ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗಾಯಿಯ 47 ವರ್ಷದ ತಾಯಿ ರಮಾಬಾಯಿ ರಣವೀರ್ ಅವರು ತಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ನಗದು ಬಹುಮಾನ ಗಳಿಸುವ ಸದುದ್ದೇಶದಿಂದ ಸೀರೆಯಲ್ಲೇ ಬರಿಗಾಲಿನಲ್ಲಿ 3 ಕಿ.ಮೀ ಓಡಿ ಸ್ಥಳೀಯ ಮ್ಯಾರಥಾನ್ ಗೆದ್ದು ಸುದ್ದಿಯಾಗಿದ್ದಾರೆ.
ಪಟ್ಟಣದಲ್ಲಿ ನಡೆದ ಶಿಕ್ಷಣ ಸಂಕೀರ್ಣವೊಂದರ ಮೈಲಿಗಲ್ಲು ಆಚರಣೆಯ ಅಂಗವಾಗಿ ಸ್ಥಳೀಯವಾಗಿ ‘ಅಮೃತ್ ದೌಡ್’ ಎಂದು ಕರೆಯಲಾಗುವ ಈ ಓಟವನ್ನು ಆಯೋಜಿಸಲಾಗಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಚೌಕ್ನಿಂದ ಭಾಗ್ಯನಗರ ಚೌಕ್ವರೆಗೆ ಓಟದ ಮಾರ್ಗವಿದ್ದು, ವಿವಿಧ ವಯೋಮಾನದವರು ಇದರಲ್ಲಿ ಭಾಗವಹಿಸಿದ್ದರು.
ರಮಾಬಾಯಿ ರಣವೀರ್ ಅವರು ಆರಂಭದಲ್ಲಿ ಸೀರೆ ಹಾಗೂ ಚಪ್ಪಲಿ ಧರಿಸಿ ಓಟ ಆರಂಭಿಸಿದ್ದರು. ಆದರೆ ಓಡುತ್ತಿದ್ದಂತೆ ಚಪ್ಪಲಿ ರಸ್ತೆಯಲ್ಲಿ ಜಾರಲಾರಂಭಿಸಿ ವೇಗ ಕಾಯ್ದುಕೊಳ್ಳಲು ತೊಂದರೆಯಾಯಿತು. ಆದರೂ ಹಿಮ್ಮೆಟ್ಟದ ಅವರು ಚಪ್ಪಲಿಯನ್ನು ಕಳಚಿ ಬರಿಗಾಲಿನಲ್ಲೇ ಓಟ ಮುಂದುವರಿಸಿದರು.
ಟ್ರ್ಯಾಕ್ಸೂಟ್ ಧರಿಸಿ, ವೃತ್ತಿಪರ ಓಟದ ಶೂಗಳನ್ನು ಹಾಕಿಕೊಂಡಿದ್ದ ಕಿರಿಯ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿದ ರಣವೀರ್ ಅವರು ತಮ್ಮ ವೇಗವನ್ನು ಕಾಯ್ದುಕೊಂಡು ಅಂತಿಮವಾಗಿ ಎಲ್ಲರಿಗಿಂತ ಮೊದಲು ಗುರಿ ತಲುಪಿದರು. ಅವರ ಅನಿರೀಕ್ಷಿತ ಗೆಲುವು ಪ್ರೇಕ್ಷಕರು ಹಾಗೂ ಇತರ ಸ್ಪರ್ಧಿಗಳ ಗಮನ ಮತ್ತು ಮೆಚ್ಚುಗೆಗೆ ಪಾತ್ರವಾಯಿತು.
ರಣವೀರ್ ಅವರಿಗೆ ಈ ಓಟ ಕೇವಲ ಗೆಲುವಿಗಾಗಿ ಆಗಿರಲಿಲ್ಲ. ನಗದು ಬಹುಮಾನ ಪಡೆಯುವ ಅವಕಾಶವೇ ಅವರಿಗೆ ಪ್ರೇರಣೆಯಾಗಿತ್ತು. ಆ ಹಣವನ್ನು ತಮ್ಮ ಪುತ್ರಿಯರ ಶಿಕ್ಷಣ ಹಾಗೂ ಪುಸ್ತಕಗಳಿಗಾಗಿ ಬಳಸಲು ಅವರು ನಿರ್ಧರಿಸಿದ್ದರು.
ಅಧಿಕೃತ ಬಹುಮಾನ ಮೊತ್ತ 3,000 ಎಂದಿದ್ದರೂ, ರಣವೀರ್ ಅವರಿಗೆ 5,000 ರೂಪಾಯಿ ನೀಡಲಾಯಿತು. ಈ ಹಣದಲ್ಲಿ ಹೆಣ್ಣುಮಕ್ಕಳ ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸುವುದಾಗಿ ಅವರು ತಿಳಿಸಿದ್ದಾರೆ.
3,000 ಬದಲು 5,000 ನೀಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನ್ನ ಮಗಳು ಪೂಜಾಗಾಗಿ ನೋಟ್ಬುಕ್ಗಳು ಮತ್ತು ಪೆನ್ನುಗಳನ್ನು ಖರೀದಿಸಿದ್ದೇನೆ. ಉಳಿದ ಹಣವನ್ನು ಆರತಿಯ ಶಿಕ್ಷಣಕ್ಕೆ ಬಳಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.