ಬಾಲಸೋರ್: ಕೊಲೆ ನಡೆದು ಮೂರು ದಿನಗಳಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮಹಿಳೆಯ ಶವವನ್ನು ಕುಟುಂಬಸ್ಥರು ಸೈಕಲ್ ನಲ್ಲಿಯೇ ಪೊಲೀಸ್ ಠಾಣೆಗೆ ಕೊಂಡೊಯ್ದ ಆಘಾತಕಾರಿ ಘಟನೆ ಓಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
ಮನೆಗಳ ಗಡಿ ವಿವಾದದ ಹಿನ್ನೆಲೆಯಲ್ಲಿ ಕೊಲೆಯಾದ ಮಹಿಳೆಯ ಶವವನ್ನು ಸುಮಾರು 15 ಕಿಲೋಮೀಟರ್ ದೂರದ ಒಡಿಶಾದ ಬಾಲಸೋರ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆಗೆ ಕುಟುಂಬಸ್ಥರು ಸಾಗಿಸಿದ್ದಾರೆ. ಕೊಲೆ ನಡೆದು ಮೂರು ದಿನಗಳಾದರೂ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಹತ್ಯೆಗೀಡಾದ ಮಹಿಳೆಯ ಕುಟುಂಬ ಆರೋಪಿಸಿದೆ.
ಖೈರಾ ಪೊಲೀಸ್ ವ್ಯಾಪ್ತಿಯ ಹರಿಪುರ ಗ್ರಾಮದಲ್ಲಿ ಭಾನುವಾರ ಮನೆಗಳ ಗಡಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ಕಮಲಾ ಸೇಥಿ (39) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಮೃತ ಮಹಿಳೆಯ ಮನೆ ಮೇಲ್ಛಾವಣೆ ಕೆಲಸ ನಡೆಯುತ್ತಿದ್ದಾಗ ಜಗಳ ನಡೆದಿದೆ ಎನ್ನಲಾಗಿದೆ. ಸೇಥಿ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ನೆರೆಯ ಮನೆಗಳ ಮೇಲೆ ಕೆಲವು ನಿರ್ಮಾಣ ಸಾಮಗ್ರಿಗಳು ಬಿದ್ದ ನಂತರ ಅವರು ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತಿನ ಚಕಮಕಿ ನಡೆದು ಹಿಂಸಾಚಾರಕ್ಕೆ ತಿರುಗಿದೆ.
ನೆರೆಯ ಮನೆಯ ಭರತ್ ಜೇನಾ, ಅವರ ಪತ್ನಿ ಭಾರತಿ ಜೇನಾ, ಮಗ ಮಾನಸ್ ಮತ್ತು ಇನ್ನೊಬ್ಬ ಸಂಬಂಧಿ ಗುದ್ದಲಿ ಮತ್ತು ಸಲಿಕೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಘಟನೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆ ನಡೆದು ಮೂರು ದಿನಗಳಾದ್ರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದ ನಂತರ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.
ಪೊಲೀಸರ ನಿರ್ಲಕ್ಷ್ಯವನ್ನು ಖಂಡಿಸಿ, ಕುಟುಂಬಸ್ಥರು ಮೃತ ಮಹಿಳೆಯ ಶವವನ್ನು ಸೈಕಲ್ನಲ್ಲಿ ಇರಿಸಿ ಖೈರಾ ಪೊಲೀಸ್ ಠಾಣೆಯ ಕಡೆಗೆ ಕೊಂಡೊಯ್ದು, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಖೈರಾ ಪೊಲೀಸರು ಕುಟುಂಬಕ್ಕೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಸಂಬಂಧಿಕರು ಅದನ್ನು ಬಳಸಲು ನಿರಾಕರಿಸಿದರು, ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.