ನ್ಯೂಯಾರ್ಕ್: ಸ್ಟ್ಯಾನ್ಫೋರ್ಡ್ ಇಂಡಿಯಾ ಕಾನ್ಫರೆನ್ಸ್ 2026ರ ಚರ್ಚೆಯಲ್ಲಿ ತಮ್ಮೊಂದಿಗೆ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ಬಿಜೆಪಿ ನಾಯಕ ಅಣ್ಣಾಮಲೈ ತೀವ್ರವಾಗಿ ಟೀಕಿಸಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಈ ಮೈತ್ರಿಯಿಂದ ಹೊರಬಂದು, ಅತಿ ದೊಡ್ಡ ಪಕ್ಷವಾಗಿದ್ದ ಟಿವಿಕೆಗೆ ತನ್ನ ಬೇಷರತ್ ಬೆಂಬಲ ಘೋಷಿಸಿತ್ತು.
ಕಾಂಗ್ರೆಸ್ ನಡೆಯನ್ನು ಡಿಎಂಕೆ ತೀವ್ರವಾಗಿ ವಿರೋಧಿಸಿ, ಲೋಕಸಭೆಯಲ್ಲಿ ಮೈತ್ರಿ ಮುರಿದುಕೊಂಡು ಆಸನ ವ್ಯವಸ್ಥೆಯನ್ನು ಬದಲಿಸುವಂತೆ ಲೋಕಸಭೆ ಸ್ಪೀಕರ್ ಗೆ ಪತ್ರ ಬರೆದಿತ್ತು. ಕಾಂಗ್ರೆಸ್-ಡಿಎಂಕೆ ಮೈತ್ರಿ ಮುರಿದಿದ್ದು ದೇಶಾದ್ಯಂತ INDI ಮೈತ್ರಿಕೂಟಕ್ಕೆ ಬಿದ್ದ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾತನಾಡಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಕಾಂಗ್ರೆಸ್ ಊಸರವಳ್ಳಿಗಿಂತ ಹೆಚ್ಚು, ವೇಗವಾಗಿ ಬಣ್ಣ ಬದಲಾಯಿಸುತ್ತದೆ ಎಂದು ಶಶಿ ತರೂರ್ ಅವರನ್ನುದ್ದೇಶಿಸಿ ಹೇಳಿದ್ದಾರೆ.
ಕಾಂಗ್ರೆಸ್, ಭಾರತದ ದಕ್ಷಿಣ ಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿಕೊಂಡು ಅವುಗಳ ಭಾಷೆಯನ್ನೇ ಮಾತನಾಡುತ್ತದೆ ಮತ್ತು ಯಾರು ಗೆಲ್ಲುತ್ತಾರೋ ಅವರೊಂದಿಗೆ ಸೇರುತ್ತೆ. ಊಸರವಳ್ಳಿಗಿಂತ ಬೇಗ ಬಣ್ಣ ಬದಲಾಯಿಸುತ್ತದೆ. ಈ ವರೆಗೂ ತಮಿಳುನಾಡಿನಲ್ಲಿ ಡಿಎಂಕೆ ಭಾಷೆ ಮಾತನಾಡುತ್ತಿದ್ದ ಕಾಂಗ್ರೆಸ್ ಈಗ ಟಿವಿಕೆ ಜೊತೆ ಸೇರಿಕೊಂಡಿದೆ. ಶಶಿ ತರೂರ್ ಒಳ್ಳೆಯ ರಾಜಕಾರಣಿ, ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿಧಿಸಿದ ಅನುಭವ ಹೊಂದಿರುವ ಅವರು ದೇಶದ ಬಗ್ಗೆ ಕಾಳಜಿ ಹೊಂದಿದ್ದಾರೆ. ಅವರ ಬಗ್ಗೆ ಗೌರವವಿದೆ. ಆದರೆ ಊಸರವಳ್ಳಿಗಿಂತ ಬೇಗ ಬಣ್ಣ ಬದಲಿಸುವ ಕಾಂಗ್ರೆಸ್ ನಂತೆಯೇ ಅವರೂ ಮಾತನಾಡಿದಾಗ ಬೇಸರವಾಗುತ್ತದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ತರೂರ್, ಅಣ್ಣಾಮಲೈ ಹೇಳಿದ್ದು' ಕಮಿಲಿಯಾನ್ ಅಂತ ಅಲ್ಲ ತಮಿಳಿಯನ್' ಅಂತ ಹೇಳಿದ್ದು ಎಂದು ಲಘು ಧಾಟಿಯಲ್ಲಿ ಉತ್ತರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.