ಮುಂಬೈ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಒಡೆತನದ ಕಟ್ಟಡಗಳನ್ನು ನೆಲಸಮ ಮಾಡಬೇಕು ಎಂದು ಮಹಾರಾಷ್ಟ್ರ ಸಚಿವ ಮತ್ತು ಶಿವಸೇನಾ ನಾಯಕ ಸಂಜಯ್ ಶಿರ್ಸತ್ ಅವರು ಮಂಗಳವಾರ ಹೇಳಿದ್ದಾರೆ.
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಲಾತೂರ್ನಲ್ಲಿ ರೇಣುಕೈ ರಸಾಯನಶಾಸ್ತ್ರ ತರಗತಿಗಳನ್ನು(ಆರ್ಸಿಸಿ) ನಡೆಸುತ್ತಿದ್ದ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ ಅವರನ್ನು ಸಿಬಿಐ ಬಂಧಿಸಿದೆ.
ಅಧಿಕಾರಿಗಳ ಪ್ರಕಾರ, ಈ ಪ್ರಕರಣದಲ್ಲಿ ಇಲ್ಲಿಯವರೆಗೆ ದೆಹಲಿ, ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ, ಲಾತೂರ್ ಮತ್ತು ಅಹಲ್ಯಾನಗರದಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿರ್ಸತ್, ನೀಟ್ ಕೋಚಿಂಗ್ ಸೆಂಟರ್ ಗಳ ಆಸ್ತಿಗಳು ಮತ್ತು ಬೃಹತ್ ಜಾಹೀರಾತುಗಳನ್ನು ತೋರಿಸಿದರು.
"ದೊಡ್ಡ ರಾಜಕಾರಣಿ ಕೂಡ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜಾಹೀರಾತುಗಳನ್ನು ನೀಡಲು ಸಾಧ್ಯವಿಲ್ಲ. ಆದರೆ ನಾವು ಒಂದು ಸಣ್ಣ ಹಳ್ಳಿಗೆ ಹೋದರೆ, ಈ ಜಾಹೀರಾತುಗಳನ್ನು ಕಾಣಬಹುದು. ಈ ಹಣ ವಿದ್ಯಾರ್ಥಿಗಳ ಶುಲ್ಕದಿಂದ ಬರುತ್ತದೆ. ಆದ್ದರಿಂದ, ನೀಟ್ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ರೆ ಸಾಕಾಗುವುದಿಲ್ಲ. ಈ ಜನರ ಸಂಪತ್ತನ್ನು ಪರಿಶೀಲಿಸಿ ವಶಪಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು.
"ಈ ಬಂಧಿತ ಆರೋಪಿಗಳ ಒಡೆತನದ ಕಟ್ಟಡಗಳನ್ನು ಕೆಡವಬೇಕು" ಎಂದು ಸಚಿವರು ಆಗ್ರಹಿಸಿದರು.
ಇನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವ ಬಗ್ಗೆ ಕೇಳಿದಾಗ, ಅದು ಸರ್ಕಾರದ ಆಂತರಿಕ ವಿಷಯ ಎಂದಷ್ಟೇ ಅವರು ಹೇಳಿದರು.
"ಆರೋಪಿಗಳ ವಿರುದ್ಧ ಕ್ರಮ ಹೆಚ್ಚು ಮುಖ್ಯ. ನೀಟ್ ಪತ್ರಿಕೆ ಸೋರಿಕೆ ಸಣ್ಣ ಪ್ರಕರಣವಲ್ಲ ಮತ್ತು ಇದು 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ವಿಷಯ. ಇನ್ನು ಮುಂದೆ ಅಂತಹ ಪ್ರಕರಣಗಳು ನಡೆಯಬಾರದು. ರಾಜೀನಾಮೆ ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬುದು ಸರ್ಕಾರ ಮತ್ತು ಪಕ್ಷದ ವಿಷಯವಾಗಿದೆ" ಎಂದು ಅವರು ಹೇಳಿದರು.