ನವದೆಹಲಿ: ಆರಂಭವಾದ ಆರೇ ದಿನಗಳಲ್ಲಿ ಸಾಮಾಜಿಕ ಮಾಧ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯಾದ ಕಾಕ್ರೋಚ್ ಜನತಾ ಪಾರ್ಟಿಯ ಬೆಳವಣಿಗೆ, ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಪೋಷಕರ ನಿದ್ದೆಗೆಡಿಸಿದೆ.
ಈಗ ಸಿಜೆಪಿ ಎಂದು ಜನಪ್ರಿಯವಾಗಿರುವ ಈ ಸಂಘಟನೆಯು, ಕೇವಲ ಒಂದು ವಾರದ ಹಿಂದೆ ಬೋಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ದೀಪ್ಕೆ ಸ್ಥಾಪಿಸಿದಾಗಿನಿಂದ ಇನ್ಸ್ಟಾಗ್ರಾಮ್ನಲ್ಲಿ 19 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಗಳನ್ನು ಗಳಿಸಿದೆ. ದೀಪ್ಕೆ ಅವರು ಈ ಹಿಂದೆ ಆಮ್ ಆದ್ಮಿ ಪಕ್ಷದೊಂದಿಗೆ ನಂಟು ಹೊಂದಿದ್ದರು.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ವಾಸಿಸುವ ಅವರ ಹೆತ್ತವರಾದ ಭಗವಾನ್ ಮತ್ತು ಅನಿತಾ ದೀಪ್ಕೆ ಅವರು ಗುರುವಾರ ಮರಾಠಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ್ದು, ತಮ್ಮ ಮಗ ರಾಜಕೀಯ ಪ್ರವೇಶಿಸುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಅಭಿಜೀತ್ ಅವರ ನಡೆಯ ಬಗ್ಗೆ ತಿಳಿದ ನಂತರ ಪೋಷಕರು ನಿದ್ರೆಯಿಲ್ಲ ರಾತ್ರಿಗಳನ್ನು ಕಳೆಯುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ಮಗನ ಈ ಕೆಲಸ ಆತನನ್ನು ಸಂಕಷ್ಟಕ್ಕೆ ಸಿಲುಕಿಸಬಹುದು, ಆತನನ್ನು ಬಂಧಿಸಬಹುದು' ಎಂದು ಪೋಷಕರು ಆತಂಕಗೊಂಡಿದ್ದಾರೆ.
ಈ ಘಟನೆ ನಡೆದ ನಂತರ ತಮಗೆ ನಿದ್ದೆಯೇ ಬರುತ್ತಿಲ್ಲ ಎಂದು ಸ್ಥಳೀಯ ಮಾಧ್ಯಮಗಳೊಂದಿಗೆ ಅವರು ಹೇಳಿಕೊಂಡಿದ್ದಾರೆ. ಇದೇ ವೇಳೆ, ಈ ಖಾತೆಗಳ ಹಿಂದೆ ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನವಿದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ ಎನ್ನಲಾಗಿದೆ. ಈ ವರದಿ ಆಧರಿಸಿ 'ಕಾಕ್ರೋಚ್ ಜನತಾ ಪಾರ್ಟಿ'ಯ ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿದೆ.