ಪಂಜಾಬ್ನ ಲುಧಿಯಾನದಲ್ಲಿ ಆರು ದಿನಗಳ ಹಿಂದೆ ಬಂದೂಕಿ ತೋರಿಸಿ ಅಪಹರಿಸಲ್ಪಟ್ಟಿದ್ದ ಪಂಜಾಬಿ ಗಾಯಕಿ ಇಂದರ್ ಕೌರ್ ಅಲಿಯಾಸ್ ಯಶಿಂದರ್ ಕೌರ್ ಶವ ನಿಲೋ ಕಾಲುವೆಯಲ್ಲಿ ಪತ್ತೆಯಾಗಿದೆ. ಶವವನ್ನು ಪ್ರಸ್ತುತ ಸಮ್ರಾಲಾ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪಂಜಾಬಿ ಗಾಯಕಿ ಇಂದರ್ಜಿತ್ ಕೌರ್ ಅವರ ಸಹೋದರ ಜೋತಿಂದರ್ ಸಿಂಗ್ ದೂರಿನ ಆಧಾರದ ಮೇರೆಗೆ ಮೇ 15ರಂದು ಮೋಗಾ ನಿವಾಸಿ ಸುಖ್ವಿಂದರ್ ಸಿಂಗ್ ಅಲಿಯಾಸ್ ಸುಖ ಮತ್ತು ಆತನ ಸಹಚರ ಕರಮ್ಜಿತ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದಾಗ್ಯೂ, ಎಫ್ಐಆರ್ ದಾಖಲಾಗಿದ್ದರೂ ಪೊಲೀಸರು ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೇ 13ರಂದು ರಾತ್ರಿ 8:30ರ ಸುಮಾರಿಗೆ ತನ್ನ ಫೋರ್ಡ್ ಫಿಗೊ ಕಾರಿನಲ್ಲಿ ದಿನಸಿ ಖರೀದಿಸಲು ಇಂದರ್ ಕೌರ್ ಮಾರುಕಟ್ಟೆಗೆ ಹೋಗಿದ್ದರು. ಆದರೆ ತಡರಾತ್ರಿಯವರೆಗೂ ಮನೆಗೆ ಹಿಂತಿರುಗಲಿಲ್ಲ. ಹೀಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆದರೆ ಆಕೆ ಪತ್ತೆಯಾಗಿರಲಿಲ್ಲ. ಪೊಲೀಸರ ತನಿಖೆಯಲ್ಲಿ ಇಂದರ್ ಕೌರ್ ಮೋಗಾ ಜಿಲ್ಲೆಯ ಭಾಲೂರ್ ಗ್ರಾಮದ ನಿವಾಸಿ ಸುಖವಿಂದರ್ ಸಿಂಗ್ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ. ಈಗ, ಶವ ಪತ್ತೆಯಾದ ನಂತರ, ಇಡೀ ಪ್ರಕರಣವು ಸಂಚಲನ ಮೂಡಿಸಿದೆ. ಪೊಲೀಸರು ಕೊಲೆ ಮತ್ತು ಅಪಹರಣದ ಕೋನದ ಬಗ್ಗೆ ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ.
ಆರೋಪಿ ಸುಖವಿಂದರ್ ಸಿಂಗ್ ತನ್ನ ಸಹೋದರಿ ಇಂದರ್ ಕೌರ್ ಳನ್ನು ಮದುವೆಯಾಗಲು ಬಯಸಿದ್ದನು. ಆದರೆ ಮದುವೆಗೆ ಇಂದರ್ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಸುಖವಿಂದರ್ ಸಿಂಗ್ ಮತ್ತು ಆತನ ಸಹಚರರು ಇಂದರ್ ಕೌರ್ ಗೆ ಗನ್ ತೋರಿಸಿ ಅಪಹರಿಸಿ ನಂತರ ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಸುಖವಿಂದರ್ ಸಿಂಗ್ ಕೆನಡಾಕ್ಕೆ ಪರಾರಿಯಾಗಿದ್ದಾನೆ ಎಂದು ಕುಟುಂಬ ಆರೋಪಿಸಿದೆ.