ನವದೆಹಲಿ: ಆಪರೇಷನ್ ಸಿಂಧೂರ್ ಭಯೋತ್ಪಾದನೆ ವಿರುದ್ಧ ಭಾರತದ ನಿಲುವು ಎಷ್ಟು ಕಠಿಣ ಮತ್ತು ನಿಖರವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ಮೇ 7, 2026 ರಂದು ಆಪರೇಷನ್ ಸಿಂದೂರ್ ನಡೆದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದಾರೆ.
ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ನಾಗರಿಕರ ರಕ್ಷಣೆಗೆ ಭಾರತ ಯಾವಾಗಲೂ ಅಚಲ ಬದ್ಧತೆಯೊಂದಿಗೆ ನಿಂತಿದೆ ಎಂದು ಒತ್ತಿಹೇಳಿದ್ದಾರೆ.ಟ
ಆಪರೇಷನ್ ಸಿಂಧೂರ್ ವೇಳೆ ಭಾರತೀಯ ಸಶಸ್ತ್ರ ಪಡೆಗಳು ತೋರಿದ ಧೈರ್ಯ, ಶಿಸ್ತು ಮತ್ತು ತಾಂತ್ರಿಕ ನಿಖರತೆ ಅಸಾಧಾರಣವಾದದ್ದು. ನಿರಪರಾಧ ಭಾರತೀಯರ ಮೇಲೆ ದಾಳಿ ಮಾಡಿದವರಿಗೆ ಸೇನೆ ತಕ್ಕ ಉತ್ತರ ನೀಡಿದ ಎಂದು ಹೇಳಿದ್ದಾರೆ.
ಈ ಕಾರ್ಯಾಚರಣೆ ಕೇವಲ ಸೈನಿಕ ಪ್ರತಿಕ್ರಿಯೆಯಷ್ಟೇ ಅಲ್ಲದೆ, ಭಾರತ ಸೇನೆಗಳ ನಡುವೆ ಹೆಚ್ಚುತ್ತಿರುವ ಸಂಯೋಜಿತ ಕಾರ್ಯಕ್ಷಮತೆ ಮತ್ತು ತಂತ್ರಜ್ಞಾನ ಆಧಾರಿತ ಸಮರ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ ಎಂದು ತಿಳಿಸಿದ್ದಾರೆ.
ಜೊತೆಗೆ, ದೇಶದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹೆಚ್ಚುತ್ತಿರುವುದು ಭಾರತದ ರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2025ರ ಮೇ 7ರಿಂದ 10ರ ನಡುವೆ ನಡೆದ ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ವಾಯುಸೇನೆ, ನೌಕಾಪಡೆ ಹಾಗೂ ಬಿಎಸ್ಎಫ್ ಪಡೆಗಳು ಸೇರಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ಶಿಬಿರಗಳು ಹಾಗೂ ಸೈನಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಿಖರ ದಾಳಿಗಳನ್ನು ನಡೆಸಿದ್ದವು.
ಈ ಕ್ರಮವನ್ನು 2025ರ ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಕೈಗೊಳ್ಳಲಾಗಿತ್ತು, ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು.
ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಭಯೋತ್ಪಾದನೆಗೆ ಯಾವುದೇ ರೀತಿಯ ರಾಜಿ ಇಲ್ಲ ಎಂಬ ಭಾರತದ ಸ್ಪಷ್ಟ ಸಂದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದೆ.
ಭವಿಷ್ಯದಲ್ಲಿಯೂ ದೇಶದ ಭದ್ರತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನಕ್ಕೆ ಭಾರತ ದೃಢ ಮತ್ತು ನಿರ್ಣಾಯಕ ಪ್ರತಿಕ್ರಿಯೆ ನೀಡಲಿದೆ ಎಂಬ ಸಂದೇಶವೂ ಇದರಿಂದ ಹೊರಹೊಮ್ಮಿದೆ.