ನವದೆಹಲಿ: ಭಾರತ ಮತ್ತು ವಿಯೆಟ್ನಾಂ ಬುಧವಾರ ತಮ್ಮ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಉನ್ನತ್ತೀಕರಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿಯೆಟ್ನಾಂ ಅಧ್ಯಕ್ಷ ಟೋ ಲ್ಯಾಮ್ ನಡುವಿನ ಮಾತುಕತೆಗಳ ನಂತರ ರಕ್ಷಣಾ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಗಾಢಗೊಳಿಸಲು ಒಪ್ಪಿಕೊಂಡರು.
ಮಾತುಕತೆಯ ನಂತರ ಮಾತನಾಡಿದ ಮೋದಿ, ಎರಡೂ ದೇಶಗಳು ಇಂಡೋ-ಪೆಸಿಫಿಕ್ ವಿಚಾರದಲ್ಲಿ ಸಾಮಾನ್ಯ ದೃಷ್ಟಿಕೋನವನ್ನು ಹೊಂದಿವೆ. ಕಾನೂನಿನ ನಿಯಮ, ಶಾಂತಿ, ಸ್ಥಿರತೆ ಮತ್ತು ಪ್ರಾದೇಶಿಕ ಸಮೃದ್ಧಿಯನ್ನು ಎತ್ತಿಹಿಡಿಯಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಹೇಳಿದರು. ಚೀನಾದ ಹೆಚ್ಚುತ್ತಿರುವ ಮಿಲಿಟರಿ ಹಸ್ತಕ್ಷೇಪದ ನಡುವೆ ಉಭಯ ದೇಶಗಳ ನಡುವೆ ಈ ಚರ್ಚೆ ನಡೆದಿದೆ.
ಲ್ಯಾಮ್ ತಿಂಗಳ ಆರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೂರು ದಿನಗಳ ಭೇಟಿಗಾಗಿ ಮಂಗಳವಾರ ಭಾರತಕ್ಕೆ ಆಗಮಿಸಿದರು. ಭಾರತ ಮತ್ತು ವಿಯೆಟ್ನಾಂ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಉನ್ನತೀಕರಿಸಿವೆ ಎಂದು ಪ್ರಧಾನಿ ಮೋದಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಯೆಟ್ನಾಂ ಭಾರತದ ಪೂರ್ವ ನೀತಿ ಕಾಯ್ದೆಯ ಆಧಾರಸ್ತಂಭವಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿಯೂ ನಾವು ಸಾಮಾನ್ಯ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತೇವೆ ಎಂದು ಮೋದಿ ಹೇಳಿದರು.
ನಮ್ಮ ರಕ್ಷಣೆಯನ್ನು ಬಲಪಡಿಸುವ ಮೂಲಕ ಮತ್ತು ಭದ್ರತಾ ಸಹಕಾರದೊಂದಿಗೆ ಕಾನೂನಿನ ನಿಯಮ, ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತೇವೆ. ವಿಯೆಟ್ನಾಂನ ಸಹಕಾರದೊಂದಿಗೆ ಭಾರತವು ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ದೊಂದಿಗಿನ ತನ್ನ ಸಂಬಂಧಗಳನ್ನು ವಿಸ್ತರಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಆರ್ಥಿಕ ಸಂಪರ್ಕವನ್ನು ಹೆಚ್ಚಿಸಲು, ಎರಡೂ ದೇಶಗಳ ಕೇಂದ್ರ ಬ್ಯಾಂಕ್ಗಳ ನಡುವಿನ ಸಹಕಾರವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ಭಾರತದ UPI ಮತ್ತು ವಿಯೆಟ್ನಾಂನ ತ್ವರಿತ ಪಾವತಿ ವ್ಯವಸ್ಥೆಯನ್ನು ಶೀಘ್ರದಲ್ಲೇ ಸಂಪರ್ಕಿಸಲಾಗುವುದು ಎಂದು ಅವರು ತಿಳಿಸಿದರು.
ರಾಜಕೀಯ ವಿಶ್ವಾಸವನ್ನು ಗಾಢವಾಗಿಸಲು ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಲ್ಯಾಮ್ ತಮ್ಮ ಹೇಳಿಕೆಗಳಲ್ಲಿ ಹೇಳಿದರು.
ಕಳೆದ ವರ್ಷ, ಜಲಾಂತರ್ಗಾಮಿ ಹುಡುಕಾಟ, ರಕ್ಷಣೆ ಮತ್ತು ಬೆಂಬಲ ಕಾರ್ಯವಿಧಾನಕ್ಕಾಗಿ ನಿಯಮ ರೂಪಿಸಲು ಉಭಯ ರಾಷ್ಟ್ರದವರು ಒಪ್ಪಂದಕ್ಕೆ ಸಹಿ ಹಾಕಿದರು. ದ್ವಿಪಕ್ಷೀಯ ರಕ್ಷಣಾ ಉದ್ಯಮ ಸಹಯೋಗವನ್ನು ಬಲಪಡಿಸಲು ಉದ್ದೇಶ ಪತ್ರ (ಎಲ್ಒಐ) ಗೆ ಸಹಿ ಹಾಕಿದರು.