ರಾಯ್ ಬರೇಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು RSS ಸಂಘಟನೆ "ದೇಶದ್ರೋಹಿಗಳು" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪ್ರತಿದಿನ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ ಮತ್ತು ಆಯ್ದ ಕೈಗಾರಿಕೋದ್ಯಮಿಗಳಿಗೆ ದೇಶದ ಹಿತಾಸಕ್ತಿಗಳನ್ನು ಮಾರಾಟ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಯ್ಬರೇಲಿ ಸಂಸದರೂ ಆಗಿರುವ ಅವರು, ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಮಾತನಾಡುತ್ತಾ ಈ ಆರೋಪ ಮಾಡಿದ್ದಾರೆ. ಸ್ಥಳೀಯ ಕ್ರಾಂತಿಕಾರಿ ವೀರ ಪಾಸಿ ಅವರನ್ನು ಸ್ಮರಿಸುವ ರಾಯ್ಬರೇಲಿಯಲ್ಲಿ ನಡೆದ 'ಬಹುಜನ ಸ್ವಾಭಿಮಾನ ಸಭೆ'ಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
"ನೀವು ಎದ್ದುನಿಂತು ಹೋರಾಡಬೇಕಾಗುತ್ತದೆ. ಆರೆಸ್ಸೆಸ್ ಕಾರ್ಯಕರ್ತರು ನಿಮ್ಮ ಮನೆಗಳಿಗೆ ಬಂದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಗ್ಗೆ ಮಾತನಾಡುವಾಗ, ಅವರ ನಾಯಕರಾದ ಮೋದಿ ಮತ್ತು ಶಾ ದೇಶದ್ರೋಹಿಗಳು ಎಂದು ನೀವು ಅವರಿಗೆ ಹೇಳಬೇಕು. ಅವರು ನಮ್ಮ ದೇಶವನ್ನು ಮಾರಾಟ ಮಾಡುವತ್ತ ಕೆಲಸ ಮಾಡಿದ್ದಾರೆ ಮತ್ತು ನಮ್ಮ ಸಂವಿಧಾನ, ಅಂಬೇಡ್ಕರ್ಜಿ ಮತ್ತು ಮಹಾತ್ಮ ಗಾಂಧಿಯವರ ಮೇಲೆ ದಾಳಿ ಮಾಡಿದ್ದಾರೆ" ಎಂದು ಗಾಂಧಿ ಸಭೆಯಲ್ಲಿ ಹೇಳಿದ್ದಾರೆ. ಬಿಜೆಪಿ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಅವರ ಹೇಳಿಕೆಗಳು "ಅರಾಜಕ ಮನಸ್ಥಿತಿಯ ಪ್ರತಿಬಿಂಬವಾಗಿದೆ ಎಂದು ಟೀಕಿಸಿದೆ.
ಪ್ರಧಾನಿಯವರು MNREGA ಅನ್ನು ದುರ್ಬಲಗೊಳಿಸುವ ಮೂಲಕ, ಜಾತಿ ಜನಗಣತಿಯನ್ನು ನಡೆಸದೆ ಮತ್ತು ಆಯ್ದ ಕೈಗಾರಿಕೋದ್ಯಮಿಗಳಿಗೆ ಅನುಕೂಲಕರವಾಗಿ "ದಿನದ 24 ಗಂಟೆಗಳ ಕಾಲ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಇಂಧನ ಬಳಕೆ, ಚಿನ್ನ ಖರೀದಿ ಮತ್ತು ವಿದೇಶ ಪ್ರಯಾಣವನ್ನು ಕಡಿತಗೊಳಿಸುವಂತೆ ಮೋದಿ ಇತ್ತೀಚೆಗೆ ಮಾಡಿದ ಮನವಿಯನ್ನು ಉಲ್ಲೇಖಿಸಿ, "ಆರ್ಥಿಕ ಬಿರುಗಾಳಿ" ನಮ್ಮ ಮೇಲೆ ಬರಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
"ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ತೀವ್ರವಾಗಿ ಏರುತ್ತದೆ. ಪೆಟ್ರೋಲ್, ಡೀಸೆಲ್, ಅನಿಲ, ಆಹಾರ ಧಾನ್ಯಗಳು, ಎಲ್ಲದರ ಬೆಲೆಗಳು ಹೆಚ್ಚಾಗುತ್ತವೆ" ಎಂದು ರಾಹುಲ್ ಗಾಂಧಿ ಹೇಳಿದರು.
ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಯುದ್ಧ ಜಾಗತಿಕ ತೈಲ ಪೂರೈಕೆಯಲ್ಲಿನ ಅಡಚಣೆಯಿಂದಾಗಿ ದೊಡ್ಡ ಆರ್ಥಿಕ ಆಘಾತಕ್ಕೆ ಕಾರಣವಾಗುತ್ತದೆ ಎಂದು ಗಾಂಧಿ ಹೇಳಿದರು.
"ನೀವು ನಿಮ್ಮ ಜೀವಿತಾವಧಿಯಲ್ಲಿ ಇಂತಹ ಹಣದುಬ್ಬರವನ್ನು ಎಂದಿಗೂ ನೋಡಿರಲಿಕ್ಕಿಲ್ಲ. ರಸಗೊಬ್ಬರ ಕೊರತೆ ರೈತರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸೀಮೆಎಣ್ಣೆ ಪೂರೈಕೆ ವ್ಯತ್ಯಯವಾಗಬಹುದು. ಆದರೆ ಆರ್ಥಿಕ ಪರಿಣಾಮವು "ಅಂಬಾನಿ ಮತ್ತು ಅದಾನಿ" ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಕೇವಲ ಸಾಮಾನ್ಯ ನಾಗರಿಕರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ಚುನಾವಣೆಗೆ ಮೊದಲು ಕೇಂದ್ರ ಸರ್ಕಾರ ಜನರಿಗೆ ಪೆಟ್ರೋಲ್ ಮತ್ತು ಅನಿಲದ ಕೊರತೆ ಇರುವುದಿಲ್ಲ ಮತ್ತು ಇಂಧನ ಬೆಲೆಗಳು ಏರಿಕೆಯಾಗುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಈಗ ಅದು ಬದಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಇದೇ ವೇಳೆ ವಾಗ್ದಾಳಿ ನಡೆಸಿದ್ದಾರೆ.
"ಇಂದು, ಪೆಟ್ರೋಲ್ ಬೆಲೆಗಳು ಏರುತ್ತಿರುವಾಗ, ಅಂಬಾನಿ ಭಾರತದ ಹೊರಗೆ ಇಂಧನವನ್ನು ರಫ್ತು ಮಾಡುತ್ತಿದ್ದಾರೆ. ಅವರು ರಷ್ಯಾದಿಂದ ತೈಲವನ್ನು ಖರೀದಿಸಿ ವಿದೇಶಕ್ಕೆ ಮಾರಾಟ ಮಾಡುತ್ತಾರೆ ಮತ್ತು ಆ ಹಣವನ್ನು ನರೇಂದ್ರ ಮೋದಿಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ" ಎಂದು ಅವರು ಆರೋಪಿಸಿದರು.
ಮುಂಬರುವ ಬಿಕ್ಕಟ್ಟಿನಿಂದ ಜನರನ್ನು ರಕ್ಷಿಸಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ಗಾಂಧಿ ಹೇಳಿದರು, ಅದರ ಪರಿಣಾಮ ಎರಡು ಮೂರು ತಿಂಗಳಲ್ಲಿ ಗೋಚರಿಸುತ್ತದೆ.
"ಕೋವಿಡ್ ಮತ್ತು ನೋಟು ರದ್ದತಿಯ ಸಮಯದಲ್ಲಿ ನರೇಂದ್ರ ಮೋದಿ ಅವರು ಮಾಡಿದ್ದರಲ್ಲಾ ಹಾಗೆಯೇ ಈಗಲೂ ತಮ್ಮ ತಪ್ಪೇನು ಇಲ್ಲ ಎಂದು ದೂರದರ್ಶನದಲ್ಲಿ ಅಳುವುದನ್ನು ನೀವು ನೋಡುತ್ತೀರಿ. ಆದರೆ ಸಂವಿಧಾನವನ್ನು ನಾಶಪಡಿಸಿದ ತಪ್ಪು ನರೇಂದ್ರ ಮೋದಿ, ಅಮಿತ್ ಶಾ ಮತ್ತು ಆರ್ಎಸ್ಎಸ್ನ ಮೇಲಿದೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ವಿದೇಶಗಳಿಗೆ ಹೋಗುವುದನ್ನು ತಡೆಯುವಂತೆ ಜನರಿಗೆ ಮನವಿ ಮಾಡಿದ ನಂತರ ಐದು ರಾಷ್ಟ್ರಗಳ ಪ್ರವಾಸಕ್ಕೆ ಹಾರಿದ್ದಕ್ಕಾಗಿ ಗಾಂಧಿ ಮೋದಿ ಅವರನ್ನು ಟೀಕಿಸಿದರು.