ಚೆನ್ನೈ: 11 ಸ್ಥಾನಗಳ ಕೊರತೆಯಿರುವ ವಿಜಯ್ ನೇತೃತ್ವದ ಟಿವಿಕೆ ಇದೀಗ ಸರ್ಕಾರ ರಚನೆಗೆ ಬೆಂಬಲ ಕೋರಿ ಬುಧವಾರ ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಸಿಪಿಎಂ ಮತ್ತು ಸಿಪಿಐಗೆ ಔಪಚಾರಿಕವಾಗಿ ಪತ್ರ ಬರೆದಿದೆ.
ನಟ ವಿಜಯ್ ಅವರೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿರುವುದರಿಂದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ, 107 ಶಾಸಕರು ಮಾತ್ರ ಇದ್ದಾರೆ.
ಪಕ್ಷಕ್ಕೆ ಬೆಂಬಲ ನೀಡುವಂತೆ ಕೋರಿ ಟಿವಿಕೆಯಿಂದ ಪತ್ರ ಬಂದಿರುವುದನ್ನು ಅಧಿಕೃತ ವಿಸಿಕೆ ಮೂಲಗಳು ದೃಢಪಡಿಸಿವೆ.
ಆದಾಗ್ಯೂ, ಗುರುವಾರ ಚೆನ್ನೈನಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಪಕ್ಷವು ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಸಿಕೆಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಈಮಧ್ಯೆ, ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ಸಿಪಿಐ ಮತ್ತು ಸಿಪಿಎಂ ಮುಂದಿನ ಒಂದೆರಡು ದಿನಗಳಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆಯಲಿವೆ ಎನ್ನಲಾಗಿದೆ.
ಸರ್ಕಾರ ರಚಿಸಲು ಟಿವಿಕೆಗೆ ಕಾಂಗ್ರೆಸ್ ಔಪಚಾರಿಕವಾಗಿ ಬೆಂಬಲ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದ್ದು, ವಿಜಯ್ ಅವರ ಪಕ್ಷವು ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ.
ತಮಿಳುನಾಡಿನ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದರೆ, ವಿಸಿಕೆ, ಸಿಪಿಎಂ ಮತ್ತು ಸಿಪಿಐ ತಲಾ ಎರಡು ಸ್ಥಾನಗಳನ್ನು ಗೆದ್ದಿವೆ. ಟಿವಿಕೆ ಬಹುಮತವನ್ನು ತಲುಪಲು ಒಟ್ಟು 11 ಸ್ಥಾನಗಳ ಅಗತ್ಯವಿದೆ.
ಈಮಧ್ಯೆ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಇಂದು ಮಧ್ಯಾಹ್ನದ ವೇಳೆಗೆ ಚೆನ್ನೈ ತಲುಪಲಿದ್ದಾರೆ.