ನವದೆಹಲಿ: ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡುವ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿರುವ AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಭಾರತ ದೇಶ 'ದೇವತೆ'ಯಲ್ಲ.. ವಂದೇ ಮಾತರಂ ಜನಗಣಮನಕ್ಕೆ ಸಮಾನವಲ್ಲ ಎಂದು ಖಾರವಾಗಿ ಹೇಳಿದ್ದಾರೆ.
‘ವಂದೇ ಮಾತರಂ’ಗೆ ರಾಷ್ಟ್ರಗೀತೆ 'ಜನಗಣಮನ'ಗೆ ಇರುವಂತೆಯೇ ಕಾನೂನುಬದ್ಧ ರಕ್ಷಣೆ ನೀಡಿದ ಕೇಂದ್ರ ಸಚಿವ ಸಂಪುಟದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಒವೈಸಿ ‘ವಂದೇ ಮಾತರಂ’ ಒಂದು ದೇವಿಯನ್ನು ಸ್ತುತಿಸುವ ಗೀತೆ ಆಗಿರುವುದರಿಂದ ಅದನ್ನು ರಾಷ್ಟ್ರಗೀತೆಯ ಸಮಾನವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಒವೈಸಿ, 'ಜನ ಗಣ ಮನ ಭಾರತ ಮತ್ತು ಅದರ ಜನರನ್ನು ಕೊಂಡಾಡುತ್ತದೆ, ಯಾವುದೇ ಒಂದು ಧರ್ಮವನ್ನು ಅಲ್ಲ. ಧರ್ಮ ರಾಷ್ಟ್ರಕ್ಕೆ ಸಮಾನವಲ್ಲ. ವಂದೇ ಮಾತರಂ ರಚಿಸಿದ ವ್ಯಕ್ತಿ ಬ್ರಿಟಿಷ್ ಆಡಳಿತದ ಪರಾನುಭೂತಿ ಹೊಂದಿದ್ದು, ಮುಸ್ಲಿಮರನ್ನು ದ್ವೇಷಿಸುತ್ತಿದ್ದರು. ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ರವೀಂದ್ರನಾಥ ಟ್ಯಾಗೋರ್ ಎಲ್ಲರೂ ‘ವಂದೇ ಮಾತರಂ’ ಅನ್ನು ತಿರಸ್ಕರಿಸಿದ್ದರು ಎಂದು ಓವೈಸಿ ಹೇಳಿದ್ದಾರೆ.
ಭಾರತ ಸಂವಿಧಾನದ ಪ್ರಸ್ತಾವನೆ “ನಾವು, ಭಾರತದ ಜನರು” ಎಂಬ ಪದಗಳಿಂದ ಆರಂಭವಾಗುತ್ತದೆ, “ಭಾರತ ಮಾತಾ” ಎಂಬುದರಿಂದ ಅಲ್ಲ. ಅದು ಚಿಂತನೆ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಪೂಜೆಯ ಸ್ವಾತಂತ್ರ್ಯವನ್ನು ಭರವಸೆ ನೀಡುತ್ತದೆ. ಸಂವಿಧಾನದ ಮೊದಲ ವಿಧಿಯಾದ Article 1ರಲ್ಲಿ “India, that is Bharat” ಅನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ. ಸಂವಿಧಾನ ಸಭೆಯಲ್ಲಿ ಕೆಲ ಸದಸ್ಯರು ಪ್ರಸ್ತಾವನೆಯನ್ನು ದೇವಿಯ ಹೆಸರಿನಲ್ಲಿ ಆರಂಭಿಸಬೇಕೆಂದು ಬಯಸಿದ್ದರು ಮತ್ತು ಅವರು ವಿಶೇಷವಾಗಿ ‘ವಂದೇ ಮಾತರಂ’ ಅನ್ನು ಉಲ್ಲೇಖಿಸಿದ್ದರು ಎಂದು ಓವೈಸಿ ಹೇಳಿದರು.
ಇನ್ನೂ ಕೆಲವರು “ದೇವರ ಹೆಸರಿನಲ್ಲಿ” ಎಂದು ಆರಂಭಿಸಬೇಕು ಮತ್ತು “ಅದರ ನಾಗರಿಕರು” ಬದಲಿಗೆ “ಆಕೆಯ ನಾಗರಿಕರು” ಬಳಸಬೇಕು ಎಂದು ಬಯಸಿದ್ದರು. ಆದರೆ ಈ ಎಲ್ಲ ತಿದ್ದುಪಡಿಗಳು ತಿರಸ್ಕೃತವಾಗಿದ್ದವು. India, that is Bharat, ಅದರ ಜನರೇ ದೇಶ. ರಾಷ್ಟ್ರವು ದೇವಿಯಲ್ಲ; ಅದು ಯಾವ ದೇವರು ಅಥವಾ ದೇವಿಯ ಹೆಸರಿನಲ್ಲಿ ನಡೆಯುವುದಿಲ್ಲ, ಮತ್ತು ಅದು ಒಂದು ದೇವರು ಅಥವಾ ದೇವಿಗೆ ಸೇರಿದ್ದಲ್ಲ,” ಎಂದು ಓವೈಸಿ ಹೇಳಿದರು.
ಒವೈಸಿಗೆ ತಿರುಗೇಟು
ಇನ್ನು ಒವೈಸಿ ಟ್ವೀಟ್ ಗಳಿಗೆ ತಿರುಗೇಟು ನೀಡಿರುವ ಎನ್ ರಾಮಚಂದ್ರ ರಾವ್, 'AIMIM ನಾಯಕತ್ವವು ಯಾವುದೇ ಸಾಂಸ್ಕೃತಿಕ ಏಕೀಕರಣವನ್ನೂ ಧಾರ್ಮಿಕ ಪ್ರತ್ಯೇಕತೆಯ ವಿರುದ್ಧದ ಬೆದರಿಕೆಯಾಗಿ ನೋಡುತ್ತದೆ. ಇದು ಓವೈಸಿಗೆ ಮಾತ್ರ ಸೀಮಿತವಲ್ಲ, ಮಹಮದ್ ಅಲಿ ಜಿನ್ನಾ ಕೂಡ ಇದೇ ದಾರಿಯನ್ನು ಅನುಸರಿಸಿದ್ದರು ಎಂದು ಹೇಳಿದರು.
ಜಿನ್ನಾ ತಮ್ಮ ರಾಜಕೀಯ ಜೀವನದ ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದಾಗ ‘ವಂದೇ ಮಾತರಂ’ಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಕಾಂಗ್ರೆಸ್ ತೊರೆದ ಬಳಿಕವೇ ಅವರ ವಿರೋಧ ಪ್ರಾರಂಭವಾಯಿತು. ಇದರಿಂದ ಏನು ಗೊತ್ತಾಗುತ್ತದೆ? ರಾಜಕೀಯ ಧಾರ್ಮಿಕ ಪ್ರತ್ಯೇಕತೆಯ ಮೇಲೆ ಅವಲಂಬಿತವಾದಾಗ, ಪ್ರತಿಯೊಂದು ನಾಗರಿಕತೆಯ ಚಿಹ್ನೆಯನ್ನೂ ಬೆದರಿಕೆಯಾಗಿ ಚಿತ್ರಿಸಲಾಗುತ್ತದೆ ಎಂದು ರಾವ್ ಟ್ವೀಟ್ ಮಾಡಿದ್ದಾರೆ.