ಚಂಡೀಗಢ: ಆಂಧ್ರಪ್ರದೇಶ ಸರ್ಕಾರ ಇತ್ತೀಚೆಗೆ ಮೂರನೇ ಮತ್ತು ನಾಲ್ಕನೇ ಮಕ್ಕಳನ್ನು ಪಡೆಯುವ ದಂಪತಿಗೆ ನಗದು ಪ್ರೋತ್ಸಾಹ ಧನ ಘೋಷಿಸಿದ ರೀತಿಯಲ್ಲಿಯೇ ನಾಲ್ಕು ಮಕ್ಕಳನ್ನು ಪಡೆಯುವ ಯುವ ಸಿಖ್ ದಂಪತಿಗಳಿಗೆ ಆರ್ಥಿಕ ಪ್ರೋತ್ಸಾಹ ಧನ ಘೋಷಿಸುವಂತೆ ಕೋರಿ ಪಂಜಾಬ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಜಗಮೋಹನ್ ಸಿಂಗ್ ರಾಜು ಅವರು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆದಿದ್ದಾರೆ.
"ಪಂಜಾಬ್ನ ಪ್ರತಿ ಸಿಖ್ ಕುಟುಂಬವು ನಾಲ್ಕು ಮಕ್ಕಳನ್ನು ಹೊಂದಬೇಕು" ಎಂದು ಬಿಜೆಪಿ ನಾಯಕ ಕರೆ ನೀಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಾನ್ ಅವರಿಗೆ ಬರೆದ ಪತ್ರದಲ್ಲಿ ಡಾ. ಜಗಮೋಹನ್ ಸಿಂಗ್ ರಾಜು ಅವರು, "ಸಿಖ್ ಸಮುದಾಯವು ಭಾರತದಲ್ಲಿ ಸಾಂವಿಧಾನಿಕವಾಗಿ ಗುರುತಿಸಲ್ಪಟ್ಟ ಅಲ್ಪಸಂಖ್ಯಾತ ಸಮುದಾಯವಾಗಿದೆ. NFHS ದತ್ತಾಂಶದ ಪ್ರಕಾರ, ದೇಶದ ಪ್ರಮುಖ ಸಮುದಾಯವಾದ ಸಿಖ್ಖರಲ್ಲಿ ಫಲವತ್ತತೆ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಇದರ ಪರಿಣಾಮವಾಗಿ, ಸಿಖ್ ಜನಸಂಖ್ಯೆಯು ನಿರಂತರವಾಗಿ ಕುಸಿಯುತ್ತಿದೆ. ಪಂಜಾಬ್ನ ಜನಸಂಖ್ಯೆಯಲ್ಲಿ ಸಿಖ್ಖರ ಪಾಲು 1991 ರಲ್ಲಿ ಶೇ. 62.95 ರಿಂದ 2011 ರ ಜನಗಣತಿಯಲ್ಲಿ ಶೇ. 57.69 ಕ್ಕೆ ಇಳಿದಿರುವುದು ಕಳವಳಕಾರಿ ವಿಷಯವಾಗಿದೆ ಮತ್ತು ಈ ಪ್ರವೃತ್ತಿ ಇನ್ನೂ ಮುಂದುವರೆದಿದೆ" ಎಂದು ಹೇಳಿದ್ದಾರೆ.
"ಪಂಜಾಬ್ನಲ್ಲಿ ಸಿಖ್ ಸಮುದಾಯದ ಜನಸಂಖ್ಯಾ ಕುಸಿತವು ಗಂಭೀರ ಕಳವಳಕಾರಿ ವಿಷಯವಾಗಿದೆ" ಎಂದು ಹೇಳುವ ಮೂಲಕ ಪ್ರೋತ್ಸಾಹ ಧನ ನೀತಿಯನ್ನು ತಕ್ಷಣ ಜಾರಿಗೆ ತರುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
"ಇಂತಹ ಒಂದು ಹೆಜ್ಜೆ ಸಿಖ್ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಜನಸಂಖ್ಯಾ ಬಲವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದು ಭಾರತದ ಸ್ವಾತಂತ್ರ್ಯ ಹೋರಾಟ, ರಕ್ಷಣೆ, ಕೃಷಿ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಅಸಾಧಾರಣ ಕೊಡುಗೆ ನೀಡಿದ ದೇಶಭಕ್ತ ಸಮುದಾಯವಾಗಿದೆ. ಸರ್ಕಾರವು ಈ ಪ್ರಮುಖ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ" ಎಂದು ಹೇಳಿದ್ದಾರೆ.