ಚೆನ್ನೈ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ತಮಿಳುನಾಡು ವಿಧಾನಸಭೆಯಲ್ಲಿ ಮಾಡಿದ "ಸನಾತನ ವಿರೋಧಿ" ಹೇಳಿಕೆಗಳನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದ್ದು, ಸದನದ ದಾಖಲೆಗಳಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದೆ. ಬೇರೆ ಯಾವುದೇ ಧರ್ಮದ ವಿರುದ್ಧ ಇದೇ ರೀತಿಯ ಹೇಳಿಕೆ ನೀಡಲು ಅವರಿಗೆ ಧೈರ್ಯವಿದೆಯೇ? ಎಂದು ಆರ್ಎಸ್ಎಸ್ ಪ್ರಶ್ನಿಸಿದೆ.
ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಾಶಗೊಳಿಸಬೇಕು ಎಂದು ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಉದಯ ನಿಧಿ ಮಂಗಳವಾರ ಹೇಳಿದ್ದರು. ಸೆಪ್ಟೆಂಬರ್ 2023 ರಲ್ಲಿಯೂ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ಅದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಸನಾತನ ಹಿಂದೂ ಧರ್ಮ ಮತ್ತು ಹಿಂದೂ ನಂಬಿಕೆಗಳಿಗೆ ಪದೇ ಪದೇ ಅವಮಾನ ಮತ್ತು ಅವಹೇಳನವು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹಿರಿಯ ವಕೀಲ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
"ಇಂತಹ ಅತ್ಯಂತ ಆಕ್ಷೇಪಾರ್ಹ ಮತ್ತು ವಿಭಜನೆ ಹೇಳಿಕೆಗಳನ್ನು ವಿಧಾನಸಭಾ ದಾಖಲೆಗಳಿಂದ ತಕ್ಷಣವೇ ತೆಗೆದುಹಾಕಬೇಕು ಮತ್ತು ಭವಿಷ್ಯದಲ್ಲಿ ಅಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ಸನಾತನ ಸಂಪ್ರದಾಯಗಳು ಮತ್ತು ಹಿಂದೂ ನಂಬಿಕೆಗಳ ಗೌರವವನ್ನು ಸರ್ಕಾರ ಬೆಂಬಲಿಸುತ್ತದೆಯೇ ಅಥವಾ ಅಂತಹ "ವಿಭಜಕ, ದುರುದ್ದೇಶಪೂರಿತ ಮತ್ತು ಹಿಂದೂ ವಿರೋಧಿ ಹೇಳಿಕೆಗಳನ್ನು ಬೆಂಬಲಿಸುತ್ತದೆಯೇ" ಎಂಬುದರ ಕುರಿತು ಸ್ಪಷ್ಟ ನಿಲುವನ್ನು ಹೊಸ ಮುಖ್ಯಮಂತ್ರಿ ವಿಜಯ್ ಸ್ಪಷ್ಟಪಡಿಸಬೇಕು ಎಂದು ಕುಮಾರ್ ಆಗ್ರಹಿಸಿದ್ದಾರೆ.
ಸನಾತನ ಸಂಪ್ರದಾಯಕ್ಕೆ ಸಂಬಂಧಿಸಿದ ರಾಜ್ಯದ ಪ್ರಸಿದ್ಧ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳಿಂದ ತಮಿಳುನಾಡು ಸರ್ಕಾರವು ಗಣನೀಯ ಆದಾಯವನ್ನು ಪಡೆದಿದೆ ಎಂದು ಅವರು ಇದೇ ವೇಳೆ ತಿಳಿಸಿದರು.