ನವದೆಹಲಿ: ಶಿಕೋಪುರ ಭೂ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರೌಸ್ ಅವೆನ್ಯೂ ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಜಾರಿ ನಿರ್ದೇಶನಾಲಯ(ED) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ, "ಸರ್ಕಾರದ ಆಜ್ಞೆಯ ಮೇರೆಗೆ" ಇಡಿ ಕಾರ್ಯನಿರ್ವಹಿಸುತ್ತಿದೆ ಎಂದು ಶುಕ್ರವಾರ ಆರೋಪಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯಕ್ಕೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾದ್ರಾ, ಜಾರಿ ನಿರ್ದೇಶನಾಲಯವನ್ನು ಟೀಕಿಸುತ್ತಲೇ ನ್ಯಾಯಾಂಗದ ಮೇಲಿನ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದರು.
ಹಿರಿಯ ವಕೀಲ ದೇವದತ್ ಕಾಮತ್, ವಕೀಲರಾದ ಪ್ರತೀಕ್ ಚಡ್ಡಾ ಮತ್ತು ಅಕ್ಷತ್ ಗುಪ್ತಾ ಅವರೊಂದಿಗೆ ನ್ಯಾಯಾಲಯದ ಮುಂದೆ ವಾದ್ರಾ ಹಾಜರಾಗಿದ್ದರು.
"ನಾನು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ನಂಬುತ್ತೇನೆ. ಜಾರಿ ನಿರ್ದೇಶನಾಲಯವನ್ನು ಸರ್ಕಾರ ನಿರ್ವಹಿಸುತ್ತಿದೆ ಎಂದು ನನಗೆ ತಿಳಿದಿದೆ ಮತ್ತು ಜಾರಿ ನಿರ್ದೇಶನಾಲಯವು ಸರ್ಕಾರದ ಸೂಚನೆಗಳ ಮೇರೆಗೆ ಮುಂದುವರಿಯುತ್ತಿದೆ. ಮುಚ್ಚಿಡಲೂ ನನ್ನ ಬಳಿ ಏನೂ ಇಲ್ಲ. ನಾನು ಯಾವಾಗಲೂ ಇಲ್ಲೇ ಇರುತ್ತೇನೆ ಮತ್ತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ" ಎಂದು ವಾದ್ರಾ ಹೇಳಿದರು.
ಕಾನೂನು ಪ್ರಕ್ರಿಯೆಗಳನ್ನು ಎದುರಿಸಲು ಸಿದ್ಧನಿದ್ದೇನೆ ಮತ್ತು ಪ್ರಕರಣ ಮುಂದುವರೆದಂತೆ ಎಲ್ಲಾ ಕಾರ್ಯವಿಧಾನದ ಅವಶ್ಯಕತೆಗಳನ್ನು ಅನುಸರಿಸುತ್ತೇನೆ ಎಂದು ವಾದ್ರಾ ತಿಳಿಸಿದರು.
ಶಿಕೋಪುರ ಭೂ ವ್ಯವಹಾರಕ್ಕೆ ಸಂಬಂಧಿಸಿದ ಪಿಎಂಎಲ್ಎ ಪ್ರಕರಣದಲ್ಲಿ ಇಡಿ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ವಾದ್ರಾ ಅವರು ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.