ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಬೆನ್ನಲ್ಲೇ ಎಐಎಡಿಎಂಕೆ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ರೆಬೆಲ್ ಶಾಸಕರ ವಿರುದ್ಧ ಎಡಪ್ಪಾಡಿ ಪಳನಿ ಸ್ವಾಮಿ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.
ಹೌದು.. ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಬಳಿಕ ಸತತ ನಾಲ್ಕನೇ ಚುನಾವಣೆಯಲ್ಲಿ ಸೋಲುಕಂಡಿರುವ ಎಐಎಡಿಎಂಕೆಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ.
ಈಗಾಗಲೇ ಪಕ್ಷದ ಹಿರಿಯ ನಾಯಕಾರದ ಸಿವಿ ಷಣ್ಮುಗಂ, ಎಸ್ ವೇಲುಮಣಿ ನೇತೃತ್ವದ ಸುಮಾರು 30 ಮಂದಿ ಶಾಸಕರು ಬಂಡಾಯವೆದ್ದಿದ್ದು ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ.
ಮಾತ್ರವಲ್ಲದೇ ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲೂ ಸಿಎಂ ಜೋಸೆಫ್ ವಿಜಯ್ ಪರ ಮತ ಚಲಾಯಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ರೆಬೆಲ್ ಶಾಸಕರ ವಿರುದ್ಧ ಕೆಂಡಾಮಂಡಲರಾಗಿದ್ದು ಬಾಲ ಅಲ್ಲಾಡಿಸಲು ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಎಐಎಡಿಎಂಕೆ ಪಕ್ಷದ ಐಟಿ ವಿಭಾಗವು ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ತೀವ್ರ ಪದಗಳಲ್ಲಿ ಕಿಡಿಕಾರಿದ್ದು, “ತಮ್ಮದೇ ಜಿಲ್ಲೆಗಳಲ್ಲಿ ಗೆಲುವು ಸಾಧಿಸಲು ವಿಫಲರಾದವರ ಮೈತ್ರಿ” ಎಂದು ಬಂಡಾಯ ನಾಯಕರನ್ನು ಟೀಕಿಸಿದೆ. ಅಂತೆಯೇ ಪಕ್ಷದ ನಾಯಕತ್ವದ ವಿರುದ್ಧ “ಸುಳ್ಳು ಆರೋಪಗಳ ಮಳೆಯನ್ನೇ ಸುರಿಸಲಾಗುತ್ತಿದೆ” ಎಂದು ಆರೋಪಿಸಿದೆ.
ಈ ಬಂಡಾಯ ನಾಯಕರೇ ನಟ ವಿಜಯ್ ರ ಟಿವಿಕೆ ಬಳಿ ಸಚಿವಸ್ಥಾನಕ್ಕಾಗಿ ಬೇಡಿಕೊಂಡಿದ್ದಾರೆ. ಅಧಿಕಾರಕ್ಕಾಗಿ ಪಕ್ಷದ ಸಿದ್ಧಾಂತಗಳನ್ನೇ ಬದಿಗೊತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
“ಡಿಎಂಕೆಯೊಂದಿಗೆ ಮೈತ್ರಿ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡಿದ ಕೆಲವು ವದಂತಿಗಳನ್ನು ಎಳೆದು ತಂದು ಪ್ರದರ್ಶಿಸುವುದೇ ನಿಮ್ಮ ದೊಡ್ಡ ಯೋಜನೆಯಿತ್ತೇ? ಅದೇ ಮಾಧ್ಯಮಗಳು ನೀವು ಮೂವರು ಟಿವಿಕೆ ಮುಂದೆ ಹೋಗಿ ಸಚಿವ ಸ್ಥಾನಕ್ಕಾಗಿ ಕಾಲಿಗೆ ಬಿದ್ದಿದ್ದೀರಿ ಎಂದು ಹೇಳುತ್ತಿವೆ... ಅದನ್ನೂ ಒಪ್ಪುತ್ತೀರಾ?” ಎಂದು ಪೋಸ್ಟ್ನಲ್ಲಿ ಪ್ರಶ್ನಿಸಲಾಗಿದೆ.
ಮುಂದುವರಿದು, “ಸರಿ... ಆದರೆ ‘ನಾವು ಆಡಳಿತ ಪಕ್ಷದ ಮುಂದೆ ಬಾಲ ಆಡಿಸಲು ಹೋಗುತ್ತಿದ್ದೇವೆ’ ಎಂದು ಏಕೆ ಹೇಳಲಿಲ್ಲ?” ಎಂದು ತೀಕ್ಷ್ಣವಾಗಿ ಟೀಕಿಸಲಾಗಿದೆ. “ಪಕ್ಷ ಯಾವ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂದು ನಿರ್ಧರಿಸಲು ನೀವು ಯಾರು?” ಎಂದು ಪ್ರಶ್ನಿಸಿದ AIADMK, ಬಂಡಾಯ ನಾಯಕರಿಗೆ ಅವರು ಪಕ್ಷದ ಟಿಕೆಟ್ ಹಾಗೂ ಕಾರ್ಯಕರ್ತರ ಬೆಂಬಲದಿಂದಲೇ ಆಯ್ಕೆಯಾಗಿದ್ದಾರೆ ಎಂದು ನೆನಪಿಸಿದೆ.
ಎಐಎಡಿಎಂಕೆ ಪಕ್ಷವು 2006ರಿಂದ 2021ರವರೆಗೆ ತಮಿಳುನಾಡು ರಾಜಕೀಯದಲ್ಲಿ ಪ್ರಭಾವ ಸಾಧಿಸಿತ್ತು. ಪಕ್ಷದ ಐಕಾನ್ ಹಾಗೂ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಆ ಯಶಸ್ಸಿನ ಪ್ರಮುಖ ಶಕ್ತಿಯಾಗಿದ್ದರು. ಆದರೆ 2016ರ ಡಿಸೆಂಬರ್ನಲ್ಲಿ ಜಯಲಲಿತಾ ನಿಧನರಾದ ಬಳಿಕ ಪಕ್ಷದ ಪ್ರಭಾವ ಕುಸಿಯತೊಡಗಿತು.
ಸಹಾನುಭೂತಿ ಅಲೆಯ ನೆರವಿನಿಂದ 2016ರ ಚುನಾವಣೆಯಲ್ಲಿ ಗೆದ್ದಿದ್ದ AIADMK, ನಂತರ 2019 ಮತ್ತು 2024ರ ಲೋಕಸಭೆ ಚುನಾವಣೆಗಳು ಹಾಗೂ 2021ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ವಿರುದ್ಧ ಸೋಲು ಕಂಡಿತು.
ಕಳೆದ ತಿಂಗಳ ಸೋಲು ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅವರ ನಾಯಕತ್ವದ ಮೇಲೆ ಮತ್ತಷ್ಟು ಒತ್ತಡ ತಂದಿದೆ. ಶಣ್ಮುಗಂ ನಾಲ್ಕು ಚುನಾವಣಾ ಸೋಲುಗಳನ್ನು ಉಲ್ಲೇಖಿಸಿ ಪಕ್ಷವನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
“ಪಕ್ಷವನ್ನು ಪುನಶ್ಚೇತನಗೊಳಿಸಬೇಕು... ಅದರ ಭವಿಷ್ಯದ ಬಗ್ಗೆ ಚರ್ಚೆ ಮಾಡಬೇಕು,” ಎಂದು ಅವರು ಹೇಳಿದರು.
ಇದೇ ವೇಳೆ, ವಿಜಯ್ ಅವರನ್ನು ಅಧಿಕಾರಕ್ಕೆ ಬರದಂತೆ ತಡೆಯಲು AIADMK ಮತ್ತು DMK ನಡುವೆ ಅಪರೂಪದ ರಾಜಕೀಯ ಮೈತ್ರಿ ಸಾಧ್ಯತೆಗಳ ಬಗ್ಗೆ ಹರಿದಾಡಿದ ಸುದ್ದಿಗಳನ್ನೂ ಅವರು ಉಲ್ಲೇಖಿಸಿದರು. “ನಾವು ಈ ಪಕ್ಷವನ್ನು ಡಿಎಂಕೆ ವಿರುದ್ಧವೇ ಸ್ಥಾಪಿಸಿದ್ದೇವೆ. 53 ವರ್ಷಗಳ ಕಾಲ ನಮ್ಮ ರಾಜಕೀಯ ಅದರ ವಿರುದ್ಧವೇ ಇತ್ತು. ಇಂತಹ ಸಂದರ್ಭದಲ್ಲಿ ಡಿಎಂಕೆ ಬೆಂಬಲದೊಂದಿಗೆ AIADMK ಸರ್ಕಾರ ರಚಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು. ಅಂತಹ ಮೈತ್ರಿ ಮಾಡಿಕೊಂಡಿದ್ದರೆ AIADMK ಅಸ್ತಿತ್ವವೇ ಕಳೆದುಹೋಗುತ್ತಿತ್ತು,” ಎಂದು ಶಣ್ಮುಗಂ ಹೇಳಿದರು.
ಆದರೆ, AIADMK ಅನ್ನು ವಿಭಜಿಸುವ ಉದ್ದೇಶ ಇಲ್ಲ ಎಂದು ಶಣ್ಮುಗಂ ಸ್ಪಷ್ಟಪಡಿಸಿದ್ದು, ಇದರಿಂದ ಪಕ್ಷದ ಮೂಲ ನಾಯಕತ್ವದೊಂದಿಗೆ ವಿಶೇಷವಾಗಿ ಇಪಿಎಸ್ ಜೊತೆ ಮತ್ತಷ್ಟು ರಾಜಕೀಯ ಘರ್ಷಣೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಇದಕ್ಕೂ ಮೊದಲು, ವಿಜಯ್ ಹಾಗೂ ಟಿವಿಕೆಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬ ಬಂಡಾಯ ನಾಯಕರ ಬೇಡಿಕೆಯನ್ನು ಇಪಿಎಸ್ ತಿರಸ್ಕರಿಸಿದ್ದರು.