ನವದೆಹಲಿ: ಬರಾಮತಿ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಮೃತಪಟ್ಟ ಹಿನ್ನೆಲೆಯಲ್ಲಿ ಕಂಡುಬಂದ ಭದ್ರತಾ ಲೋಪಗಳನ್ನು ಗಮನದಲ್ಲಿಟ್ಟುಕೊಂಡು, ನಾಗರಿಕ ವಿಮಾನಯಾನ ನಿಯಂತ್ರಣ ಮಹಾನಿರ್ದೇಶನಾಲಯ (DGCA) ಸಂಸ್ಥೆಯು ವಿವಿಐಪಿಗಳನ್ನು ಕರೆದೊಯ್ಯುವ ನಿಗದಿತವಲ್ಲದ ವಿಮಾನ ಸಂಚಾಲಕರಿಗೆ ಕಠಿಣ ಭದ್ರತಾ ನಿಯಮಗಳನ್ನು ಜಾರಿಗೊಳಿಸಿದೆ. ಅಪಾಯಕರ ಸನ್ನಿವೇಶಗಳಲ್ಲಿ ಪ್ರಯಾಣಗಳನ್ನು ಕೈಗೊಳ್ಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಪೈಲಟ್ಗಳಿಗೆ ನೀಡಲಾಗಿದೆ.
ಸಣ್ಣ ವಿಮಾನ ಇಳಿಯುವ ಮತ್ತು ಹಾರುವ ಮೈದಾನಗಳು / ಸಣ್ಣ ರನ್ವೇಗಳಿಗೆ(Airstrip) ಸ್ಥಳೀಯ ಅಧಿಕಾರಿಗಳಿಂದ ಲಿಖಿತ ಅನುಮತಿ, ವಿವಿಐಪಿ ಸಾಮಾನುಗಳ ತಪಾಸಣೆ ಹಾಗೂ ಉತ್ತಮ ವಿಮಾನಗಳ ಬಳಕೆಗಳನ್ನು DGCA ಹೊರಡಿಸಿದ ಆದೇಶದಲ್ಲಿ ಕಡ್ಡಾಯಗೊಳಿಸಲಾಗಿದೆ.
ವಿಮಾನ ಸಿಬ್ಬಂದಿಯನ್ನು ಕಾರ್ಯಾಚರಣೆ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ಅನವಶ್ಯಕ ಒತ್ತಡಕ್ಕೆ ಒಳಪಡಿಸಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ವಿಮಾನ ಯೋಜನೆ ಮತ್ತು ಕಾರ್ಯಾಚರಣೆ ವೃತ್ತಿಪರ ಹೊಣೆಗಾರಿಕೆಗಳಾಗಿದ್ದು, ಅವು ವಿಮಾನ ಸಿಬ್ಬಂದಿ ಮತ್ತು ನಿರ್ವಹಣಾ ಇಂಜಿನಿಯರ್ಗಳ ಸಮರ್ಪಕ ತೀರ್ಮಾನದಡಿ ಇರಬೇಕು. ಅವರು ಬಾಹ್ಯ ಒತ್ತಡ ಅಥವಾ ಪ್ರಭಾವದಿಂದ ಮುಕ್ತರಾಗಿರಬೇಕು ಎಂದು ತಿಳಿಸಲಾಗಿದೆ.
ಕೊನೆಯ ಕ್ಷಣದ ಕಾರ್ಯಾಚರಣಾ ಬದಲಾವಣೆಗಳನ್ನು ಸಂಸ್ಥೆಯ ನಿರ್ವಹಣೆಯ ಮೂಲಕವೇ ಕೈಗೊಳ್ಳಬೇಕು ಮತ್ತು ಕಾರ್ಯನಿರ್ವಹಣಾ ಸಿಬ್ಬಂದಿಗೆ ನೇರವಾಗಿ ಜಾರಿಗೊಳಿಸಲು ಸೂಚನೆ ನೀಡಬಾರದು ಎಂದು DGCA ಹೇಳಿದೆ.
ದೂರದ ಲ್ಯಾಂಡಿಂಗ್ ಸ್ಥಳಗಳಿಗೆ ಸಂಬಂಧಿಸಿದ ಅಪಾಯಗಳನ್ನು ತಪ್ಪಿಸಲು, ಸಂಚಾಲಕರು ಕನಿಷ್ಠ 24 ಗಂಟೆಗಳ ಮುಂಚಿತವಾಗಿ ಸೂಕ್ತ ಹೆಲಿಪ್ಯಾಡ್ ಅಥವಾ ಏರ್ಸ್ಟ್ರಿಪ್ ಲಭ್ಯತೆ ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳ ಲಿಖಿತ ದೃಢೀಕರಣವೂ ಅಗತ್ಯ. ಲ್ಯಾಂಡಿಂಗ್ ಅನುಮತಿ ಅಥವಾ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (NOC)ಗಳನ್ನು ಜಿಲ್ಲಾ ಅಧಿಕಾರಿಗಳಿಂದ ಪಡೆಯುವುದು ಕಡ್ಡಾಯ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.