ಪಾಟ್ನಾ: ಜೆಡಿಯು ಅಧ್ಯಕ್ಷ, ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಅವರು ಕೊನೆಗೂ ಸಾಮ್ರಾಟ್ ಚೌಧರಿ ಸಂಪುಟ ಸೇರಲು ಒಪ್ಪಿಕೊಂಡಿದ್ದಾರೆ ಮತ್ತು ಗುರುವಾರ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಎರಡು ತಿಂಗಳ ಹಿಂದೆಯೇ ಜೆಡಿಯು ಸೇರಿದ 45 ವರ್ಷದ ನಾಯಕ ನಿಶಾಂತ್ ಅವರು ಪಕ್ಷದ ಹಿರಿಯ ಕಾರ್ಯಕರ್ತರ ಮನವೊಲಿಕೆಗೆ ಮಣಿದು, ಚೌಧರಿ ಸಂಪುಟ ಸೇರಲು ಒಪ್ಪಿಕೊಂಡಿದ್ದಾರೆ.
"ನಿಶಾಂತ್ ಅವರು ಪಕ್ಷಕ್ಕೆ ಸೇರಿದಾಗಿನಿಂದ, ಅವರು ಸರ್ಕಾರ ಸೇರಬೇಕೆಂಬುದು ಕಾರ್ಯಕರ್ತರ ಆಶಯವಾಗಿತ್ತು. ಕಳೆದ ತಿಂಗಳು ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಬಹುದಿತ್ತು. ಆದರೆ ಅವರು ಹಿಂಜರಿಯುತ್ತಿದ್ದರು. ಅಂತಿಮವಾಗಿ, ಅವರು ಒಪ್ಪಿಕೊಂಡಿದ್ದಾರೆ" ಎಂದು ಮೂಲಗಳು ಬುಧವಾರ ಪಿಟಿಐಗೆ ತಿಳಿಸಿವೆ.
ನಿತೀಶ್ ಕುಮಾರ್ ಅವರು ರಾಜ್ಯಸಭಾ ಸದಸ್ಯರಾಗಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಎಂಜಿನಿಯರಿಂಗ್ ಪದವೀಧರರಾದ ನಿಶಾಂತ್ ಕುಮಾರ್ ಅವರು ರಾಜಕೀಯ ಪ್ರವೇಶ ಮಾಡಿದ್ದಾರೆ.
ಕುಮಾರ್ ರಾಜೀನಾಮೆ ನೀಡಿದ ನಂತರ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ನೇತೃತ್ವದಲ್ಲಿ ಹೊಸ ಸರ್ಕಾರ ಸ್ಥಾಪನೆಯಾದಾಗ, ಜೆಡಿ(ಯು) ವರಿಷ್ಠ ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿ ಸಚಿವ ಸಂಪುಟ ಸೇರುತ್ತಾರೆ ಎಂಬ ಊಹಾಪೋಹಗಳು ಹರಡಿದ್ದವು. ಆದಾಗ್ಯೂ, ನಿಶಾಂತ್ ಅದನ್ನು ನಿರಾಕರಿಸಿದರು. ದೊಡ್ಡ ಹುದ್ದೆ ವಹಿಸಿಕೊಳ್ಳುವ ಮುನ್ನ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದ್ದರು.