ಲಖನೌ: ಉತ್ತರ ಪ್ರದೇಶದ ಗಾಜಿಯಾಬಾದ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ಬೆಂಬಲಿಗರು ರಾಜಮರ್ಯಾದೆ ನೀಡಿ ಹೂಮಾಲೆ ಹಾಕಿ, ಭುಜದ ಮೇಲೆ ಹೊತ್ತು ಮೆರವಣಿಗೆ ನಡೆಸಿದ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಸುಶೀಲ್ ಪ್ರಜಾಪತಿಯನ್ನು ಆತ ಬೆಂಬಲಿಗರು ಜೈಲಿನ ಹೊರಗೆ ಹಾರ ಹಾಕಿ ಭುಜದ ಮೇಲೆ ಹೊತ್ತು ಮೆರವಣಿದೆ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಅಂದಹಾಗೆ ಆರೋಪಿ ಸುಶೀಲ್ ಪ್ರಜಾಪತಿ ಹಿಂದೂ ಯುವ ವಾಹಿನಿಯ ಮಾಜಿ ಸದಸ್ಯನಾಗಿದ್ದಾನೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಅವನಿಗೆ “ಹೀರೋ ಸ್ವಾಗತ” ನೀಡಲಾಗಿದೆ.
ಬಿಡುಗಡೆಯಾದ ತಕ್ಷಣವೇ, ಬಿಳಿ ಬಟ್ಟೆ ಧರಿಸಿ ಚೆಂಡುಹೂವಿನ ಮಾಲೆಗಳಿಂದ ಅಲಂಕರಿಸಲ್ಪಟ್ಟಿದ್ದ ಆರೋಪಿಯು ರಸ್ತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ, ಆರೋಪಿಯನ್ನು ಅವನ ಬೆಂಬಲಿಗರು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು, ಘೋಷಣೆಗಳನ್ನು ಕೂಗುತ್ತಿರುವುದು ಹಾಗೂ ವಿಜಯೋತ್ಸವದಂತೆಯೇ ಮೆರವಣಿಗೆ ನಡೆಸುತ್ತಿರುವುದು ಕಾಣಿಸುತ್ತದೆ. ಸುತ್ತಮುತ್ತಲಿದ್ದವರು ಕೈಕುಲುಕುತ್ತಾ, ನಗುತ್ತಾ ಸಂಭ್ರಮಿಸುತ್ತಿರುವ ದೃಶ್ಯಗಳೂ ದಾಖಲಾಗಿವೆ.
ಕೆಲವರು ‘V’ ವಿಜಯದ ಗುರುತು ತೋರಿಸುತ್ತಿದ್ದು, ಇನ್ನು ಕೆಲವರು ತಮ್ಮ ಮೊಬೈಲ್ ಫೋನ್ಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ತೊಡಗಿರುವುದು ಕಂಡುಬಂದಿದೆ.
ಆರೋಪಿಯು ವಿದ್ಯಾರ್ಥಿನಿಯನ್ನು ವಕೀಲರ ಪರಿಚಯ ಮಾಡಿಕೊಡುವ ನೆಪದಲ್ಲಿ ಒಂದು ಫ್ಲ್ಯಾಟ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸುಮಾರು ಒಂಬತ್ತು ತಿಂಗಳ ಬಳಿಕ, ಮೇ 17ರಂದು ಆರೋಪಿಗೆ ಜಾಮೀನು ದೊರೆತಿದೆ.
ಈ ನಡುವೆ, ಆರೋಪಿಯ ಬೆಂಬಲಿಗರು ಹೂವಿನ ಮಳೆಗರೆದು ಸ್ವಾಗತಿಸಿದ ಹಾಗೂ ವಾಹನಗಳ ಕಾನ್ವಾಯ್ನಲ್ಲಿ ಮೆರವಣಿಗೆ ನಡೆಸಿದ ವೈರಲ್ ವಿಡಿಯೋಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.