ಚೆನ್ನೈ: ಹಲವು ದಿನಗಳ ರಾಜಕೀಯ ಹೈಡ್ರಾಮಗಳ ನಂತರ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಅವರು ಭಾನುವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ವಿಜಯ್ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧತೆ ನಡೆಸುತ್ತಿರುವಾಗಲೇ ತಮಿಳುನಾಡು ರಾಜಕೀಯ ರೋಚಕ ತಿರುವು ಪಡೆದಿದ್ದು, ಎಸ್ಪಿ ವೇಲುಮಣಿ ಮತ್ತು ಸಿವಿ ಷಣ್ಮುಗಂ ನೇತೃತ್ವದ ಎಐಎಡಿಎಂಕೆಯ ಒಂದು ಬಣ ಮಂಗಳವಾರ ಟಿವಿಕೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದೆ.
ಎಸ್ಪಿ ವೇಲುಮಣಿ ಮತ್ತು ಸಿವಿ ಷಣ್ಮುಗಂ ಬಣದ ನಾಯಕರು ಇಂದು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡಿ, ಅವರ ನೇತೃತ್ವದ ಸರ್ಕಾರಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಷಣ್ಮುಗಂ ಬಣದಲ್ಲಿ 30 ಶಾಸಕರಿದ್ದಾರೆ ಎನ್ನಲಾಗಿದೆ.
"ನಾವು ಪಕ್ಷವನ್ನು ಪುನರುಜ್ಜೀವನಗೊಳಿಸಬೇಕಾಗಿದೆ... ಅದರ ಭವಿಷ್ಯದ ಬಗ್ಗೆ ಚರ್ಚಿಸಬೇಕು,... ನಾವು ಪ್ರಧಾನ ಕಾರ್ಯದರ್ಶಿ (ಎಐಎಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ) ಅವರಿಗೆ ಕೌನ್ಸಿಲ್ ಸಭೆ ಕರೆಯುವಂತೆ ಒತ್ತಾಯಿಸುತ್ತೇವೆ" ಎಂದು ಹೇಳಿದ್ದಾರೆ.
ನಾವು ಡಿಎಂಕೆಗೆ ವಿರುದ್ಧವಾಗಿ ಈ ಪಕ್ಷವನ್ನು ಸ್ಥಾಪಿಸಿದ್ದೇವೆ. 53 ವರ್ಷಗಳ ಕಾಲ ನಮ್ಮ ರಾಜಕೀಯ ಅದಕ್ಕೆ ವಿರುದ್ಧವಾಗಿತ್ತು. ಇದನ್ನು ಗಮನಿಸಿದರೆ, ಡಿಎಂಕೆ ಬೆಂಬಲದೊಂದಿಗೆ ಎಐಎಡಿಎಂಕೆ ಸರ್ಕಾರವನ್ನು ರಚಿಸುವ ಪ್ರಸ್ತಾಪವನ್ನು ತಿರಸ್ಕರಿಸಲಾಯಿತು. ನಾವು ಅಂತಹ ಮೈತ್ರಿಯನ್ನು ರಚಿಸಿದ್ದರೆ, ಎಐಎಡಿಎಂಕೆ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ ಎಂದಿದ್ದಾರೆ.
ಚುನಾವಣೆಯ ನಂತರ ನಾವು ಯಾವುದೇ ಮೈತ್ರಿ ಇಲ್ಲದೆ ನಿಲ್ಲುತ್ತೇವೆ. ನಮ್ಮ ಪಕ್ಷವನ್ನು ಪುನರುಜ್ಜೀವನಗೊಳಿಸುವ ಮತ್ತು ಬಲಪಡಿಸುವತ್ತ ನಮ್ಮ ಗಮನ ಇರಬೇಕು. ಎಐಎಡಿಎಂಕೆ ಶಾಸಕರಾಗಿ ಆಯ್ಕೆಯಾದವರು ಟಿವಿಕೆಗೆ ತಮ್ಮ ಬೆಂಬಲ ನೀಡಲು ನಿರ್ಧರಿಸಿದರು ಮತ್ತು ಇದಕ್ಕೆ ಜಯ ಸಿಕ್ಕಿತು ಎಂದು ತಿಳಿಸಿದ್ದಾರೆ.