ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲೇ ಪಕ್ಷವೊಂದನ್ನು ಸ್ಥಾಪಿಸಿ ಅತಿ ಕಡಿಮೆ ಅವಧಿಯಲ್ಲಿ ಅಧಿಕಾರಕ್ಕೇರಿರುವ ನಟ ವಿಜಯ್ ಗೆಲುವು ಅಚ್ಚರಿ ಮೂಡಿಸಿದೆ.
ವಿಜಯ್ ಗೆಲುವಿಗೆ ಸಿನಿಮಾ ಕ್ಷೇತ್ರದ ಗಣ್ಯರು, ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸುತ್ತಿದ್ದು, ಅಚ್ಚರಿ ಎಂಬಂತೆ ಕೈಲಾಸದಿಂದಲೂ ನಟನಿಗೆ ಮಹತ್ವದ ಸಂದೇಶ ಬಂದಿದೆ.
ತಮಿಳುನಾಡು ಮೂಲದ ನಿತ್ಯಾನಂದ ಕೈಲಾಸದಲ್ಲಿದ್ದು, ಅವರ ಶಿಷ್ಯೆ, ಮಾಜಿ ನಟಿ ರಂಜಿತಾ ದಳಪತಿ ವಿಜಯ್ಗೆ ನಿತ್ಯಾನಂದ ಸ್ವಾಮಿ ಅವರ ಸಂದೇಶ ರವಾನೆ ಮಾಡಿದ್ದಾರೆ. ನಿತ್ಯಾನಂದನ ಭಕ್ತರು ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ತತ್ವವನ್ನೇ ಅನುಸರಿಸುತ್ತಿದ್ದಾರೆ.
ನಿತ್ಯಾನಂದನ ಸ್ವಯಂ ಘೋಷಿತ ಸಾರ್ವಭೌಮ ರಾಷ್ಟ್ರವಾದ ಕೈಲಾಸದಿಂದ ಟಿವಿಕೆ ವಿಜಯ್ಗೆ ಸಂದೇಶ ಬಂದಿದೆ. ಕೈಲಾಸದ ಪ್ರಧಾನ ಮಂತ್ರಿ ನಿತ್ಯಾನಂದಮಯಿ ಸ್ವಾಮಿ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್ ಮತ್ತು ಅವರ ಪಕ್ಷದ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾರೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
'ಸರ್ವೋಚ್ಚ ಹಿಂದೂ ಧರ್ಮದ ನಿತ್ಯಾನಂದ ಪರಮಶಿವಂ ಅವರ ಆಶೀರ್ವಾದ ತಮಿಳುನಾಡಿನ ಜನರು ಮತ್ತು ನಿಮ್ಮ ಆಡಳಿತದ ಮೇಲೆ ಇರಲಿದೆ. ಎಲ್ಲರ ಕಲ್ಯಾಣ ಮತ್ತು ಸಮೃದ್ಧಿಗಾಗಿ ಸ್ಪಷ್ಟತೆ, ಶಕ್ತಿ ಮತ್ತು ಧಾರ್ಮಿಕ ನಾಯಕತ್ವದಿಂದ ಪಕ್ಷ ಮುನ್ನಡೆಯಲಿ ಎಂದು ನಿತ್ಯಾನಂದನಿಗೆ ಸಂಬಂಧಿಸಿದ ಜಾಲತಾಣವೊಂದರಲ್ಲಿ ಪೋಸ್ಟ್ ಮಾಡಲಾಗಿದೆ.
2019 ರಲ್ಲಿ ಭಾರತದಿಂದ ಪಲಾಯನ ಮಾಡಿ ದಕ್ಷಿಣ ಅಮೆರಿಕದ ಈಕ್ವೆಡಾರ್ನಲ್ಲಿ ದೊಡ್ಡ ಭೂಮಿಯನ್ನು ಖರೀದಿಸಿದ್ದ ನಿತ್ಯಾನಂದ, ಈ ಸ್ಥಳಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ಹೆಸರಿಟ್ಟಿದ್ದಾರೆ.