ನವದೆಹಲಿ: ದೇಶದ ಮಾವು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಂಬಂತೆ ಜಪಾನ್ ದೇಶ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಾವಿಗೆ ನಿಷೇಧ ಹೇರಿದೆ.
ಹೌದು.. ಈ ವರ್ಷದ ಆರಂಭದಲ್ಲಿ ಭಾರತೀಯ ಸಂಸ್ಕರಣಾ ಘಟಕಗಳಲ್ಲಿ ಕೀಟ ನಿಯಂತ್ರಣ ಕ್ರಮಗಳಲ್ಲಿ ದೋಷಗಳಿರುವುದನ್ನು ಜಪಾನ್ನ ಕ್ವಾರಂಟೈನ್ ಅಧಿಕಾರಿಗಳು ಪರಿಶೀಲನೆ ವೇಳೆ ಪತ್ತೆಹಚ್ಚಿದ ಹಿನ್ನೆಲೆ, ಭಾರತದಿಂದ ಮಾವಿನ ಹಣ್ಣಿನ ಆಮದುಗಳನ್ನು ಜಪಾನ್ ಸ್ಥಗಿತಗೊಳಿಸಿದೆ.
ಈ ಕ್ರಮವು ಬೇಸಿಗೆ ಕಾಲದ ಪ್ರಮುಖ ಮಾವಿನ ರಫ್ತು ಹಂಗಾಮಿನ ಮೇಲೆ ಪರಿಣಾಮ ಬೀರಿದ್ದು, ಅಲ್ಫೋನ್ಸೊ, ಕೇಸರ್, ಲಂಗ್ರಾ ಮತ್ತು ಬೈಗಾನಪಳ್ಳಿ ಸೇರಿದಂತೆ ಪ್ರೀಮಿಯಂ ಭಾರತೀಯ ಮಾವಿನ ತಳಿಗಳಿಗೆ ದೊಡ್ಡ ಹೊಡೆತ ನೀಡಿದೆ.
20 ವರ್ಷಗಳ ಬಳಿಕ ಮೊದಲ ನಿರ್ಬಂಧ
ಸುಮಾರು ಎರಡು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಜಪಾನ್ ಸರ್ಕಾರ ಭಾರತದ ಮಾವಿನ ಹಣ್ಣುಗಳಿಗೆ ನಿರ್ಬಂಧ ವಿಧಿಸಿದೆ. ಇದಕ್ಕೂ ಮೊದಲು ಹಣ್ಣಿನ ಕೀಟಗಳ ಸಮಸ್ಯೆಯಿಂದ ಭಾರತದಿಂದ ಮಾವಿನ ಆಮದು ಮೇಲೆ ಜಪಾನ್ ನಿಷೇಧ ಹೇರಿತ್ತು. ನಂತರ ಭಾರತ ತನ್ನ ಸಂಸ್ಕರಣಾ ವಿಧಾನಗಳನ್ನು ಬಲಪಡಿಸಿದ ಹಿನ್ನೆಲೆಯಲ್ಲಿ 2006ರಲ್ಲಿ ಆ ನಿರ್ಬಂಧವನ್ನು ತೆಗೆದುಹಾಕಲಾಗಿತ್ತು.
ಈಗ ಮತ್ತೆ ಭಾರತೀಯ ಮಾವಿನ ರಫ್ತುಗಳು ಜಪಾನ್ನ ಕಠಿಣ ಸಸ್ಯ ಆರೋಗ್ಯ ಮಾನದಂಡಗಳನ್ನು ಪೂರೈಸುತ್ತಿವೆಯೇ ಎಂಬ ಪ್ರಶ್ನೆಯನ್ನು ಜಪಾನ್ ಅಧಿಕಾರಿಗಳು ಎತ್ತಿದ್ದಾರೆ. ಜಪಾನ್ ದೇಶೀಯ ಕೃಷಿಗೆ ಅಪಾಯ ಉಂಟುಮಾಡುವ ಹಣ್ಣು ನೊಣಗಳಂತಹ ಆಕ್ರಮಣಕಾರಿ ಕೀಟಗಳ ವಿರುದ್ಧ ಕಟ್ಟುನಿಟ್ಟಿನ ಶೂನ್ಯ-ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತದೆ.
ಜಪಾನ್ ಪರಿಶೀಲಕರಿಗೆ ಕಂಡುಬಂದದ್ದು ಏನು?
ಪ್ರತಿ ಮಾವಿನ ರಫ್ತು ಹಂಗಾಮಿನ ಮೊದಲು, ಜಪಾನ್ ತನ್ನ ಕ್ವಾರಂಟೈನ್ ಅಧಿಕಾರಿಗಳನ್ನು ಭಾರತದಲ್ಲಿನ ವೇಪರ್ ಹೀಟ್ ಟ್ರೀಟ್ಮೆಂಟ್ (VHT) ಕೇಂದ್ರಗಳ ಪರಿಶೀಲನೆಗೆ ಕಳುಹಿಸುತ್ತದೆ. ಈ ಕೇಂದ್ರಗಳು ರಫ್ತಿಗೆ ಮೊದಲು ಮಾವಿನ ಹಣ್ಣುಗಳನ್ನು ಕೀಟರಹಿತಗೊಳಿಸುವ ಜವಾಬ್ದಾರಿಯನ್ನು ಹೊಂದಿವೆ.
VHT ಒಂದು ರಾಸಾಯನಿಕ ರಹಿತ ವಿಧಾನವಾಗಿದ್ದು, ನಿಯಂತ್ರಿತ ಬಿಸಿ ಮತ್ತು ತೇವಾಂಶಯುಕ್ತ ಗಾಳಿಗೆ ಮಾವಿನ ಹಣ್ಣುಗಳನ್ನು ಒಳಪಡಿಸಿ ಕೀಟಗಳು ಮತ್ತು ಹಣ್ಣು ಕೀಟಗಳ ಲಾರ್ವಾಗಳನ್ನು ನಾಶಪಡಿಸಲಾಗುತ್ತದೆ. ಭಾರತ ಮತ್ತು ಜಪಾನ್ ನಡುವಿನ ರಫ್ತು ಒಪ್ಪಂದದ ಪ್ರಕಾರ ಈ ಪ್ರಕ್ರಿಯೆ ಕಡ್ಡಾಯವಾಗಿದೆ.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶದ ರೆಹಮಾನ್ಪುರದಲ್ಲಿರುವ VHT ಕೇಂದ್ರದಲ್ಲಿ ಪರಿಶೀಲನಾ ಪ್ರಕ್ರಿಯೆ ನಡೆಯಿತು. ವರದಿಗಳ ಪ್ರಕಾರ, ಅಲ್ಲಿ ಫ್ಯೂಮಿಗೇಶನ್ ಮತ್ತು ಡಿಸ್ಇನ್ಫೆಕ್ಷನ್ ವಿಧಾನಗಳಲ್ಲಿ ಕೆಲವು ದೋಷಗಳನ್ನು ಜಪಾನ್ ಅಧಿಕಾರಿಗಳು ಗುರುತಿಸಿದ್ದಾರೆ.
ಆದರೆ, ಪರಿಶೀಲನೆ ವೇಳೆ ಕಂಡುಬಂದ ನಿಖರ ತಾಂತ್ರಿಕ ಸಮಸ್ಯೆಗಳ ಬಗ್ಗೆ ಭಾರತ ಅಥವಾ ಜಪಾನ್ ಸರ್ಕಾರಗಳು ಸಾರ್ವಜನಿಕವಾಗಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಈ ಪರಿಶೀಲನೆಯ ನಂತರ, ಜಪಾನ್ನ ಯೋಕೋಹಾಮಾ ಪ್ಲಾಂಟ್ ಪ್ರೊಟೆಕ್ಷನ್ ಅಸೋಸಿಯೇಶನ್ ಮಾರ್ಚ್ 25, 2026 ನಂತರ ನೀಡಲಾದ ತಪಾಸಣಾ ಪ್ರಮಾಣಪತ್ರ ಹೊಂದಿರುವ ಭಾರತೀಯ ಮಾವಿನ ಸರಕುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಘೋಷಿಸಿದೆ.
ಮಾವು ರಫ್ತುದಾರರಿಗೆ ದೊಡ್ಡ ಹೊಡೆತ
ಜಪಾನ್ ಭಾರತಕ್ಕೆ ಅತಿದೊಡ್ಡ ಮಾವಿನ ಮಾರುಕಟ್ಟೆಯಲ್ಲದಿದ್ದರೂ, ಅಲ್ಲಿ ಭಾರತೀಯ ಮಾವುಗಳಿಗೆ ಸಿಗುವ ಪ್ರೀಮಿಯಂ ಬೆಲೆಗಳಿಂದಾಗಿ ಈ ನಿರ್ಬಂಧ ಗಂಭೀರ ಹೊಡೆತವಾಗಿದೆ ಎಂದು ರಫ್ತುದಾರರು ಹೇಳುತ್ತಿದ್ದಾರೆ.
ಭಾರತವು ವರ್ಷಕ್ಕೆ ಸುಮಾರು 28 ಮಿಲಿಯನ್ ಮೆಟ್ರಿಕ್ ಟನ್ ಮಾವುಗಳನ್ನು ಉತ್ಪಾದಿಸುತ್ತದೆ. ಇದರಿಂದ ಭಾರತವು ವಿಶ್ವದ ಅತಿದೊಡ್ಡ ಮಾವು ಉತ್ಪಾದಕ ರಾಷ್ಟ್ರವಾಗಿದೆ. ಬಹುತೇಕ ಉತ್ಪಾದನೆ ದೇಶದಲ್ಲೇ ಬಳಕೆಯಾಗುತ್ತದೆ. ಆದರೆ ಜಪಾನ್ನಂತಹ ಉನ್ನತ ಮೌಲ್ಯದ ಮಾರುಕಟ್ಟೆಗಳಿಗೆ ರಫ್ತು ಮಾಡುವುದರಿಂದ ರೈತರು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ.
ಈ ನಿರ್ಬಂಧದಿಂದ ಭಾರತದ ಕೃಷಿ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗಳ ಮೇಲಿನ ವಿಶ್ವಾಸ ಕುಗ್ಗಬಹುದು ಹಾಗೂ ಇತರ ಆಮದು ದೇಶಗಳಲ್ಲೂ ಆತಂಕ ಮೂಡಬಹುದು ಎಂಬ ಭಯವನ್ನು ರಫ್ತುದಾರರು ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸಂಕಷ್ಟದಲ್ಲಿರುವ ರೈತರು
ಈ ನಿರ್ಬಂಧದ ಸಮಯವೂ ಮಾವು ಬೆಳೆಗಾರರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ, ವಿಶೇಷವಾಗಿ ಮಹಾರಾಷ್ಟ್ರದ ಅಲ್ಫೋನ್ಸೊ ಬೆಲ್ಟ್ ಪ್ರದೇಶದಲ್ಲಿ. ಎಲ್ ನಿನೊ ಹವಾಮಾನ ಪರಿಣಾಮದಿಂದ ಉಂಟಾದ ತೀವ್ರ ಬಿಸಿಲು ಮತ್ತು ಅಸ್ಥಿರ ಹವಾಮಾನದಿಂದಾಗಿ ಈ ವರ್ಷ ಭಾರೀ ಬೆಳೆ ನಷ್ಟವಾಗಿದೆ ಎಂದು ರೈತರು ಈಗಾಗಲೇ ವರದಿ ಮಾಡಿದ್ದಾರೆ.
ಕೆಲವು ಸರ್ಕಾರಿ ಸಮೀಕ್ಷೆಗಳ ಪ್ರಕಾರ, ಕೆಲ ಪ್ರದೇಶಗಳಲ್ಲಿ 85-90 ಶೇಕಡಾವರೆಗೆ ಬೆಳೆ ಹಾನಿಯಾಗಿದೆ. ಉತ್ಪಾದನೆ ಈಗಾಗಲೇ ತೀವ್ರವಾಗಿ ಕುಸಿದಿರುವ ಸಂದರ್ಭದಲ್ಲಿ, ಜಪಾನ್ ವಿಧಿಸಿರುವ ಈ ನಿಷೇಧವು ಮಾವಿನ ವ್ಯಾಪಾರದ ಅತ್ಯಂತ ಪ್ರಮುಖ ಹಂಗಾಮಿನಲ್ಲಿ ರೈತರು ಮತ್ತು ರಫ್ತುದಾರರ ಆದಾಯಕ್ಕೆ ಮತ್ತಷ್ಟು ಹೊಡೆತ ನೀಡಲಿದೆ ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.