ಗುವಾಹಟಿ: ಮಣಿಪುರದಲ್ಲಿ ಬುಧವಾರ ಬೆಳಗ್ಗೆ ಚರ್ಚ್ ಅಧಿಕಾರಿಗಳ ನಿಯೋಗದ ಮೇಲೆ ಉಗ್ರರು ಹೊಂಚು ಹಾಕಿ ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ಕುಕಿ ಚರ್ಚ್ ನಾಯಕರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಡೆದಾಗ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್(ಟಿಬಿಎ) ಮತ್ತು ಯುನೈಟೆಡ್ ಬ್ಯಾಪ್ಟಿಸ್ಟ್ ಕೌನ್ಸಿಲ್ಗೆ ಸೇರಿದ ನಿಯೋಗ, ಚುರಚಂದ್ಪುರದಿಂದ ಕಾಂಗ್ಪೋಕ್ಪಿಗೆ ಅಂತರ-ಸಂಘಟನೆಯ ಚರ್ಚ್ ಸಭೆಗೆ ತೆರಳುತ್ತಿದ್ದರು.
ಮೃತರನ್ನು ಟಿಬಿಎ ಅಧ್ಯಕ್ಷ ರೆವ್ ವಿ ಸಿಟ್ಲ್ಹೌ, ರೆವ್ ವಿ ಕೈಗೌಲುನ್ ಮತ್ತು ಪಾದ್ರಿ ಪಾಗೊಲೆನ್ ಎಂದು ಗುರುತಿಸಲಾಗಿದೆ. ರೆವ್ ಸಿಟ್ಲ್ಹೌ ತಂಡವನ್ನು ಮುನ್ನಡೆಸುತ್ತಿದ್ದರು, ಇದರಲ್ಲಿ ರೆವ್ ಎಸ್ಎಂ ಹಾಪು, ರೆವ್ ಹೆಕೈ ಸಿಮ್ಟೆ, ರೆವ್ ಪಾವೊಥಾಂಗ್ ಮತ್ತು ಚಾಲಕ ಗೌಮಾಂಗ್ ಕೂಡ ಇದ್ದರು. ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.
ಉಗ್ರರ ದಾಳಿಯ ನಂತರ, ಪ್ರತಿಭಟನೆಯ ಭಾಗವಾಗಿ ಥಡೌ ಸಂಘಟನೆಗಳು ಕಾಂಗ್ಪೋಕ್ಪಿ ಜಿಲ್ಲೆಯ ಸದರ್ ಹಿಲ್ಸ್ನಲ್ಲಿ "ಸಂಪೂರ್ಣ ಬಂದ್" ಘೋಷಿಸಿವೆ.
ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್(ಕೊಹೂರ್), "ಉಗ್ರರ" ಹೊಂಚುದಾಳಿಯನ್ನು ಖಂಡಿಸಿದೆ. ಅಲ್ಲದೆ ಈ ದಾಳಿಯನ್ನು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಮ್(ಎನ್ಎಸ್ಸಿಎನ್-ಐಎಂ) ನ ಇಸಾಕ್-ಮುಯಿವಾ ಬಣವು ಜೆಲಿಯಾಂಗ್ರಾಂಗ್ ಯುನೈಟೆಡ್ ಫ್ರಂಟ್ನ ಜೊತೆಗೂಡಿ ನಡೆಸಿದೆ ಎಂದು ಆರೋಪಿಸಿದೆ.
"ಇದು ಪೂರ್ವಯೋಜಿತ ಭಯೋತ್ಪಾದನಾ ಕೃತ್ಯವಾಗಿದೆ.."ಎಂದು ಕೊಹೂರ್ ಪ್ರಕಟಣೆಯಲ್ಲಿ ತಿಳಿಸಿದೆ.