ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ 
ದೇಶ

'ಇಂದಿನ ರೇವಂತ್ ರೆಡ್ಡಿ ಕಾಂಗ್ರೆಸ್‌ಗೆ ನಾಳಿನ ಸುವೇಂದು ಅಧಿಕಾರಿ': ತೆಲಂಗಾಣದಲ್ಲಿ ದೊಡ್ಡ ಬದಲಾವಣೆಯ ಸುಳಿವು ನೀಡಿದ ಬಿಜೆಪಿ ಸಂಸದ!

2028-29ರಲ್ಲಿ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಅಭೂತಪೂರ್ವ ಸೋಲನ್ನು ಎದುರಿಸಲಿದೆ. 1985 ಮತ್ತು 1994 ರಲ್ಲಿ ಅವರು ಹೀನಾಯವಾಗಿ ಸೋತಿದ್ದರು ಎಂದರು.

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ 'ಸುವೇಂದು ಅಧಿಕಾರಿ'ಯಂತೆ ಆಗಬಹುದು ಎಂದು ನಿಜಾಮಾಬಾದ್ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಸೋಮವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಅದರಂತೆಯೇ ರೆಡ್ಡಿ ಕೂಡ ರಾಜಕೀಯ ಪಕ್ಷ ಬದಲಿಸಬಹುದು ಎಂದಿದ್ದಾರೆ.

ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಪಕ್ಷದ ಹಿರಿಯ ನಾಯಕರನ್ನು ನಿರ್ಲಕ್ಷಿಸಿ ರೇವಂತ್ ರೆಡ್ಡಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ನಾಯಕತ್ವ ತಪ್ಪು ಮಾಡಿದೆ ಎಂದು ಅರವಿಂದ್ ಹೇಳಿದರು.

ಟಿಎಂಸಿ ತೊರೆದ ಸುವೇಂದು ಅಧಿಕಾರಿ, ನಂತರ ಬಿಜೆಪಿಗೆ ಸೇರಿ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಮತಾ ಬ್ಯಾನರ್ಜಿ ಅವರ ಪ್ರಬಲ ವಿರೋಧಿಗಳಲ್ಲಿ ಒಬ್ಬರಾದರು. ಅದರಂತೆ ಮುಂದಿನ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಸೋಲನ್ನು ಎದುರಿಸಲಿದೆ ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.

'2028-29ರಲ್ಲಿ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಅಭೂತಪೂರ್ವ ಸೋಲನ್ನು ಎದುರಿಸಲಿದೆ. 1985 ಮತ್ತು 1994 ರಲ್ಲಿ ಅವರು ಹೀನಾಯವಾಗಿ ಸೋತಿದ್ದರು' ಎಂದು ಧರ್ಮಪುರಿ ಅರವಿಂದ್ ಹೇಳಿದರು.

ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೇವಂತ್ ರೆಡ್ಡಿ ಅವರನ್ನು ಉದ್ದೇಶಿಸಿ ನೀಡಿದ ಹೇಳಿಕೆಯ ನಂತರ ಬಿಜೆಪಿ ಸಂಸದರ ಹೇಳಿಕೆಗಳು ರಾಜಕೀಯ ಮಹತ್ವ ಪಡೆದುಕೊಂಡಿವೆ. ಪ್ರಧಾನಿ ಮೋದಿಯವರು ತೆಲಂಗಾಣ ಮುಖ್ಯಮಂತ್ರಿಗೆ 'ಆಪ್ ಜಹಾಂ ಪಹುಂಚ್ನಾ ಚಾಹ್ತೇ ಹೈ, ನಹಿ ಪಹುಂಚ್ ಪಯೇಂಗೆ... ಅಚ್ಛಾ ಹೈ ಕಿ ಮೇರೆ ಸೇ ಹಿ ಜುಡೋ' (ನೀವು ತಲುಪಲು ಬಯಸುವ ಸ್ಥಳವನ್ನು ತಲುಪಲು ಸಾಧ್ಯವಾಗದಿರಬಹುದು... ಆಗ ನೀವು ನನ್ನೊಂದಿಗೆ ಸೇರಬೇಕು) ಎಂದು ಹೇಳಿದ್ದರು. ಪ್ರಧಾನಿಯವರ ಹೇಳಿಕೆ ರಾಜಕೀಯ ವಲಯಗಳಲ್ಲಿ ತೀವ್ರ ಊಹಾಪೋಹಗಳಿಗೆ ಕಾರಣವಾಯಿತು.

ಆ ಸಮಯದಲ್ಲಿ ವೇದಿಕೆಯಲ್ಲಿದ್ದ ರೇವಂತ್ ರೆಡ್ಡಿ ಮತ್ತು ಪ್ರಧಾನಿಯವರ ಈ ಆಹ್ವಾನವನ್ನು ಕೇಳಿ ಮುಗುಳ್ನಕ್ಕರು.

ಪ್ರಧಾನಿಯವರ ಹೈದರಾಬಾದ್ ಹೇಳಿಕೆಯನ್ನು ಉಲ್ಲೇಖಿಸಿ ಧರ್ಮಪುರಿ ಅರವಿಂದ್, 'ನಾನು ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತನಾಗಿರುವುದರಿಂದ ಅದರ ಅರ್ಥವೇನೆಂದು ನನಗೆ ನಿಖರವಾಗಿ ತಿಳಿದಿಲ್ಲ. ಅಲ್ಲಿ ರಾಜಕೀಯ ಸಂಪರ್ಕವಿದೆಯೇ ಎಂದು ನನಗೆ ಖಚಿತವಿಲ್ಲ. ಸುವೇಂದು ಅಧಿಕಾರಿ ಮಾಡಿದ್ದಕ್ಕೆ ಹೋಲುವ ಏನಾದರೂ ನಡೆಯುತ್ತಿದೆಯೇ ಎಂದು ನನಗೆ ನಿಜವಾಗಿಯೂ ತಿಳಿದಿಲ್ಲ' ಎಂದರು.

ಆದಾಗ್ಯೂ, ಮುಂದಿನ ಎರಡು ವರ್ಷಗಳಲ್ಲಿ ತೆಲಂಗಾಣದಲ್ಲಿ 'ಉನ್ನತ ಮಟ್ಟದ ರಾಜಕೀಯ' ನಡೆಯಲಿದ್ದು, ಇದರಿಂದಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.

ಈ ವರ್ಷ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಆಡಳಿತ ಪಕ್ಷದ ನಡುವೆ ರಾಜಕೀಯ ಹೋರಾಟ ತೀವ್ರವಾಗಿರುವಾಗ, ಧರ್ಮಪುರಿ ಅರವಿಂದ್ ಅವರ ಹೇಳಿಕೆಗಳು ಕಾಂಗ್ರೆಸ್ ಮತ್ತು ಮುಖ್ಯಮಂತ್ರಿಯಿಂದ ಬಲವಾದ ಪ್ರತಿಕ್ರಿಯೆಗಳನ್ನು ಉಂಟುಮಾಡುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಗ್ರಾಹಕರಿಗೆ ಶಾಕ್: ಪೆಟ್ರೋಲ್, ಡೀಸೆಲ್ ದರ 5 ದಿನಗಳಲ್ಲಿ ಎರಡನೇ ಬಾರಿ ಏರಿಕೆ

ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆಗೆ ತುಮಕೂರು ಸಜ್ಜು!

ಗಲ್ಫ್ ರಾಷ್ಟ್ರಗಳ ಮನವಿ: ಇರಾನ್ ಮೇಲಿನ ದಾಳಿ ಮುಂದೂಡಿದ ಡೊನಾಲ್ಡ್ ಟ್ರಂಪ್

IPL 2026 Playoffs Scenarios: ಅಗ್ರಸ್ಥಾನದಲ್ಲಿ ಆರ್ ಸಿಬಿ, 4ನೇ ಸ್ಥಾನಕ್ಕಾಗಿ 5 ತಂಡಗಳ ನಡುವೆ ಪೈಪೋಟಿ!

ಸಾಕಾನೆ ಕಾದಾಟದಲ್ಲಿ ಸಿಲುಕಿ ಮಹಿಳೆ ಅಪ್ಪಚ್ಚಿ: ಪ್ರವಾಸಿಗರಿಗೆ ದುಬಾರೆ ಕ್ಯಾಂಪ್ ನಿರ್ಬಂಧ!

SCROLL FOR NEXT