ಖತಿಮಾ: ಉತ್ತರಾಖಂಡ್ ನ ಚಕರ್ ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುವ ಆನೆಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ದಂತ ಮುರಿದುಕೊಂಡ ಆನೆ ಕಾಡಿನೊಳಗೆ ಓಡಿರುವ ಬಗ್ಗೆ ವರದಿಗಳಾಗಿದೆ.
ಆನೆ ಕಾರಿಡಾರ್ ಬಳಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಶಿಕ್ಷಕಿ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಗಾಯವಾಗಿದ್ದು, ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸದರು.
ಅರಣ್ಯ ಇಲಾಖೆಯ ತಂಡ ಆನೆಯ ಮುರಿದ ದಂತವನ್ನು ಸ್ಥಳದಿಂದ ಕೊಂಡೊಯ್ದು ಅದನ್ನು ಕಚೇರಿಯಲ್ಲಿ ಸುರಕ್ಷಿತವಾಗಿರಿಸಿದೆ. ಆನೆಯ ಮೇಲೆ ನಿಗಾ ಇಡಲು ಸ್ಥಳದಲ್ಲೇ ಎರಡು ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ವಾಹನಗಳನ್ನು ಎಚ್ಚರಿಕೆಯಿಂದ ಓಡಿಸಲು ಚಾಲಕರಿಗೆ ಮನವಿ ಮಾಡಲಾಗಿದೆ.
ಗಾಯಗೊಂಡ ಮಹಿಳೆ ನಿಕಿತಾ ಕಪ್ರಿ ಖತಿಮಾದ ಹಿಂದ್ ಪಬ್ಲಿಕ್ ಸ್ಕೂಲ್ನಲ್ಲಿ ಶಿಕ್ಷಕಿಯಾಗಿದ್ದು ತನ್ನ ತಾಯಿಯ ಸಂಬಂಧಿಕರ ಮನೆ ಇರುವ ತನಕ್ಪುರಕ್ಕೆ ಹೋಗಿದ್ದರು. ಮಂಗಳವಾರ ಬೆಳಿಗ್ಗೆ (ಮೇ 19) ಅವರು ತನಕ್ಪುರದಿಂದ ಸ್ಕೂಟರ್ನಲ್ಲಿ ವಾಪಸ್ಸಾಗುತ್ತಿದ್ದರು. ಏತನ್ಮಧ್ಯೆ, ಬನ್ಬಾಸಾ-ಚಕರ್ಪುರ ನಡುವಿನ ದಟ್ಟವಾದ ಕಾಡಿನಲ್ಲಿ ಆನೆ ಇದ್ದಕ್ಕಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದಿತು. ಗಾಬರಿಗೊಂಡ ಮಹಿಳೆ ಆನೆಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದ ನಂತರದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.