆಹಾರ ಕೊರತೆ ಮತ್ತು ಭೀತಿ ಎದುರಿಸುತ್ತಿದ್ದಾರೆ ಎಂದು ಸೂಚಿಸುವ ವರದಿಗಳನ್ನು ಎತ್ತಿ ತೋರಿಸಿದರು.
ಮೀನುಗಾರರ ಪರಿಸ್ಥಿತಿ ಅತ್ಯಂತ "ಭೀಕರ"ವಾಗಿದ್ದು, ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಸಂಸದರು ಹೇಳಿದರು.
"ಭಾರತದ ನಾಗರಿಕರಾಗಿರುವ ಈ ವ್ಯಕ್ತಿಗಳು ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರಿಗೆ ತುರ್ತು ಸಹಾಯದ ಅಗತ್ಯವಿದೆ" ಎಂದು ನೋಟೀಸ್ನಲ್ಲಿ ತಿಳಿಸಲಾಗಿದೆ.
ಈ ವಿಷಯದ ಬಗ್ಗೆ ಚರ್ಚಿಸಲು ಇತರ ವಿಷಯಗಳ ಕುರಿತ ಚರ್ಚೆಯನ್ನು ಸ್ಥಗಿತಗೊಳಿಸುವಂತೆ ಅವರು ಸದನವನ್ನು ಒತ್ತಾಯಿಸಿದರು ಮತ್ತು ಸರ್ಕಾರವು ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಇರಾನ್ ನಲ್ಲಿ ಸಿಲುಕಿರುವ ಮೀನುಗಾರರನ್ನು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಮತ್ತು ಅವರಿಗೆ ಆಹಾರ, ವೈದ್ಯಕೀಯ ನೆರವು ನೀಡಬೇಕು. ಅವರು ಭಾರತಕ್ಕೆ ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸಿಕೊಳ್ಳಲು ರಾಜತಾಂತ್ರಿಕ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಸಂಸದ ಒತ್ತಾಯಿಸಿದರು.