ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶದಲ್ಲಿ ಉಂಟಾಗಿರುವ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುಯಲ್ ಸಭೆ ನಡೆಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆಂಧ್ರಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು, ಛತ್ತೀಸ್ಗಢದ ವಿಷ್ಣು ದೇವ್ ಸಾಯಿ, ತೆಲಂಗಾಣದ ರೇವಂತ್ ರೆಡ್ಡಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ, ಪಂಜಾಬ್ ನ ಭಗವಂತ್ ಮಾನ್, ಮಧ್ಯಪ್ರದೇಶದ ಮೋಹನ್ ಯಾದವ್, ಜಾರ್ಖಂಡ್ ನ ಹೇಮಂತ್ ಸೊರೇನ್, ಗುಜರಾತ್ ನ ಭೂಮ್ ಪಟ್ಕರ್, ಉತ್ತರಾಖಂದ ಭೂಮ್ ಪುಷ್ಕರ್ ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡರು.
ಆದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಿಂದ ದೂರ ಉಳಿದರು. ಅವರ ಪರವಾಗಿ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಭೆಯಲ್ಲಿ ಪಾಲ್ಗೊಂಡರು.
ವರ್ಚುಯಲ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿ ಯುದ್ಧದಿಂದ ಉಂಟಾದ ಬಿಕ್ಕಟ್ಟನ್ನು ನಿಭಾಯಿಸಲು ಕೇಂದ್ರ-ರಾಜ್ಯಗಳ ಸಮನ್ವಯದ ಅಗತ್ಯವನ್ನು ಒತ್ತಿಹೇಳಿದರು. ಕೋವಿಡ್ ವೇಳೆಯಲ್ಲಿ ಸಹಕಾರ ಮತ್ತು ಸಮನ್ವಯದಿಂದ ಟೀಂ ಇಂಡಿಯಾದಂತೆ ಒಗ್ಗಟ್ಟಾಗಿ ಕೆಲಸ ಮಾಡಿದದ್ದು ನೆನಪಿಸಿಕೊಂಡ ಪ್ರಧಾನಿ, ಪ್ರಸ್ತುತದ ಸಂದರ್ಭದಲ್ಲಿ ಅದೇ ರೀತಿ ಸಮನ್ವಯದಿಂದ ಕೆಲಸ ಮಾಡಿದರೆ ಇಂಧನ ಬಿಕ್ಕಟ್ಟಿನಿಂದ ಹೊರಬರಬಹುದು ಎಂಬ ಆಶಾವಾದವನ್ನು ವ್ಯಕ್ತಪಡಿಸಿದರು.
ಇಂಧನ ಬಿಕ್ಕಟ್ಟಿನ ಮಧ್ಯೆ ಆಯಾ ರಾಜ್ಯದಲ್ಲಿ ಕಾಳಸಂತೆಯಲ್ಲಿ ಇಂಧನ ಮಾರಾಟದ ವಿರುದ್ಧ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಯುಎಸ್-ಇರಾನ್ ಯುದ್ಧ ಪ್ರಾರಂಭವಾದ ನಂತರ ಭಾರತವು ಸಾಕಷ್ಟು ಇಂಧನ ಪೂರೈಕೆಯನ್ನು ಪಡೆಯುವ ಸವಾಲನ್ನು ಎದುರಿಸುತ್ತಿದೆ. ಹಾರ್ಮಸ್ ಜಲಸಂಧಿ ಮೂಲಕ ಭಾರತದ ಇಂಧನ ಪೂರೈಕೆಯ ಪ್ರಮುಖ ಭಾಗವು ಬರುತ್ತದೆ. ಈ ಪ್ರದೇಶದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಪ್ರಮುಖ ಜಲಸಂಧಿಯನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.